ಕರ್ನಾಟಕ

karnataka

ಪ್ರೇಮ ಪ್ರಕರಣ: ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ತಾಯಿ, ಸಹೋದರ

By ETV Bharat Karnataka Team

Published : Sep 29, 2023, 1:02 PM IST

Young Woman Set Ablaze By Her Family: ಪ್ರೇಮ ಪ್ರಕರಣ ಸಂಬಂಧ ಯುವತಿಗೆ ಆಕೆಯ ತಾಯಿ ಹಾಗೂ ಸಹೋದರ ಸೇರಿಕೊಂಡು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ವರದಿಯಾಗಿದೆ.

crime-news-Young Woman Set Ablaze By Her mother and brother in Uttar Pradesh
ಪ್ರೇಮ ಪ್ರಕರಣ: ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ತಾಯಿ, ಸಹೋದರ

ಹಾಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ದುಷ್ಕೃತ್ಯ ಬೆಳಕಿಗೆ ಬಂದಿದೆ. ಪ್ರೇಮ ಪ್ರಕರಣ ಸಂಬಂಧ ಯುವತಿಯೊಬ್ಬಳನ್ನು ಆಕೆಯ ತಾಯಿ ಹಾಗೂ ಸಹೋದರ ಸೇರಿಕೊಂಡು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ಘಟನೆ ಹಾಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಇದೊಂದು ಮರ್ಯಾದಾ ಹತ್ಯೆ ಯತ್ನ ಪ್ರಕರಣ ಎಂದು ಶಂಕಿಸಲಾಗಿದೆ.

ಇಲ್ಲಿನ ಬಹದ್ದೂರ್‌ಗಢ ಪೊಲೀಸ್​ ಠಾಣೆ ವ್ಯಾಪ್ತಿಯ ನವಾಡ ಖುರ್ದ್ ಗ್ರಾಮದ ಯುವತಿಯೊಬ್ಬಳು ಅದೇ ಗ್ರಾಮ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ತಾಯಿ ಹಾಗೂ ಸಹೋದರ ಆಕ್ರೋಶಗೊಂಡಿದ್ದರು. ಅಂತೆಯೇ, ಯುವತಿಯನ್ನು ಹೊಲಕ್ಕೆ ಕರೆದೊಯ್ದು ಮನಸೋಇಚ್ಛೆ ಥಳಿಸಿದ್ದಾರೆ. ಬಳಿಕ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಯುವತಿಯನ್ನು ಜೀವಂತವಾಗಿ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಯುವತಿ ಹೊಲದ ತುಂಬಾ ಓಡತೊಡಗಿದ್ದಳು. ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದರೆ, ಆ ಸಮಯದಲ್ಲಿ ಜಮೀನಿನಲ್ಲಿ ಬೇರೆ ಯಾರೂ ಇರಲಿಲ್ಲ. ಬಳಿಕ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಈ ವೇಳೆ, ಗ್ರಾಮಸ್ಥರೊಬ್ಬರು ಯುವತಿ ಬೆಂಕಿಯಲ್ಲಿ ನರಳುತ್ತಿರುವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸಂತ್ರಸ್ತೆ ಸುಮಾರು 70ರಷ್ಟು ಸುಟ್ಟು ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಮತ್ತೊಂದೆಡೆ, ಈ ಘಟನೆ ಬಳಿಕ ಆರೋಪಿ ತಾಯಿ ಮತ್ತು ಸಹೋದರ ಸ್ಥಳದಿಂದ ಓಡಿ ಹೋಗಲು ಆರಂಭಿಸಿದ್ದರು. ಆದರೆ, ಗ್ರಾಮಸ್ಥರೇ ಆರೋಪಿಗಳಿಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿ ಗರ್ಭಿಣಿ?: ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಂತ್ರಸ್ತ ಯುವತಿಯು ಪ್ರಿಯಕರನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು. ಅಲ್ಲದೇ, ಸದ್ಯಕ್ಕೆ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ತಾಯಿ ಹಾಗೂ ಸಹೋದರ ಇಬ್ಬರು ಕೂಡಿ ಆಕೆಗೆ ಬೆಂಕಿ ಹಚ್ಚಿದ್ದರು ಎನ್ನಲಾಗಿದೆ. ಆದರೆ, ಯುವತಿ ಗರ್ಭಿಣಿ ಎಂಬ ವಿಷಯವನ್ನು ಪೊಲೀಸರು ಖಚಿತ ಪಡಿಸಿಲ್ಲ. ಈ ಸಂಬಂಧ ವೈದ್ಯಕೀಯ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.

ಈ ಘಟನೆ ಕುರಿತು ಹಾಪುರ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ರಾಜಕುಮಾರ್ ಪ್ರತಿಕ್ರಿಯಿಸಿ, ನವಾಡ ಖುರ್ದ್ ಗ್ರಾಮದಲ್ಲಿ ಯುವತಿಗೆ ಆಕೆಯ ಕುಟುಂಬಸ್ಥರೇ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಈಗಾಗಲೇ ತಾಯಿ ಮತ್ತು ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ, ಯುವತಿಯ ಅಕ್ರಮ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಸದ್ಯ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಇತರ ಮಾಹಿತಿ ಹೊರ ಬರಲಿದೆ. ಒಟ್ಟಾರೆ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದೂ ಅವರು ವಿವರಿಸಿದ್ದಾರೆ.

ಇದನ್ನೂ ಓದಿ:Rape case: ಅತ್ಯಾಚಾರ ಸಂತ್ರಸ್ತ ಯುವತಿಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲ ಮಾತು; ತನಿಖಾಧಿಕಾರಿ ಅಮಾನತು

For All Latest Updates

ABOUT THE AUTHOR

...view details