ಕರ್ನಾಟಕ

karnataka

By

Published : Apr 18, 2023, 6:09 PM IST

ETV Bharat / bharat

ಅತೀಕ್ ಅಹ್ಮದ್​ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್​ ಸ್ಫೋಟ

ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಕತ್ರಾ ಪ್ರದೇಶದಲ್ಲಿರುವ ಅತೀಕ್ ಅಹ್ಮದ್​ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್​ ಸ್ಫೋಟಿಸಲಾಗಿದೆ.

Crude bomb hurled near residence of Atiq's lawyer: Police
ಅತೀಕ್ ಅಹ್ಮದ್​ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್​ ಸ್ಫೋಟ

ಪ್ರಯಾಗರಾಜ್ (ಉತ್ತರ ಪ್ರದೇಶ): ಇತ್ತೀಚಿಗೆ ಗುಂಡಿನ ದಾಳಿಯಲ್ಲಿ ಹತ್ಯಯಾದ ಗ್ಯಾಂಗ್​ಸ್ಟರ್​ ಕಂ ರಾಜಕಾರಣಿ ಅತೀಕ್ ಅಹ್ಮದ್​ ಪರ ವಕೀಲರೊಬ್ಬರ ನಿವಾಸದ ಬಳಿಯ ಕಚ್ಚಾ ಬಾಂಬ್​ ಸ್ಫೋಟಿಸಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಕತ್ರಾ ಪ್ರದೇಶದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅತೀಕ್ ಪರ ವಕೀಲ ದಯಾಶಂಕರ್ ಮಿಶ್ರಾ ಮನೆಯ ಸಮೀಪ ಕಚ್ಚಾ ಬಾಂಬ್ ಎಸೆಯಲಾಗಿದೆ. ಆದರೆ, ವಕೀಲರನ್ನು ಗುರಿಯಾಗಿಸಿಕೊಂಡು ಬಾಂಬ್​ ಸ್ಫೋಟಿಸಿಲ್ಲ. ಬದಲಿಗೆ ಇಬ್ಬರು ಯುವಕರ ನಡುವಿನ ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಲಾಗಿದೆ ಎಂದು ಕರ್ನಲ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಮ್​ ಮೋಹನ್​ ರಾಯ್​ ತಿಳಿಸಿದ್ದಾರೆ. ಆದರೆ, ಇದು ಜನತೆಯನ್ನು ಭಯಭೀತರಾಗಿಸುವ ಮತ್ತು ಭಯೋತ್ಪಾದನೆಯನ್ನು ಸೃಷ್ಟಿಸುವ ಪ್ರಯತ್ನ ಎಂದು ವಕೀಲ ಮಿಶ್ರಾ ದೂರಿದ್ದಾರೆ.

ಇದನ್ನೂ ಓದಿ:ಗ್ಯಾಂಗ್​ಸ್ಟರ್​ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್​ಗೆ​ ಗುಂಡಿಕ್ಕಿ ಹತ್ಯೆ

"ನಾನು ಇಂದು ನ್ಯಾಯಾಲಯದಲ್ಲಿದ್ದೆ. ಇದರ ನಡುವೆ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ನನ್ನ ಮಗ ನನಗೆ ತಿಳಿಸಿದ. ಕಾರಣ ನಾನು ಮನೆಗೆ ಧಾವಿಸಿದೆ. ನನ್ನನ್ನು ಹೆದರಿಸಲು, ಭಯೋತ್ಪಾದನೆಯನ್ನು ಸೃಷ್ಟಿಸಲು ಇದನ್ನು ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದೊಂದು ದೊಡ್ಡ ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಪೊಲೀಸರ ಕರ್ತವ್ಯವಾಗಿದೆ'' ಎಂದು ದಯಾಶಂಕರ್ ಮಿಶ್ರಾ ಒತ್ತಾಯಿಸಿದ್ದಾರೆ.

ಅಲ್ಲದೇ, ''ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ನನ್ನ ಮಗಳು ಮತ್ತು ಸ್ಥಳೀಯರು ನೋಡಿದ್ದಾರೆ. ಮೂರು ಬಾಂಬ್‌ಗಳನ್ನು ಎಸೆಯಲಾಗಿದೆ'' ಎಂದೂ ಮಿಶ್ರಾ ಹೇಳಿದ್ದಾರೆ. ಮತ್ತೊಂದೆಡೆ, "ಕತ್ರಾ ಪ್ರದೇಶದಲ್ಲಿ ಇಬ್ಬರು ಯುವಕರ ವೈಯಕ್ತಿಕ ದ್ವೇಷದ ಕಾರಣ ಕಚ್ಚಾ ಬಾಂಬ್ ಎಸೆಯಲಾಗಿದೆ. ಆದರೆ, ಕಾಕತಾಳೀಯ ಎಂಬಂತೆ ಅತೀಕ್ ಅಹ್ಮದ್ ಪರ ವಕೀಲರ ಮನೆಯ ಬಳಿ ಈ ಘಟನೆ ಸಂಭವಿಸಿದೆ'' ಎಂದು ಎಸ್‌ಎಚ್‌ಒ ರಾಮ್​ ಮೋಹನ್​ ರಾಯ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಡಾನ್​ ಅತೀಕ್​ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್​ಗಳಿಂದ ಹತ್ಯೆ

''ಶ್ವಾನದಳ ಮತ್ತು ವಿಧಿವಿಜ್ಞಾನ ತಜ್ಞರ ಸಮೇತವಾಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇಡೀ ಘಟನೆ ಬಗ್ಗೆ ಹೆಚ್ಚಿನ ಕೈಗೊಳ್ಳಲಾಗಿದೆ'' ಎಂದು ಅವರು ಮಾಹಿತಿ ಮಾಡಿದ್ದಾರೆ. ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್​ನನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪತ್ರಕರ್ತರ ವೇಷದಲ್ಲಿ ಬಂದು ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಇಬ್ಬರನ್ನೂ ಕೊಲೆ ಮಾಡಿದ್ದರು.

ಇಂಟರ್​​ನೆಟ್​ ಸೇವೆ ಪುನರಾರಂಭ:ಕುಖ್ಯಾತಿ ದರೋಡೆಕೋರ ಹಾಗೂ ಪ್ರಭಾವಿ ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್​ ಹತ್ಯೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುನ್ನೆಚ್ಚರಿಕೆಯಾಗಿ ಪ್ರಯಾಗ್‌ರಾಜ್‌ನಲ್ಲಿ ಭಾನುವಾರದಿಂದ ಇಂಟರ್​​ನೆಟ್​ ಸೇವೆ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಕಾಲ ನಂತರ ಮಂಗಳವಾರ ಇಂಟರ್​​ನೆಟ್​ ಸೇವೆ ಪುನರಾರಂಭಿಸಲಾಗಿದೆ.

ಈ ಬಗ್ಗೆ ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ಮಾತನಾಡಿ, ''ಕಳೆದ ರಾತ್ರಿಯೇ ಇಂಟರ್​ನೆಟ್ ಸೇವೆಗಳು ಪುನರಾರಂಭಗೊಂಡಿವೆ. ಮಾರುಕಟ್ಟೆಗಳು, ಶಾಲೆಗಳು ಎಲ್ಲವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ನಿನ್ನೆಯೂ ಶಾಲೆಗಳು ತೆರೆದಿದ್ದವು'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮೋದಿ ವಿರುದ್ಧ ಸ್ಪರ್ಧಿಸಿ 855 ವೋಟ್‌ ಪಡೆದಿದ್ದ ಅತೀಕ್ ಅಹ್ಮದ್; ಈತನ ಮೇಲಿತ್ತು 101 ಪ್ರಕರಣ!

ABOUT THE AUTHOR

...view details