ಕರ್ನಾಟಕ

karnataka

By

Published : Jul 11, 2023, 8:57 PM IST

ETV Bharat / bharat

ನಕಲಿ ಸೇನಾ ನೇಮಕಾತಿ ದಂಧೆ: ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿದ್ದ ನಕಲಿ ಸೇನಾಧಿಕಾರಿ ಬಂಧನ

ಭಾರತೀಯ ಸೇನೆಯ ಕರ್ನಲ್ ಎಂದು ಹೇಳಿಕೊಂಡು ನಕಲಿ ಸೇನಾ ನೇಮಕಾತಿ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Etv Bharatcrime-indian-army-joins-hands-with-siliguri-police-commissionerate-to-bust-fake-army-job-racket
ನಕಲಿ ಸೇನಾ ನೇಮಕಾತಿ ದಂಧೆ: ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿದ್ದ ನಕಲಿ ಸೇನಾಧಿಕಾರಿ ಬಂಧನ

ಡಾರ್ಜಿಲಿಂಗ್(ಪಶ್ಚಿಮ ಬಂಗಾಳ): ಭಾರತೀಯ ಸೇನೆಯ ಕರ್ನಲ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನಕಲಿ ಸೇನಾ ನೇಮಕಾತಿ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ (XXXIII ಕಾರ್ಪ್ಸ್) ಮತ್ತು ಸಿಲಿಗುರಿ ಪೊಲೀಸ್ ಕಮಿಷನರೇಟ್‌ನ ಗುಪ್ತಚರ ವಿಭಾಗವು ಈ ಕುರಿತು ಮಾಹಿತಿ ಪಡೆದು, ನಕಲಿ ಸೇನಾಧಿಕಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ನಕಲಿ ಸೇನಾಧಿಕಾರಿ ಬಹಳ ದಿನಗಳಿಂದ ಸೇನೆಯ ಕರ್ನಲ್ ಎಂದು ನಟಿಸಿ ಹಣ ಪಡೆದು ವಂಚಿಸುತ್ತಿರುವ ಆರೋಪ ಕೇಳಿ ಬಂದಿತ್ತು. ಬಳಿಕ ದಂಧೆಯ ಬಗ್ಗೆ ಮಾಹಿತಿ ಪಡೆದು ಭಾರತೀಯ ಸೇನೆಯು ಸಿಲಿಗುರಿ ಪೊಲೀಸ್ ಕಮಿಷನರೇಟ್​ ಅನ್ನು ಸಂಪರ್ಕಿಸಿದೆ. ನಂತರ ಸಿಲಿಗುರಿ ಪೊಲೀಸ್ ಕಮಿಷನರೇಟ್​ನ ಭಕ್ತಿನಗರ ಪೊಲೀಸ್ ಠಾಣೆಯ ಪೊಲೀಸರು ಭಾರತೀಯ ಸೇನೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ದಲ್‌ಚಂದ್ ವರ್ಮಾ ಎಂಬ ನಕಲಿ ಕರ್ನಲ್​ನನ್ನು ಬಂಧಿಸಿದ್ದಾರೆ. ಈತ ಸಿಕ್ಕಿಂನ ಗ್ಯಾಂಗ್‌ಟಾಕ್‌ನ ನಿವಾಸಿಯಾಗಿದ್ದಾನೆ. ಆರೋಪಿ ತನ್ನನ್ನು ಭಾರತೀಯ ಸೇನೆಯ ಆರ್ಟಿಲರಿ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಆರೋಪಿಯಿಂದ ಮೊಬೈಲ್ ಫೋನ್, ನಕಲಿ ಭಾರತೀಯ ಸೇನಾ ಸೇವಾ ನೋಂದಣಿ ನಮೂನೆ ಮತ್ತು ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೇನೆಯಲ್ಲಿ ಅಗ್ನಿಶಾಮಕ ದಳದ ಕೆಲಸ ಕೊಡಿಸುವುದಾಗಿ ಹೇಳಿ ದಲ್‌ಚಂದ್ ಹಲವು ಉದ್ಯೋಗಾಕಾಂಕ್ಷಿಗಳಿಂದ ಎರಡರಿಂದ ಎರಡುವರೆ ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಉದ್ಯೋಗಾಕಾಂಕ್ಷಿಗಳನ್ನು ಭೇಟಿಯಾಗಲು ಸಿಲಿಗುರಿಗೆ ಬರುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ನಂತರ ಪೊಲೀಸರು ಭಾರತೀಯ ಸೇನೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಪೊಲೀಸರು ಮತ್ತು ಸೇನೆ ಶಾಲುಗಢದ ರೆಸ್ಟೋರೆಂಟ್‌ಗೆ ತಲುಪಿದೆ. ಈ ವೇಳೆ, ದಲ್‌ಚಂದ್ ಸೈನ್ಯದ ಸಮವಸ್ತ್ರದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಭೇಟಿ ಮಾಡಲು ಕಾಯುತ್ತಿದ್ದಾಗ ಆತನನ್ನು ಬಂಧಿಸಿದ್ದಾರೆ. ಇನ್ನು ದಂಧೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹನಿಟ್ರ್ಯಾಪ್‌ ಕೇಸ್​: ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್

ರಹಸ್ಯ ಮಾಹಿತಿ ಹಂಚಿಕೊಂಡಿದ್ದ ನೌಕರನ ಬಂಧನ:ಮತ್ತೊಂದೆಡೆ, ಪಾಕಿಸ್ತಾನದ ಮಹಿಳಾ ಏಜೆಂಟ್‌ನೊಂದಿಗೆ ರಹಸ್ಯ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ನೌಕರನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 27 ವರ್ಷದ ನವೀನ್ ಪಾಲ್ ಎಂದು ಗುರುತಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಆರೋಪಿ ನವೀನ್​ ಪಾಲ್​ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿ ಕೆಲಸ ಮಾಡುತ್ತಿದ್ದ. ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ವಾಸವಾಗಿದ್ದ ಈತ ಅನುಮಾನಾಸ್ಪದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ. ಆಕೆಯ ಹನಿಟ್ರ್ಯಾಪ್ ಬಲೆಗೆ ನವೀನ್ ಪಾಲ್​ ಬಂದಿದ್ದ. ವಾಟ್ಸ್​ಆ್ಯಪ್​​ನಲ್ಲಿ ಅಂಜಲಿ ಕೋಲ್ಕತ್ತಾ ಎಂಬ ಹೆಸರಿನ ನಂಬರ್​ನೊಂದಿಗೆ ಸಂಶಯಾಸ್ಪದ ಸಂದೇಶ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ABOUT THE AUTHOR

...view details