ಕರ್ನಾಟಕ

karnataka

By

Published : Aug 7, 2023, 10:45 AM IST

Updated : Aug 7, 2023, 12:08 PM IST

ETV Bharat / bharat

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್​ ಪ್ರವೇಶ: ಲೋಕಸಭೆ ಸದಸ್ಯತ್ವ ಅನರ್ಹತೆ ವಾಪಸ್​​​

ಮೋದಿ ಸರ್‌ನೇಮ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಕೈ ನಾಯಕನ ಲೋಕಸಭೆ ಸದಸ್ಯತ್ವ ಅನರ್ಹತೆ ಆದೇಶವನ್ನು ಸ್ಪೀಕರ್ ವಾಪಸ್​ ಪಡೆದು ಇಂದು ಆದೇಶ ಹೊರಡಿಸಿದ್ದಾರೆ.

Congress leader Rahul Gandhi
ರಾಹುಲ್ ಗಾಂಧಿ

ನವದೆಹಲಿ : ಮೋದಿ ಉಪನಾಮ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ನೀಡಿತ್ತು. ಈ ಬೆನ್ನಲ್ಲೇ ಲೋಕಸಭೆ ಸದಸ್ಯತ್ವ ಅನರ್ಹತೆ ರದ್ದು ಗೊಳಿಸಿ ಇಂದು ಆದೇಶ ಹೊರಡಿಸಲಾಗಿದೆ.

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಅವರ ವಿರುದ್ಧ ಸೂರತ್​ ಕೋರ್ಟ್​ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕೆಲವೇ ದಿನಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರಳಿ ನೀಡಲಾಗಿದೆ. ಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ ಸಂಸತ್​ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದ ಆದೇಶವನ್ನು ವಾಪಸ್​ ಪಡೆಯಲಾಗಿದ್ದು, ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆಯಲ್ಲಿ ಇರುವುದೇನು?:ದಿನಾಂಕ 24ನೇ ಮಾರ್ಚ್, 2023ರಂದು ಸೂರತ್​ ಕೋರ್ಟ್​ ನೀಡಿದ್ದ ಆದೇಶವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು 04.08.2023 ರಂದು, ವಿಶೇಷ ರಜೆ (Crl.) ಸಂಖ್ಯೆ 8644/2023 ಅನ್ವಯ, ರಾಹುಲ್ ಗಾಂಧಿ ಅವರ ಅಪರಾಧ ನಿರ್ಣಯವನ್ನು ತಡೆ ಹಿಡಿಯುವ ಆದೇಶವನ್ನು ಜಾರಿಗೊಳಿಸಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ದಿನಾಂಕ 04.08.2023ರ ರಂದು ಸೂರತ್ ಕೋರ್ಟ್​ ಆದೇಶಕ್ಕೆ ತಡೆ ನೀಡಿರುವುದರಿಂದ ರಾಹುಲ್ ಗಾಂಧಿಯವರ ಅನರ್ಹತೆಯನ್ನು ಭಾರತದ ಸಂವಿಧಾನದ 102 (1) (ಇ) ನ ನಿಬಂಧನೆಗಳ ಪ್ರಕಾರ, ಪರಿಚ್ಛೇದ 8 ರಂತೆ 1951 ರ ಜನತಾ ಕಾಯಿದೆ ಅನ್ವಯ ಹಾಗೂ ಮುಂದಿನ ನ್ಯಾಯಾಂಗ ತೀರ್ಪುಗಳಿಗೆ ಒಳಪಟ್ಟು ಅವರ ಅನರ್ಹತೆಯನ್ನು ವಾಪಸ್​ ಪಡೆಯಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಲೋಕಸಭೆ ಅವರ ಅನರ್ಹತೆಯನ್ನು ವಾಪಸ್​ ಪಡೆದ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಮಂಗಳವಾರ ನಡೆಯಲಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್​ ಸ್ಪೀಕರ್​ಗೆ ಒತ್ತಾಯಿಸಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ಸೂರತ್​ ಕೋರ್ಟ್​ ಘೋಷಿಸಿತ್ತು. ಅಷ್ಟೇ ಅಲ್ಲ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 23 ರಿಂದ ಜಾರಿಗೆ ಬರುವಂತೆ ಮಾರ್ಚ್ 24 ರಂದು ರಾಹುಲ್​ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಸ್ಪೀಕರ್​ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಈ ಹಿಂದಿನ ಸುಪ್ರೀಂಕೋರ್ಟ್​ ಆದೇಶದಂತೆ, ಯಾವುದೇ ಸದಸ್ಯ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಒಳಗಾದರೆ, ಅಂತಹ ಶಾಸಕ, ಅಥವಾ ಸಂಸದರು ಸ್ವಯಂಚಾಲಿತವಾಗಿ ಅನರ್ಹಗೊಳ್ಳುತ್ತಾರೆ.

ಇದನ್ನು ಓದಿ:Lok Sabha polls: ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ: ಪ್ರದೀಪ್ ಭಟ್ಟಾಚಾರ್ಯ

ಸಿಹಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್ ನಾಯಕರು : ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರಳಿ ದೊರೆತಿರುವುದಕ್ಕೆ ಕಾಂಗ್ರೆಸ್ ನಾಯಕರು ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ​ ಖರ್ಗೆ ಸೇರಿದಂತೆ I.N.D.I.A ಮೈತ್ರಿಕೂಟದ ನಾಯಕರು ಸಹ ಭಾಗಿಯಾಗಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಪಿ. ಚಿದಂಬರಂ, "ಸ್ಪೀಕರ್ ಅವರು ಇಂದು ನಿರ್ಧಾರ ತೆಗೆದುಕೊಂಡಿರುವುದು ನಮಗೆ ಸಂತಸ ನೀಡಿದೆ. ರಾಹುಲ್ ಗಾಂಧಿ ಅವರು ಈಗ ಲೋಕಸಭೆಗೆ ಹಾಜರಾಗಬಹುದು" ಎಂದು ಹೇಳಿದರು. ಬಳಿಕ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್, "ನಾನು ರಾಹುಲ್ ಗಾಂಧಿಯನ್ನು ಅಭಿನಂದಿಸುತ್ತೇನೆ ಮತ್ತು ಅನರ್ಹತೆ ಆದೇಶ ವಾಪಸ್​ ಪಡೆಯಲು ವಿಳಂಬ ಮಾಡದ ಸ್ಪೀಕರ್‌ ಅವರಿಗೆ ಧನ್ಯವಾದಗಳು" ಎಂದು ಹೇಳಿದರು.

ನಂತರ ಮಾತನಾಡಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, "ಕಾಂಗ್ರೆಸ್ ನಾಯಕರು ಮತ್ತು ರಾಹುಲ್ ಗಾಂಧಿಗೆ ಅಭಿನಂದಿಸಲು ಬಯಸುತ್ತೇನೆ. ಸುಪ್ರೀಂ ಕೋರ್ಟ್‌ ನಿರ್ಧಾರದ ಬಳಿಕ ಪ್ರಜಾಪ್ರಭುತ್ವ ಮತ್ತು ನ್ಯಾಯಾಲಯಗಳ ಮೇಲೆ ಸಾರ್ವಜನಿಕರ ನಂಬಿಕೆ ಹೆಚ್ಚಾಗಿದೆ" ಎಂದರು.

Last Updated : Aug 7, 2023, 12:08 PM IST

ABOUT THE AUTHOR

...view details