ನವದೆಹಲಿ:ಸಂಸತ್ತಿನ ಪಾರಮ್ಯ ಸ್ಥಾಪನೆಯ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಒತ್ತಾಯಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂವಿಧಾನವು ಸರ್ವೋಚ್ಚವಾಗಿದೆ ಮತ್ತು ಉಪರಾಷ್ಟ್ರಪತಿಗಳ ದೃಷ್ಟಿಕೋನಗಳು ಎಚ್ಚರಿಕೆಯ ಸಂಕೇತವಾಗಿರಬಹುದು ಎಂದು ಗುರುವಾರ ಚಿದಂಬರಂ ಹೇಳಿದ್ದಾರೆ.
ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷರು ಸಂಸತ್ತನ್ನು ಸರ್ವೋಚ್ಚ ಎಂದು ಹೇಳುವುದು ತಪ್ಪು. ಸಂವಿಧಾನವೇ ಸರ್ವೋಚ್ಚವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ. ಬಹುಶಃ ಇದೊಂದು ಎಚ್ಚರಿಕೆಯ ಮುನ್ಸೂಚನೆಯಾಗಿರಬಹುದು ಎಂದ ಚಿದಂಬರಂ, ವಾಸ್ತವವಾಗಿ, ಗೌರವಾನ್ವಿತ ಸಭಾಪತಿಯವರ ಅಭಿಪ್ರಾಯಗಳು ಸಂವಿಧಾನವನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರಿಕ ಮುಂಬರುವ ಅಪಾಯಗಳ ಬಗ್ಗೆ ಎಚ್ಚರದಿಂದಿರುವಂತೆ ಜಾಗರೂಕರನ್ನಾಗಿಸಬೇಕು ಎಂದರು. ಸಂವಿಧಾನದ ತಳಹದಿಯ ತತ್ವಗಳ ಮೇಲೆ ಬಹುಸಂಖ್ಯಾತ ಪ್ರೇರಿತ ದಾಳಿಯನ್ನು ತಡೆಗಟ್ಟುವ ಸಲುವಾಗಿ ಮೂಲ ರಚನೆ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಒಂದೊಮ್ಮೆ ಸಂಸತ್ತು ಬಹುಮತದಿಂದ ಸಂಸತ್ತಿನ ವ್ಯವಸ್ಥೆಯನ್ನು ಅಧ್ಯಕ್ಷೀಯ ವ್ಯವಸ್ಥೆಯಾಗಿ ಪರಿವರ್ತಿಸಲು ಮತ ಚಲಾಯಿಸಿದೆ ಎಂದು ಭಾವಿಸೋಣ ಅಥವಾ ಶೆಡ್ಯೂಲ್ VII ನಲ್ಲಿನ ರಾಜ್ಯ ಪಟ್ಟಿಯನ್ನು ರದ್ದುಗೊಳಿಸಿ ಮತ್ತು ರಾಜ್ಯಗಳ ವಿಶೇಷ ಶಾಸಕಾಂಗ ಅಧಿಕಾರವನ್ನು ಕಸಿದುಕೊಂಡಿದೆ ಎಂದುಕೊಳ್ಳೋಣ. ಆದರೆ ಅಂಥ ತಿದ್ದುಪಡಿಗಳು ಮಾನ್ಯವಾಗಬಹುದೇ? ಎಂದು ಅವರು ಪ್ರಶ್ನಿಸಿದರು.
ಎನ್ಜೆಎಸಿ ಕಾಯಿದೆಯನ್ನು ರದ್ದು ಮಾಡಿದ ನಂತರ, ಹೊಸ ಮಸೂದೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಯಾವುದೂ ತಡೆಯಲಾಗದು. ಒಂದು ಕಾಯಿದೆಯನ್ನು ರದ್ದು ಮಾಡುವುದರಿಂದ ಮೂಲ ರಚನೆ ಸಿದ್ಧಾಂತವು ತಪ್ಪಾಗಿದೆ ಎಂದು ಅರ್ಥವಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡಲು ಮತ್ತು ಶಾಸನದೊಂದಿಗೆ ವ್ಯವಹರಿಸಲು ಸಂಸತ್ತಿನ ಅಧಿಕಾರವು ಬೇರೆ ಯಾವುದೇ ಅಧಿಕಾರಕ್ಕೆ ಒಳಪಟ್ಟಿಲ್ಲ ಮತ್ತು ಎಲ್ಲ ಸಾಂವಿಧಾನಿಕ ಸಂಸ್ಥೆಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಇವು ತಮ್ಮ ತಮ್ಮ ಅಧಿಕಾರವ್ಯಾಪ್ತಿಗೆ ಸೀಮಿತವಾಗಿರಬೇಕಾಗುತ್ತದೆ ಮತ್ತು ಔಚಿತ್ಯ ಮತ್ತು ಗೌರವದ ಅತ್ಯುನ್ನತ ಗುಣಮಟ್ಟಕ್ಕೆ ಅನುಗುಣವಾಗಿರಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಬುಧವಾರ ಪುನರುಚ್ಚರಿಸಿದರು.