ಕರ್ನಾಟಕ

karnataka

ETV Bharat / bharat

ಉಬರ್​ ಚಾಲಕನ ನಿರ್ಲಕ್ಷ್ಯದಿಂದ ವಿಮಾನ ತಪ್ಪಿಸಿಕೊಂಡ ಮಹಿಳೆ: ಗ್ರಾಹಕ ನ್ಯಾಯಾಲಯದಿಂದ ದಂಡ - Mumbai airport

ಉಬರ್​ ಚಾಲಕ ಸಮಯಕ್ಕೆ ಸರಿಯಾಗಿ ಟ್ಯಾಕ್ಸಿಯನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗದಿದ್ದ ಕಾರಣಕ್ಕೆ ಪ್ರಯಾಣಿಕ ಮಹಿಳೆಯೊಬ್ಬರು ಮುಂಬೈನ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಉಬರ್
ಉಬರ್

By

Published : Oct 26, 2022, 9:21 PM IST

ಮುಂಬೈ (ಮಹಾರಾಷ್ಟ್ರ): ಮುಂಬೈನ ಉಬರ್ ಕಂಪನಿಯ ಟ್ಯಾಕ್ಸಿ ಚಾಲಕನೊಬ್ಬ ಮಹಿಳಾ ಪ್ರಯಾಣಿಕರನ್ನು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಕರೆದೊಯ್ಯದ ಕಾರಣ ಮಹಿಳೆ ಚೆನ್ನೈಗೆ ತೆರಳುವ ವಿಮಾನವನ್ನು ತಪ್ಪಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಗ್ರಾಹಕ ನ್ಯಾಯಾಲಯ ಮಹಿಳೆಯ ಪರ ತೀರ್ಪು ನೀಡಿ ಉಬರ್‌ಗೆ ಛೀಮಾರಿ ಹಾಕಿದೆ. ಅಲ್ಲದೇ, 20,000 ದಂಡ ವಿಧಿಸಿದೆ.

ಮುಂಬೈನ ಟ್ರಾಫಿಕ್ ಜಾಮ್​ನಲ್ಲಿ ವಾಹನ ಓಡಿಸುವುದು ದೊಡ್ಡ ಕಸರತ್ತೇ ಸರಿ. ಆದರೆ ಸಮಯಕ್ಕಿಂತ ಮುಂಚಿತವಾಗಿ ಟ್ಯಾಕ್ಸಿಯನ್ನು ಬುಕ್ ಮಾಡಿದರೂ, ಟ್ಯಾಕ್ಸಿ ಚಾಲಕ ನಿಗದಿತ ಸಮಯಕ್ಕೆ ಟ್ಯಾಕ್ಸಿಯನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮುಂಬೈನ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಉಬರ್​ನ ಸೇವೆ ಉತ್ತಮವಾಗಿಲ್ಲ ಎಂದು ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

ತಿಳುವಳಿಕೆ ಮತ್ತು ಸೇವೆಯ ಗುಣಮಟ್ಟದ ಕೊರತೆಯಿಂದಾಗಿ ಮಹಿಳೆಗೆ ಉಂಟಾದ ಭಾವನಾತ್ಮಕ ತೊಂದರೆಯನ್ನು ಗಣನೆಗೆ ತೆಗೆದುಕೊಂಡು ಕೋರ್ಟ್ ಉಬರ್‌ಗೆ ದಂಡ ವಿಧಿಸಿದೆ.

ಘಟನೆಯ ಹಿನ್ನೆಲೆ: ಜೂನ್ 12, 2018 ರಂದು ಮಹಿಳೆ ವಿಮಾನ ನಿಲ್ದಾಣಕ್ಕೆ ಹೋಗಲು ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಟ್ಯಾಕ್ಸಿ ಬುಕ್ ಮಾಡಿದ ಸ್ಥಳದಿಂದ ಮುಂಬೈ ವಿಮಾನ ನಿಲ್ದಾಣವು 36 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲಿಗೆ ತಲುಪುವುದಕ್ಕೆ 2 ಗಂಟೆ ಸಾಕು. ಆದರೆ ಚಾಲಕ ವಿನಾಕಾರಣ ಸಿಎನ್​ಜಿ ಗ್ಯಾಸ್ ಸ್ಟೇಷನ್​​ನಲ್ಲಿ 15 ರಿಂದ 20 ನಿಮಿಷ ತೆಗೆದುಕೊಂಡಿದ್ದಾನೆ. ಪರಿಣಾಮ, ಟ್ಯಾಕ್ಸಿ ನಿಲ್ದಾಣ ತಲುಪಲಿಲ್ಲ ಮತ್ತು ಇದರಿಂದಾಗಿ ಮಹಿಳೆ ವಿಮಾನ ತಪ್ಪಿಸಿಕೊಂಡಿದ್ದರು.

ಟ್ಯಾಕ್ಸಿ ಶುಲ್ಕದ ಮೊತ್ತ 703 ರೂ ಆಗಿತ್ತು. ಆದರೆ ಬುಕ್ಕಿಂಗ್ ಸಮಯದಲ್ಲಿ ಅಂದಾಜು ದರ 563 ರೂ ಇತ್ತು. ಹೀಗಾಗಿ ಮಹಿಳೆ ದೂರು ನೀಡಿದ ನಂತರ, ಉಬರ್​ನ ಅಂದಾಜು ಮತ್ತು ವಾಸ್ತವಿಕ ದರದ ನಡುವಿನ ವ್ಯತ್ಯಾಸದ ಶುಲ್ಕ 139 ರೂ.ಗಳನ್ನು ಮರುಪಾವತಿಸಿದೆ.

'ಉಬರ್‌ನ ಟ್ಯಾಕ್ಸಿಯ ಚಾಲಕ ಈ ತಪ್ಪನ್ನು ಮಾಡಿದ್ದಾರೆ. ಹಾಗಾಗಿ, ಚಾಲಕನ ತಪ್ಪಿಗೆ ಉಬರ್​ ಜವಾಬ್ದಾರಿಯಲ್ಲ. ಅವರು ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸಲು ವಿಫಲವಾದ ಕಾರಣಕ್ಕಾಗಿ ದಂಡ ವಿಧಿಸಲಾಗಿದೆ. ಮಹಿಳಾ ಪ್ರಯಾಣಿಕರು ಉಬರ್ ಕಂಪನಿಯ ಚಾಲಕನಿಗೆ ಶುಲ್ಕವನ್ನು ಪಾವತಿಸಿದ್ದಾರೆ' ಎಂದು ಗ್ರಾಹಕ ನ್ಯಾಯಾಲಯ ತಿಳಿಸಿದೆ.

'ಉಬರ್‌ನಂತಹ ತಂತ್ರಜ್ಞಾನವು ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸುವ ಹೆಸರಿನಲ್ಲಿ ಪ್ರಯಾಣಿಕರನ್ನು ಹೇಗೆ ವಂಚಿಸುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ' ಎಂದು ಮುಂಬೈ ಮೂಲದ ವಕೀಲ ನಿತಿನ್ ಸತ್ಪುಟೆ ಹೇಳಿದ್ದಾರೆ.

ಇದನ್ನೂ ಓದಿ:ನೋಟಿಸ್ ನೀಡಿದ ಬಳಿಕವೂ ಸಂಚರಿಸುವ ಓಲಾ, ಉಬರ್, ಆಟೋ ಜಪ್ತಿಗೆ ಸೂಚನೆ: ಸಚಿವ ಶ್ರೀರಾಮುಲು

ABOUT THE AUTHOR

...view details