ಜೈಪುರ್ (ರಾಜಸ್ಥಾನ):ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ "ಪಕ್ಷದ ಆಸ್ತಿ" ಎಂದು ಬಣ್ಣಿಸಿದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಮಂಗಳವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಪುನರುಚ್ಚರಿಸಿದರು. ಈ ಮೂಲಕ ವೇಣುಗೋಪಾಲ್ ರಾಜಸ್ಥಾನ ಕಾಂಗ್ರೆಸ್ನಲ್ಲಿ ಒಗ್ಗಟ್ಟಿನ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.
ಸಿಎಂ ಅಶೋಕ್ ಗೆಹ್ಲೋಟ್, ಸಚಿನ ಪೈಲಟ್ರನ್ನು ದ್ರೋಹಿ ಎಂದು ಕರೆದಿದ್ದರು. ಆದರೆ ಈಗ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಕೈ ಹಿಡಿದುಕೊಂಡು ಪೋಸ್ ನೀಡುವ ಮೂಲಕ ಭಿನ್ನಮತದ ಬಿಕ್ಕಟ್ಟನ್ನು ಶಮನಗೊಳಿಸಲಾಗಿದೆ ಎಂದು ಸಂದೇಶ ನೀಡಿದಂತಾಗಿದೆ. ಮೂಲಗಳ ಪ್ರಕಾರ ವೇಣುಗೋಪಾಲ್ ಅವರು ಜೈಪುರದ ರಾಜ್ಯ ಕಾಂಗ್ರೆಸ್ ಸಮಿತಿ ವಾರ್ ರೂಂನಲ್ಲಿ ಪಕ್ಷದ ಎಲ್ಲಾ ರಾಜ್ಯ ನಾಯಕರ ಸಭೆ ನಡೆಸಿದರು.
ನಾವು ಒಗ್ಗಟ್ಟಾಗಿದ್ದೇವೆ. ಇಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಡಾಗಿದೆ ಎಂಬುದನ್ನು ಅಶೋಕ್ ಜಿ ಮತ್ತು ಸಚಿನ್ ಪೈಲಟ್ ಜಿ ತೋರಿಸಿದ್ದಾರೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಪಕ್ಷಕ್ಕೆ ಆಸ್ತಿ ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.
ಬಂಡಾಯವೇ ರಾಜ್ಯ ಕಾಂಗ್ರೆಸ್ನಲ್ಲಿ ಬಿಕ್ಕಟ್ಟನ್ನು ಉಂಟುಮಾಡಿದೆ ಎಂದು ಆರೋಪಿಸಿರುವ ಸಚಿನ್ ಪೈಲಟ್, ಡಿಸೆಂಬರ್ 5 ರಂದು ರಾಜ್ಯವನ್ನು ಪ್ರವೇಶಿಸುವ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ರಾಜ್ಯವು ಸಜ್ಜಾಗಿದೆ ಎಂದು ಹೇಳಿದರು.