ಕರ್ನಾಟಕ

karnataka

ಮಣಿಪುರ ಹಿಂಸಾಚಾರ ಜನಾಂಗೀಯವಲ್ಲ, ಇದು ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧ: ಸಿಎಂ ಬಿರೇನ್ ಸಿಂಗ್

By ETV Bharat Karnataka Team

Published : Oct 2, 2023, 6:29 PM IST

ಮಣಿಪುರದಲ್ಲಿನ ಬಿಕ್ಕಟ್ಟು ಜನಾಂಗೀಯ ಸಂಘರ್ಷ ಅಲ್ಲ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ.

CM Biren Singh
ಮಣಿಪುರ ಸಿಎಂ ಬಿರೇನ್ ಸಿಂಗ್

ಇಂಫಾಲ್:''ಮಣಿಪುರದ ಪ್ರಸ್ತುತ ಬಿಕ್ಕಟ್ಟು ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಯಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೂ ಅಲ್ಲ. ಇದಕ್ಕೆ ನೆರೆಯ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಕುಕಿ ಉಗ್ರಗಾಮಿ ಗುಂಪುಗಳ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯೇ ಕಾರಣ'' ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಗಂಭೀರ ಆರೋಪ ಮಾಡಿದರು.

''ಅವರು ರಾಜ್ಯವನ್ನು ಒಡೆಯಲು ಬಯಸುತ್ತಿದ್ದಾರೆ. ರಾಜ್ಯವನ್ನು ವಿಘಟನೆ ಮಾಡಲು ಬಯಸುವ ಜನರ ಗುಂಪಿನಿಂದ ಅಶಾಂತಿ ಉಂಟಾಗಿದೆ. ಆದರೆ, ಈ ಬಿಕ್ಕಟ್ಟನ್ನು ಜನಾಂಗೀಯ, ಕೋಮುವಾದ, ಧಾರ್ಮಿಕ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಗುಂಪುಗಳ ನಡುವಿನ ಘರ್ಷಣೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಜನರ ಧ್ವನಿಯಿಂದ ಸಂಘರ್ಷಕ್ಕೆ ನಿಜವಾದ ಕಾರಣವೇನು ಎಂಬುದು ಹೊರಬಿದ್ದಿದೆ'' ಎಂದು ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧ: ''ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ನೀಡಿದ ಹೇಳಿಕೆಗಳು ಮತ್ತು ಮುಖ್ಯವಾಗಿ ಆರೋಪಿಗಳ ಬಂಧನದ ಕುರಿತು ಕೇಂದ್ರ ತನಿಖಾ ಸಂಸ್ಥೆಯ ಹೇಳಿಕೆಗಳನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಮಣಿಪುರದ ಬಿಕ್ಕಟ್ಟಿನ ಹಿಂದಿನ ಸ್ಪಷ್ಟ ಕಾರಣಗಳ ಬಗ್ಗೆ ಮಾತನಾಡಿದರು. "ಈ ವಿಷಯವು ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧವಾಗಿರುವುದರಿಂದ, ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದರು.

''ಆರಂಭದಲ್ಲಿ ಇಬ್ಬರು ವಿದ್ಯಾರ್ಥಿನಿಯರ ಹತ್ಯೆಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕ್ಕೊಳಗಾಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಜನರು ಕಾನೂನು ಪಾಲಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಪ್ರತಿಭಟನೆ, ಸಭೆ ಸಮಾರಂಭಗಳನ್ನು ನಡೆಸುವಾಗ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಜೊತೆಗೆ ಕಾನೂನು ಪಾಲಿಸುವಂತೆಯೂ ಅವರು ತಿಳಿಸಿದರು. ನಿಯಮಗಳನ್ನು ಪಾಲಿಸಿದರೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ತಪ್ಪು ತಿಳುವಳಿಕೆ ಮತ್ತು ಘರ್ಷಣೆಗಳನ್ನು ತಪ್ಪಿಸಬಹುದು" ಎಂದು ಸಿಎಂ ಸಲಹೆ ನೀಡಿದರು.

ಮತ್ತೊಂದೆಡೆ, ಮಣಿಪುರದ ಆದಿವಾಸಿಗಳ ಅತ್ಯುನ್ನತ ಸಂಸ್ಥೆಯಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF), ಭಾನುವಾರ ಚುರಾಚಂದ್‌ಪುರ ಜಿಲ್ಲೆಯಲ್ಲಿ 'ಇಬ್ಬರು ಅಪ್ರಾಪ್ತರು ಸೇರಿದಂತೆ 7 ಕುಕಿ-ಜೋ ಜನರ ಅಪಹರಣ' ವಿರೋಧಿಸಿ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದೆ. ಐಟಿಎಲ್‌ಎಫ್ ಏಳು ಅಪಹರಣಕ್ಕೊಳಗಾದವರನ್ನು 48 ಗಂಟೆಗಳ ಒಳಗೆ ಬಿಡುಗಡೆ ಮಾಡುವಂತೆ NIA ಮತ್ತು CBIಗೆ ಒತ್ತಾಯಿಸಿದೆ. ವಿಫಲವಾದರೆ, ಮಣಿಪುರದ ಎಲ್ಲಾ ಗುಡ್ಡಗಾಡು ಜಿಲ್ಲೆಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು" ಎಂದು ಐಟಿಎಲ್​ಎಫ್​ ವಕ್ತಾರ ಗಿಂಜಾ ವಲ್ಜಾಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ:ಗೋಲ್ಡನ್​ ಟೆಂಪಲ್​ಗೆ ಭೇಟಿ ನೀಡಿ ಸ್ವಯಂಸೇವೆಯ ಭಾಗವಾಗಿ ಪಾತ್ರೆ ತೊಳೆದ ರಾಹುಲ್​ ಗಾಂಧಿ​

ABOUT THE AUTHOR

...view details