ಕರ್ನಾಟಕ

karnataka

ETV Bharat / bharat

ಅದಾನಿ ವಿರುದ್ಧ ತನಿಖೆ ಪ್ರಾರಂಭಕ್ಕೆ ಒತ್ತಾಯ: ಕಾಂಗ್ರೆಸ್​ ನೇತೃತ್ವದಲ್ಲಿ ಇಡಿ ಕಚೇರಿಯವರೆಗೆ ಮೆರವಣಿಗೆ, ವಿಜಯ್ ಚೌಕ್ ಬಳಿ ತಡೆ - ಖರ್ಗೆ ನೇತೃತ್ವದಲ್ಲಿ 17 ವಿರೋಧ ಪಕ್ಷಗಳ ಸಂಸದರು

ಅದಾನಿ ಗ್ರೂಪ್ ವಿರುದ್ಧ ತನಿಖೆ ಪ್ರಾರಂಭಿಸುವಂತೆ ಒತ್ತಾಯಿಸಿ ಇಡಿ ಕಚೇರಿಗೆ ಮನವಿ ಸಲ್ಲಿಸಲು ರಾಜ್ಯಸಭಾ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 17 ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದಾರೆ.

congress-leads-protest-march-of-17-opposition-parties-to-ed-office-on-adani-issue
ಅದಾನಿ ವಿರುದ್ಧ ತನಿಖೆ ಪ್ರಾರಂಭಕ್ಕೆ ಒತ್ತಾಯ: ಕಾಂಗ್ರೆಸ್​ ನೇತೃತ್ವದಲ್ಲಿ ಇಡಿ ಕಚೇರಿಯವರೆಗೆ ಮೆರವಣಿಗೆ, ವಿಜಯ್ ಚೌಕ್ ಬಳಿ ತಡೆ

By

Published : Mar 15, 2023, 3:47 PM IST

ನವದೆಹಲಿ:ಉದ್ಯಮಿ ಗೌತಮ್​ ಅದಾನಿ ವಿರುದ್ಧದ ಆರೋಪ ಸಂಬಂಧ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳ ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಸಂಸತ್ ಭವನದಿಂದ ಇಡಿ ಕಚೇರಿಯವರೆಗೆ ಮೆರವಣಿಗೆ ಮೂಲಕ ಸದಸ್ಯರು ಹೊರಟಿದ್ದು, ವಿಜಯ್ ಚೌಕ್​ ಮುಂದೆ ತಡೆ ಹಿಡಿಯಲಾಗಿದೆ.

ಶೆಲ್ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಭ್ರಷ್ಟಾಚಾರದ ಆರೋಪಗಳ ಕುರಿತು ಅದಾನಿ ಗ್ರೂಪ್ ವಿರುದ್ಧ ತನಿಖೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 17 ವಿರೋಧ ಪಕ್ಷಗಳ ಸಂಸದರು ಪಾಲ್ಗೊಂಡಿದ್ದಾರೆ.

ಯಾವ ಪಕ್ಷಗಳು ಭಾಗಿ?: ಕಾಂಗ್ರೆಸ್​, ರಾಷ್ಟ್ರೀಯ ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಆಮ್ ಆದ್ಮಿ ಪಕ್ಷ (ಎಎಪಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಜನತಾ ದಳ (ಯುನೈಟೆಡ್), ಸಮಾಜವಾದಿ ಪಕ್ಷ (ಎಸ್‌ಪಿ), ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ). ), ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ), ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ), ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್​), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್​), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ) ಸೇರಿ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಜಂಟಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿವೆ. ಪ್ರತಿಭಟನೆಯಿಂದ ಟಿಎಂಸಿ, ಎನ್​ಸಿಪಿ ದೂರ ಉಳಿದಿವೆ.

ಸದ್ಯ ಎರಡನೇ ಹಂತದ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಪ್ರತಿಪಕ್ಷಗಳು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಚರ್ಚೆಗೆ ಪಟ್ಟು ಹಿಡಿದಿದ್ದರೆ, ಬಿಜೆಪಿ ಲಂಡನ್‌ನಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳ ಮೇಲೆ ಪ್ರಸ್ತಾಪ ಮಾಡುತ್ತಿದೆ. ಇದರಿಂದ ಮೂರನೇ ದಿನವೂ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಗುದ್ದಾಟ ಮುಂದುವರೆದಿದೆ. ಇಂದು ರಾಜ್ಯಸಭೆ ಕಲಾಪವನ್ನು ಮುಂದೂಡಿದ ಕೂಡಲೇ ಇದರ ನಡುವೆ ಅದಾನಿ ವಿರುದ್ಧ ತನಿಖೆಗೆ ಒತ್ತಾಯಿಸಿ 17 ಪಕ್ಷಗಳ ಎಲ್ಲ ಸಂಸದರು ಇಡಿ ಕಚೇರಿಯತ್ತ ಪಾದಯಾತ್ರೆ ಆರಂಭಿಸಿದರು.

ವಿಜಯ್ ಚೌಕ್ ಬಳಿ ತಡೆ: ಇದಕ್ಕೂ ಮುನ್ನ ಸಂಸತ್ತಿನ ಸಂಕೀರ್ಣದಲ್ಲಿರುವ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ಪ್ರತಿಪಕ್ಷದ ನಾಯಕರು ಸಭೆ ನಡೆಸಿ, ಪ್ರತಿಭಟನೆಯ ಜಂಟಿ ಕಾರ್ಯತಂತ್ರವನ್ನು ರೂಪಿಸಿದರು. ಮತ್ತೊಂದೆಡೆ, ಈ ಪ್ರತಿಭಟನಾ ಮೆರವಣಿಗೆಯ ಹಿನ್ನೆಲೆಯಲ್ಲಿ ವಿಜಯ್ ಚೌಕ್ ಮತ್ತು ಇಡಿ ಕಚೇರಿಯ ಮುಂಭಾಗದಲ್ಲಿ ಭಾರಿ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ. ಮೆರವಣಿಗೆಯಲ್ಲಿ ಸಂಸದರು ವಿಜಯ್ ಚೌಕ್ ತಲುಪಿದ ಕೂಡಲೇ ಅವರನ್ನು ತಡೆಯಲಾಗಿದೆ.

ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಚುನಾಯಿತ ಸಂಸದರು ಇಡಿ ಕಚೇರಿಗೆ ಹೋಗದಂತೆ ತಡೆ ಹಿಡಿಯಲಾಗಿದೆ. ನಾವು ಶಾಂತಿಯುತವಾಗಿ ಅವರಿಗೆ ಮನವಿ ಪತ್ರವನ್ನು ನೀಡಲು ಬಯಸಿದ್ದೇವೆ. ಈ ಬಗ್ಗೆ ನಾವು ಮೊದಲೇ ತಿಳಿಸಿದ್ದರೂ, ನಮಗೆ ಮಾಹಿತಿ ನೀಡಿಲ್ಲ ಎಂದು ಇಡಿ ನಿರಾಕರಿಸಿದೆ. ವಿಜಯ್ ಚೌಕ್ ಮುಂದೆ ಸರ್ಕಾರ ನಮ್ಮನ್ನು ತಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕ್ಷಮೆಗಾಗಿ ಬಿಜೆಪಿ ಕಾಂಗ್ರೆಸ್​ ಗುದ್ದಾಟ: ರಾಹುಲ್​ ಸಮರ್ಥಿಸಿಕೊಂಡ ಖರ್ಗೆ, ಪಟ್ಟು ಬಿಡದ ಬಿಜೆಪಿ

ABOUT THE AUTHOR

...view details