ಕರ್ನಾಟಕ

karnataka

ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ : ಕೆರಳಿದ ಕುತೂಹಲ

By

Published : May 1, 2021, 10:57 PM IST

Updated : May 1, 2021, 11:31 PM IST

ಕೋವಿಡ್​ 2ನೇ ಅಲೆಯ ಅಬ್ಬರದ ನಡುವೆಯು ಪಂಚರಾಜ್ಯಗಳು ಚುನಾವಣೆ ಮುಗಿಸಿದ್ದು, ಅಸ್ಸೋಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆಯಲಿದೆ. ಬಿಜೆಪಿ ಈ ಬಾರಿ ಹೆಚ್ಚಿನ ರಾಜ್ಯಗಳ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಮತ್ತು ಕಾಂಗ್ರೆಸ್ ಕಳೆದುಹೋದ ತನ್ನ ಕ್ಷೇತ್ರಗಳನ್ನು ಮರಳಿ ಪಡೆಯಲು ತನ್ನ ಮೈತ್ರಿ ಪಕ್ಷಗಳೊಂದಿಗೆ ಸೇರಿ ಹರಸಾಹಸ ಪಟ್ಟಿದು ಈ ಎಲ್ಲಾ ಪ್ರಯತ್ನಗಳ ಫಲ ಏನೆಂಬುದು ಇಂದು ಗೊತ್ತಾಗಲಿದೆ..

ಪಂಚರಾಜ್ಯಗಳ ಚುನಾವಣಾ ಫಲಿತಾಂ
ಪಂಚರಾಜ್ಯಗಳ ಚುನಾವಣಾ ಫಲಿತಾಂ

ನವದೆಹಲಿ : ಕೊರೊನಾ ಸಂಕಷ್ಟ ಕಾಲದಲ್ಲೇ ನಡೆದಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಮರವೆಂದೇ ಪರಿಗಣಿಸಲ್ಪಟ್ಟಿರುವ ಪಶ್ಚಿಮ ಬಂಗಾಳದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಮಾರ್ಚ್ 27 ಮತ್ತು ಏಪ್ರಿಲ್ 29ರ ನಡುವೆ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ, ಅಸ್ಸೋಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು 6ರಂದು ಮೂರು ಹಂತಗಳಲ್ಲಿ ಮತದಾನ ನಡೆದರೆ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಅಸ್ಸೋಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಭಾನುವಾರ ಮತ ಎಣಿಕೆ ನಡೆಯಲಿದೆ.

ಬಿಜೆಪಿ ಈ ಬಾರಿ ಹೆಚ್ಚಿನ ರಾಜ್ಯಗಳ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಮತ್ತು ಕಾಂಗ್ರೆಸ್ ಕಳೆದುಹೋದ ತನ್ನ ಕ್ಷೇತ್ರಗಳನ್ನು ಮರಳಿ ಪಡೆಯಲು ತನ್ನ ಮೈತ್ರಿ ಪಕ್ಷಗಳೊಂದಿಗೆ ಸೇರಿ ಪ್ರಯತ್ನಿಸುತ್ತಿದೆ.

2016ರಲ್ಲಿ 822 ವಿಧಾನಸಭಾ ಕ್ಷೇತ್ರಗಳ ಮತಎಣಿಕೆಗೆ 1,002 ವೋಟ್​ ಕೌಂಟಿಂಗ್​ ಕೇಂದ್ರಗಳಿದ್ದವು. ಆದರೆ, ಈ ಬಾರಿ ಕೋವಿಡ್​ ನಿಯಮ ಪಾಲಿಸಬೇಕಾಗಿರುವ ಕಾರಣ ಒಟ್ಟು 2,364 ಎಣಿಕೆ ಕೇಂದ್ರಗಳಿರಲಿದ್ದು, ಕೋವಿಡ್​ ಮಾರ್ಗಸೂಚಿಯ ಕಾರಣಕ್ಕಾಗಿ 200 ಪ್ರತಿಶತಕ್ಕಿಂತಲೂ ಹೆಚ್ಚಿನ ಹೆಚ್ಚಳವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಫಲಿತಾಂಶ

ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಕನಿಷ್ಠ 15 ಬಾರಿ ಸ್ಯಾನಿಟೈಸೇಶನ್ ನಡೆಸಲಾಗುವುದು, ಸಾಮಾಜಿಕ ಅಂತರ ಪಾಲನೆ ಜೊತೆಗೆ ಜನರು ಗುಂಪು ಸೇರುವುದು ನಿಷೇಧ ಸೇರಿದಂತೆ ಇತರ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಪಶ್ಚಿಮ ಬಂಗಾಳದಲ್ಲಿ ದೀದಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿ ನಡುವೆ ಭಾರಿ ಪೈಪೋಟಿ ಇರಲಿದೆ ಎಂದು ಎಕ್ಸಿಟ್​ ಪೋಲ್​ ಅಥವಾ ಚುನಾವಣಾ ಪೂರ್ವ ಸಮೀಕ್ಷೆಗಳು ಈಗಾಗಲೇ ತಿಳಿಸಿವೆ.

ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ತಡರಾತ್ರಿರೆಗೂ ಮುಂದುವರಿಯುತ್ತದೆ ಎನ್ನಲಾಗಿದೆ. 1,100 ಮತ ಎಣಿಕೆಯ ಕೇಂದ್ರ ವೀಕ್ಷಕರು ಈ ಪ್ರಕ್ರಿಯೆಯನ್ನು ವೀಕ್ಷಿಸುತ್ತಾರೆ ಮತ್ತು ಅಭ್ಯರ್ಥಿಗಳು ಮತ್ತು ಏಜೆಂಟರು ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ಪಡೆಯಲು ಕೋವಿಡ್​ ನೆಗೆಟಿವ್ ವರದಿ ಅಥವಾ ವ್ಯಾಕ್ಸಿನೇಷನ್ ಪಡೆದಿರುವ ಸರ್ಟಿಫಿಕೇಟ್​ ತೋರಿಸಬೇಕು.

ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಹಿಂಸಾಚಾರ ನಡೆದ ಹಿನ್ನೆಲೆ 108 ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ ಮತ್ತು ಕನಿಷ್ಠ 292 ವೀಕ್ಷಕರನ್ನು ನೇಮಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಬಲಿಷ್ಠ ಚುನಾವಣಾ ಸೈನ್ಯದ ಎದುರು, 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ಅವರ ವರ್ಚಸ್ಸು ಏನಾಗಲಿದೆ ಎಂದು ಫಲಿತಾಂಶವು ನಿರ್ಧರಿಸುತ್ತದೆ.

ತಮಿಳುನಾಡಿನಲ್ಲಿ, ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ತಮ್ಮ ಪ್ರಬಲ ರಾಜಕೀಯ ದಿಗ್ಗಜರಾದ ಜೆ.ಜಯಲಲಿತಾ ಮತ್ತು ಎಂ ಕರುಣಾನಿಧಿ ಇಲ್ಲದೆ ಚುನಾವಣೆ ಎದುರಿಸಿವೆ.

ಎಐಎಡಿಎಂಕೆ ಅಧಿಕಾರವನ್ನು ಉಳಿಸಿಕೊಂಡರೆ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮತ್ತು ಪನ್ನೀರ್​ ಸೆಲ್ವಂ ಅವರು ಜಯಲಲಿತಾ ಅವರ ಉತ್ತರಾಧಿಕಾರಿಗಳ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಯಾವುದೇ ಸ್ಥಾನ ಗಳಿಸದ ಎಐಎಡಿಎಂಕೆ ಮಿತ್ರ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.ಡಿಎಂಕೆ ಮಿತ್ರಪಕ್ಷ ಕಾಂಗ್ರೆಸ್ 25 ಅಸೆಂಬ್ಲಿ ವಿಭಾಗಗಳಲ್ಲಿ ಕಣದಲ್ಲಿದೆ. ನಟ-ರಾಜಕಾರಣಿ ಕಮಲ್ ಹಾಸನ್ ಪಕ್ಷ ಕೂಡ ರೇಸ್​ನಲ್ಲಿದೆ. ತಮಿಳುನಾಡಿನಲ್ಲಿ ಒಟ್ಟು 75 ಕೇಂದ್ರಗಳಿಗೆ ಮತ ಎಣಿಕೆ ನಡೆಯಲಿದ್ದು, ಅಗತ್ಯ ಸಿದ್ಧತೆ ಈಗಾಗಲೇ ಮುಗಿದಿದೆ.

ಇನ್ನು, ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ 11 ಕ್ಯಾಬಿನೆಟ್ ಮಂತ್ರಿಗಳು, ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ, ಹಿರಿಯ ಕಾಂಗ್ರೆಸ್ ಮುಖಂಡ ಒಮ್ಮನ್ ಚಾಂಡಿ, 'ಮೆಟ್ರೊಮನ್' ಇ ಶ್ರೀಧರನ್, ಕೇಂದ್ರ ಮಾಜಿ ಸಚಿವ ಕೆ.ಜೆ.ಅಲ್ಫಾನ್ಸ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ 957 ಅಭ್ಯರ್ಥಿಗಳು 140 ಸ್ಥಾನಗಳಿಗೆ ಚುನಾವಣೆಯಲ್ಲಿ ಕಣದಲ್ಲಿದ್ದು ಕೇರಳದ ಮುಂದಿನ ರಾಜಕೀಯ ಚಿತ್ರಣ ಸಹ ನಾಳೆ ಹೊರಬೀಳಲಿದೆ.

2016ರಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ವಿಶ್ವಾಸ ಹೊಂದಿದೆ. ಉಪಚುನಾವಣೆ ನಡೆದ 13 ರಾಜ್ಯಗಳಲ್ಲಿ ನಾಲ್ಕು ಲೋಕಸಭಾ ಸ್ಥಾನಗಳು ಮತ್ತು 13 ವಿಧಾನಸಭಾ ಸ್ಥಾನಗಳಲ್ಲಿ ಎಣಿಕೆ ನಡೆಯಲಿದೆ.ಇನ್ನು, ಕೊರೊನಾ ಹಿನ್ನೆಲೆ ಯಾವುದೇ ವಿಜಯೋತ್ಸವ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ.

Last Updated : May 1, 2021, 11:31 PM IST

ABOUT THE AUTHOR

...view details