ಕರ್ನಾಟಕ

karnataka

ETV Bharat / bharat

ಬಿಹಾರದ ಅರಾರಿಯಾದಲ್ಲಿ ಪತ್ರಕರ್ತನ ಹತ್ಯೆ: ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಗುಂಡಿನ ದಾಳಿ..!

ಅರಾರಿಯಾದಲ್ಲಿ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ. ವಿಮಲ್ ಕುಮಾರ್ ಯಾದವ್ ಎಂಬ ಪತ್ರಕರ್ತ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

By

Published : Aug 18, 2023, 12:02 PM IST

Journalist Vimal Kumar Yadav Shot Dead
ಬಿಹಾರದ ಅರಾರಿಯಾದಲ್ಲಿ ಪತ್ರಕರ್ತನ ಹತ್ಯೆ, ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ..!

ಅರಾರಿಯಾ (ಬಿಹಾರ):ಪತ್ರಕರ್ತನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ. ಪತ್ರಕರ್ತನನ್ನು ವಿಮಲ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ವಿಮಲ್ ಕುಮಾರ್ ಯಾದವ್ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ವಿಮಲ್ ಕುಮಾರ್ ಯಾದವ್ ಅವರ ಮೇಲೆ ಆರೋಪಿಗಳು ಗುಂಡಿನ ದಾಳಿಗೆ ನಡೆಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಪತ್ರಕರ್ತನ ಗುಂಡಿಕ್ಕಿ ಹತ್ಯೆ: ಅರಾರಿಯಾ ಜಿಲ್ಲೆಯ ರಾಣಿಗಂಜ್ ಬ್ಲಾಕ್​ನಲ್ಲಿ ವಿಮಲ್ ಕುಮಾರ್ ಯಾದವ್ ಕಳೆದ ಹಲವು ವರ್ಷಗಳಿಂದ ದಿನಪತ್ರಿಕೆಯಲ್ಲಿ ಬ್ಲಾಕ್ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನಾಲ್ವರು ದುಷ್ಕರ್ಮಿಗಳು, ಇಂದು ಮುಂಜಾನೆ ಪತ್ರಕರ್ತರ ಮನೆ ಬಾಗಿಲು ತಟ್ಟಿದ್ದು, ವಿಮಲ್ ಯಾದವ್ ಬಾಗಿಲು ತೆರೆದ ಕೂಡಲೇ ಎದುರಿನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣವೇ ಸಂಬಂಧಿಕರು ತಡಮಾಡದೇ ವಿಮಲ್ ಕುಮಾರ್​ನನ್ನು ರಾಣಿಗಂಜ್ ರೆಫರಲ್ ಆಸ್ಪತ್ರೆಗೆ ಕರೆತಂದರು. ಅಲ್ಲಿನ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಮರಣೋತ್ತರ ಪರೀಕ್ಷೆ:ಈ ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಅರಾರಿಯಾ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಬಳಿಕ ಎಸ್ಪಿ ಕೂಡ ಸ್ಥಳಕ್ಕೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದರು. ತನಿಖೆ ಮುಂದುವರಿದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು.

ಎಸ್ಪಿ ಅಶೋಕ್ ಕುಮಾರ್ ಸಿಂಗ್ ಮಾಹಿತಿ:''ಇಂದು ಮುಂಜಾನೆ 5.30ರ ಸುಮಾರಿಗೆ ರಾಣಿಗಂಜ್ ಮಾರುಕಟ್ಟೆಯಲ್ಲಿ ನಾಲ್ವರು ಆರೋಪಿಗಳು ದಿನಪತ್ರಿಕೆಯ ಪತ್ರಕರ್ತ ವಿಮಲ್‌ಕುಮಾರ್ ಯಾದವ್ ಅವರ ಮನೆ ಬಾಗಿಲಿಗೆ ಬಂದು ಕರೆದಿದ್ದಾರೆ. ಪತ್ರಕರ್ತ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡು ಹಾರಿಸಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ವಿಮಲ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಎಫ್‌ಎಸ್‌ಎಲ್ ತಂಡವನ್ನು ಕರೆಯಲಾಗಿದೆ. ಬಲಭಾಗದ ಎದೆಗೆ ಗುಂಡು ಹಾರಿಸಲಾಗಿದೆ. ಇನ್ನು ಹಲವು ವಿಷಯಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ'' ಎಂದು ಅರಾರಿಯಾ ಎಸ್ಪಿ ಅಶೋಕ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪತ್ರಕರ್ತನ ಕುಟುಂಬದಲ್ಲಿ ಭಯದ ವಾತಾವರಣ:ಘಟನೆ ಬಳಿಕ ಪತ್ರಕರ್ತನ ಕುಟುಂಬಸ್ಥರು ಭಯಭೀತರಾಗಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ. ಸಂತ್ರಸ್ತ ಕುಟುಂಬದವರು ಭಯದಿಂದ ಬದುಕುವ ಅಗತ್ಯವಿಲ್ಲ ಎಂದು ಎಸ್ಪಿ ಧೈರ್ಯ ತುಂಬಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಅರಾರಿಯಾ ಸಂಸದ ಪ್ರದೀಪ್ ಕುಮಾರ್ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ''ಬಿಹಾರದಲ್ಲಿ ದುಷ್ಕರ್ಮಿಗಳು ಉಪಟಳ ಹೆಚ್ಚಾಗಿದ್ದು, ನೈತಿಕತೆ ಹೊಣೆ ಹೊತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'' ಎಂದು ಅವರು ಕಿಡಿಕಾರಿದರು.

ಸಿಎಂ ರಾಜೀನಾಮೆಗೆ ಆಗ್ರಹ:''ನಾಲ್ಕು ವರ್ಷಗಳ ಹಿಂದೆ ಪತ್ರಕರ್ತನ ಹತ್ಯೆ ಮಾಡಲಾಗಿತ್ತು'' ಎಂದು ಅರಾರಿಯಾ ಸಂಸದ ಪ್ರದೀಪ್ ಕುಮಾರ್ ಸಿಂಗ್ ಹೇಳಿದ್ದಾರೆ. ''ಅಂದು ದುಷ್ಕರ್ಮಿಗಳಿಗೆ ಶಿಕ್ಷೆಯಾಗಿದ್ದರೆ, ಇಂದು ಈ ಘಟನೆ ನಡೆಯುತ್ತಿರಲಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಹತ್ಯೆ ಸರಿಯಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಘಟನೆಯಿಂದ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂಬುದು ಜನರ ಆಗ್ರಹವಾಗಿದೆ. ಕೊಲೆಗೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್​ ಕಾನ್ಸ್‌ಟೇಬಲ್ : ದೂರು ದಾಖಲು

ABOUT THE AUTHOR

...view details