ಗ್ವಾಲಿಯರ್(ಮಧ್ಯಪ್ರದೇಶ ): ಪ್ರಜಾಪ್ರಭುತ್ವದ ಮಹತ್ವ ಮತ್ತು ಹಕ್ಕುಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಗಳಲ್ಲಿ 'ಭಾರತದ ಸಂವಿಧಾನವನ್ನು ಉಳಿಸಿ' ಎಂದು ಬರೆಸಿದ್ದಾರೆ. ಇದೀಗ ಈ ವಿಶಿಷ್ಟ ಪ್ರಯತ್ನ ಜನರ ಗಮನ ಸೆಳೆಯುತ್ತಿದ್ದು, ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ 140 ಕೋಟಿ ನಾಗರಿಕರ ಹಕ್ಕುಗಳನ್ನು ಉಳಿಸಬೇಕು, ಆಗ ಮಾತ್ರ ಭಾರತ ಉಳಿಯುತ್ತದೆ ಎಂಬ ಸಂದೇಶ ಕಾರ್ಡ್ನಲ್ಲಿದೆ.
ಚಂಬಲ್ ವಲಯದ ದಲಿತ ಮುಖಂಡ ಫೂಲ್ ಸಿಂಗ್ ಬರಯ್ಯ ಮಾತನಾಡಿ, ಮದುವೆಯ ಮೆರವಣಿಗೆಯಲ್ಲಿ ವರನ ಸಂಬಂಧಿಕರಿಗೆ ಸಂವಿಧಾನದ ಪ್ರತಿಯನ್ನು ಉಡುಗೊರೆಯಾಗಿ ನೀಡಲಾಗುವುದು. ಸಂವಿಧಾನವನ್ನು ಉಳಿಸಲು ಎಲ್ಲಾ ಜನರನ್ನು ಪ್ರೇರೇಪಿಸುವುದೇ ಇದರ ಉದ್ದೇಶವಾಗಿದೆ. ನಾವು ಸಂವಿಧಾನದ ಸುಮಾರು 400 ಪ್ರತಿಗಳನ್ನು ಮುದ್ರಿಸಿದ್ದೇವೆ. ಏಪ್ರಿಲ್ 11 ರಂದು ಗ್ವಾಲಿಯರ್ನಲ್ಲಿ ಮದುವೆ ಇದೆ ಎಂದು ಅವರು ಮಾಹಿತಿ ನೀಡಿದ ಅವರು, ಯಾರೂ ಸಹ ಉಡುಗೊರೆಗಳನ್ನು ಮದುವೆಗೆ ತರದಂತೆ ಕಾರ್ಡ್ನಲ್ಲಿಯೇ ವಿನಂತಿಸಿದ್ದೇವೆ ಎಂದು ಹೇಳಿದರು.