ರಾಂಚಿ, ಜಾರ್ಖಂಡ್:ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ನಗರದಲ್ಲಿ ಜ್ಯೂಸ್ ವ್ಯಾಪಾರಿ ಮತ್ತು ಆತನ ಉದ್ಯೋಗಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆ ಬರಿಯಾತು ಪೊಲೀಸ್ ಠಾಣಾ ವ್ಯಾಪ್ತಿಯ ಸೈನ್ಸ್ ಸಿಟಿ ಬಳಿ ನಡೆದಿದೆ. ಮೃತರು ಜ್ಯೂಸ್ ವ್ಯಾಪಾರಿ ಮುಖೇಶ್ ಮತ್ತು ಅವರ ಉದ್ಯೋಗಿ ರೋಹನ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಮುಖೇಶ್ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ರೋಹನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮನೆಗೆ ತೆರಳುತ್ತಿದ್ದ ವೇಳೆ ಗುಂಡಿನ ದಾಳಿ: ಶುಕ್ರವಾರ ರಾತ್ರಿ 10.30ರ ಸುಮಾರಿ ಈ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಛತ್ರದ ನಿವಾಸಿ ಮುಖೇಶ್ ಸಾವ್ ಮತ್ತು ಕೆಲಸಗಾರ ರೋಹನ್ ಸಾಹೇಬ್ ತಮ್ಮ ಜ್ಯೂಸ್ ಶಾಪ್ ಬಂದ್ ಮಾಡಿ ಮನೆ ಕಡೆ ತೆರಳುತ್ತಿದ್ದರು. ಇದೇ ವೇಳೆ, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮುಖೇಶ್ ಹಾಗೂ ರೋಹನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮುಖೇಶ್ ಮತ್ತು ರೋಹನ್ ತಲೆಗಳಿಗೆ ಗುಂಡು ತಗುಲಿದೆ. ಮುಖೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗುಂಡಿನ ದಾಳಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ರೋಹನ್ನನ್ನು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೋಹನ್ ಸಾವನ್ನಪ್ಪಿದರು.
ಹಂತಕರು ಪರಿಚಿತರು: ಇನ್ನು ಗುಂಡಿನ ದಾಳಿ ನಡೆಸಿದ್ದ ಹಂತಕರು ಮುಖೇಶ್ಗೆ ಪರಿಚಯಸ್ಥರಾಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ. ಹತ್ಯೆಗೂ ಮುನ್ನ ಹಂತಕರಿಬ್ಬರು ಮುಖೇಶ್ ಜೊತೆ ಮಾತುಕತೆ ನಡೆಸಿದ್ದರು. ಮಾತುಕತೆ ಬಳಿಕ ಶೂಟೌಟ್ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.