ಕರ್ನಾಟಕ

karnataka

By ETV Bharat Karnataka Team

Published : Dec 12, 2023, 7:16 PM IST

ETV Bharat / bharat

500 ರೂಪಾಯಿಗೆ ಗುಂಡಿನ ದಾಳಿ: ಎದೆಯಲ್ಲಿ ಸಿಲುಕಿದ ಬುಲೆಟ್​, ಚಿಕಿತ್ಸೆ ಸಿಗದೇ ಆರು ದಿನ ಪರದಾಡಿದ ಮಹಿಳೆ

ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ಇನ್ನೋರ್ವ ಮಹಿಳೆಗೆ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

crime-bullet-stuck-in-woman-chest-in-munger-no-treatment-after-visiting-many-hospitals
500 ರೂಪಾಯಿಗೆ ಗುಂಡಿನ ದಾಳಿ : ಎದೆಯಲ್ಲಿ ಸಿಲುಕಿದ ಬುಲೆಟ್​, ಚಿಕಿತ್ಸೆ ಸಿಗದೆ ಆರು ದಿನ ಪರದಾಡಿದ ಮಹಿಳೆ

ಮುಂಗೇರ್​(ಬಿಹಾರ) : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಇನ್ನೋರ್ವ ಮಹಿಳೆಗೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಮದ್ದುಗುಂಡು ಮಹಿಳೆಯ ಎದೆಭಾಗದಲ್ಲಿ ಸಿಲುಕಿ ಆರು ದಿನಗಳ ಕಾಲ ಚಿಕಿತ್ಸೆ ಸಿಗದೇ ಪರದಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಮುಫಾಸಿಲ್​ ಪೊಲೀಸ್​ ಠಾಣಾ ವ್ಯಾಪ್ತಿ ನಿವಾಸಿಯಾದ ಕಾಜಲ್​ ದೇವಿ ಗಾಯಗೊಂಡ ಮಹಿಳೆಯಾಗಿದ್ದು, ಪೂನಮ್​ ಸಿಂಗ್​ ಗುಂಡಿನ ದಾಳಿ ನಡೆಸಿದ ಮಹಿಳೆ ಎಂದು ತಿಳಿದು ಬಂದಿದೆ.

ಕಳೆದ ಡಿಸೆಂಬರ್​ 7ರಂದು ಬೆಳಗ್ಗೆ ಮುಫಾಸಿಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಟಿಕಾರಾಮ್​ ನಿವಾಸಿಯಾಗಿರುವ ಕಾಜಲ್​ ದೇವಿ ಅವರ ಪತಿ ಕನ್ಹಯ್ಯಾ ಮತ್ತು ಅವರ ಪಕ್ಕದ ಮನೆ ನಿವಾಸಿಯಾಗಿರುವ ಪೂನಂ ಸಿಂಗ್​ ನಡುವೆ 500 ರೂಪಾಯಿಗೆ ಜಗಳ ಆರಂಭವಾಗಿತ್ತು. ಈ ವೇಳೆ, ಪತಿಯ ಪರ ಕಾಜಲ್​ ದೇವಿ ವಕಾಲತ್ತು ವಹಿಸಿಕೊಂಡು ಬಂದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ಮುಂದುವರೆದಿದ್ದು, ಈ ವೇಳೆ ಪೂನಂ ಸಿಂಗ್​ ತನ್ನಲ್ಲಿದ್ದ ಬಂದೂಕಿನಿಂದ ಕಾಜಲ್ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಾಜಲ್​ ದೇವಿ ಅವರನ್ನು ಪತಿ ಕನ್ಹಯ್ಯಾ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

500 ರೂಪಾಯಿಗೆ ಗುಂಡಿನ ದಾಳಿ :ಈ ಬಗ್ಗೆ ಪ್ರತಿಕ್ರಿಯಿಸಿದ ಕಾಜಲ್​ ದೇವಿ ಪತಿ ಕನ್ಹಯ್ಯಾ, ಕೇವಲ 500 ರೂಪಾಯಿಗೆ ಜಗಳ ಪ್ರಾರಂಭವಾಯಿತು. ಈ ವೇಳೆ ಪೂನಂ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅದು ನನ್ನ ಪತ್ನಿ ಕಾಜಲ್​ ದೇವಿಗೆ ಹೊಟ್ಟೆಗೆ ತಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಾನು ಪೂನಂ ಸಿಂಗ್​ಗೆ 500 ರೂಪಾಯಿ ನೀಡಿದ್ದೆ. ಆಕೆಯು ತನ್ನ ಸೋದರ ಮಾವನಿಗೆ ಆರೋಗ್ಯ ಸರಿಯಿಲ್ಲ ಎಂದು ದುಡ್ಡು ಪಡೆದುಕೊಂಡಿದ್ದಳು. ಆದರೆ ಮಾವನಿಗೆ ಚಿಕಿತ್ಸೆ ಕೊಡಿಸುವ ಬದಲಾಗಿ ಮದ್ಯಪಾನ ಮಾಡಿ ಮುಗಿಸಿದ್ದಾಳೆ. ಇದನ್ನು ಪ್ರಶ್ನಿಸಿದ ತನ್ನ ಪತ್ನಿ ಮೇಲೆ ಆಕೆ ಗುಂಡಿನ ದಾಳಿ ನಡೆಸಿದ್ದಳು ಎಂದು ಅವರು ಹೇಳಿದರು.

ಗಾಯಗೊಂಡ ಮಹಿಳೆಯನ್ನು ತಕ್ಷಣ ಇಲ್ಲಿನ ಖಗಾರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಲ್ಲಿನ ವೈದ್ಯರು ಅಲ್ಲಿಂದ ಬೆಗುಸರಾಯಿಗೆ ತೆರಳುವಂತೆ ಸೂಚಿಸಿದರು. ಬೆಗುಸರಾಯಿಗೆ ತೆರಳಿದ ಬಳಿಕ ಅಲ್ಲಿನ ವೈದ್ಯರು ಭಾಗಲ್ಪುರ್​ ತೆರಳುವಂತೆ ತಿಳಿಸಿದ್ದಾರೆ. ಭಾಗಲ್ಪುರಕ್ಕೆ ತೆರಳಿದ ಬಳಿಕ ಅಲ್ಲಿಯೂ ಪುನಃ ಬೆಗುಸರಾಯಿ ತೆರಳುವಂತೆ ಸೂಚಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಮಹಿಳೆಗೆ ಗುಂಡು ತಗುಲಿ ಸುಮಾರು ಆರು ದಿನಗಳು ಕಳೆದರೂ ಇಲ್ಲಿನ ವೈದ್ಯರೂ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ನಾವು ಮನೆಗೆ ತೆರಳಿದೆವು. ನಮ್ಮ ಪ್ರಯಾಣದಿಂದಾಗಿ ಮಹಿಳೆಯ ಹೊಟ್ಟೆ ಭಾಗಕ್ಕೆ ತಗುಲಿದ್ದ ಗುಂಡು ಹೃದಯದಲ್ಲಿ ಸಿಲುಕಿದೆ. ಇದರ ಜೊತೆಗೆ ಚಿಕಿತ್ಸೆಗೆ 2 ಲಕ್ಷ ರೂಪಾಯಿ ತಗುಲುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ನಾವು ಬಡವರಾಗಿದ್ದು, ಅಷ್ಟೊಂದು ಮೊತ್ತವನ್ನು ಹೊಂದಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಿಯೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಂಗೇರ್​ ಸರ್ಕಾರಿ ಆಸ್ಪತ್ರೆ ವೈದ್ಯರು, ಮಹಿಳೆಯ ಎದೆ ಭಾಗದಲ್ಲಿ ಬುಲೆಟ್​ ಸಿಲುಕಿಕೊಂಡಿದೆ. ಇಲ್ಲಿ ಆ ಮಹಿಳೆಗೆ ಚಿಕಿತ್ಸೆ ನೀಡಲು ಬೇಕಾದ ಸೌಲಭ್ಯ ಇಲ್ಲ. ಅಲ್ಲದೇ ವೈದ್ಯರ ಲಭ್ಯತೆಯೂ ಇಲ್ಲ. ಈ ಮಹಿಳೆಯನ್ನ ಪಾಟ್ನಾದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್​ ಅಧಿಕಾರಿ, ಗಾಯಗೊಂಡ ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಕುರಿತಂತೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ :ಸಂತಾನಹರಣ ಶಸ್ತ್ರ ಚಿಕಿತ್ಸೆ ಬಳಿಕವೂ ಮೂರು ಬಾರಿ ಗರ್ಭಿಣಿಯಾದ ಮಹಿಳೆ!

ABOUT THE AUTHOR

...view details