ಕರ್ನಾಟಕ

karnataka

By

Published : Oct 2, 2021, 7:25 PM IST

ETV Bharat / bharat

ಭತ್ತ ಖರೀದಿ ವಿಳಂಬ ವಿರೋಧಿಸಿ ಜನಪ್ರತಿನಿಧಿಗಳ ನಿವಾಸಕ್ಕೆ ರೈತರ ಘೇರಾವ್ ​: ಪೊಲೀಸರಿಂದ ಲಾಠಿಚಾರ್ಜ್​

ರೈತರು ಸರ್ಕಾರದ ಮೊದಲ ಘೋಷಣೆಯಂತೆ ಭತ್ತವನ್ನು ಮಂಡಿಗಳಿಗೆ ತಂದಿದ್ದಾರೆ. ಆದರೆ, ಮಂಡಿಯಲ್ಲಿ ಶೆಡ್‌ಗಳ ವ್ಯವಸ್ಥೆ ಇಲ್ಲ ಮತ್ತು ಭಾರಿ ಮಳೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಬಿದ್ದಿರುವ ಬೆಳೆ ಕೊಳೆಯುತ್ತಿದೆ. ಮಳೆಯಿಂದಾಗಿ ರೈತರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಭತ್ತ ಖರೀದಿಸುವವರೆಗೂ ಪ್ರತಿಭಟನೆ ಮತ್ತು ಧರಣಿಗಳು ಮುಂದುವರಿಯಲಿವೆ ಎಂದು ರೈತರು ಘೋಷಿಸಿದ್ದಾರೆ..

haryana
ಭತ್ತ ಖರೀದಿ ವಿಳಂಬ ವಿರೋಧಿಸಿ

ಚಂಡೀಗಢ :ಹರಿಯಾಣ ಸರ್ಕಾರದಿಂದ ಭತ್ತ ಸಂಗ್ರಹಣೆಯಲ್ಲಿ ವಿಳಂಬವಾಗಿದ್ದಕ್ಕೆ ಕೋಪಗೊಂಡ ರೈತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಲ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿವಾಸದ ಬಳಿ ಮುತ್ತಿಗೆ ಹಾಕಿ ಅವರ ಮನೆ ಛಾವಣಿಯ ಮೇಲೆ ತಮ್ಮ ಧ್ವಜ ಹಾರಿಸಿದ್ದಾರೆ.

ಭತ್ತ ಖರೀದಿ ವಿಳಂಬ ವಿರೋಧಿಸಿ ರೈತರ ಪ್ರತಿಭಟನೆ..

ಅಕ್ಟೋಬರ್ 1ರಿಂದ ಭತ್ತ ಖರೀದಿ ಆರಂಭವಾಗಲಿದೆ ಎಂದು ಸರ್ಕಾರ ಆರಂಭದಲ್ಲಿ ಹೇಳಿತ್ತು. ಆದರೆ, ಸೆಪ್ಟೆಂಬರ್ 30 ರಂದು ಹೊಸದಾಗಿ ಅಧಿಸೂಚನೆ ಹೊರಡಿಸಿ ಅಕ್ಟೋಬರ್ 11 ರಿಂದ ಖರೀದಿ ಆರಂಭವಾಗಲಿದೆ ಎಂದಿದೆ.

ಈ ವಿಳಂಬ ನೀತಿ ರೈತರನ್ನು ಕೆರಳಿಸಿದೆ. ಶನಿವಾರ ಬಿಜೆಪಿ ನಾಯಕರ ಮನೆ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಅನುಸರಿಸಿ ವಿವಿಧ ಜಿಲ್ಲೆಗಳಲ್ಲಿ ರೈತರು ಬಿಜೆಪಿ ಮತ್ತು ಜೆಜೆಪಿ ಶಾಸಕರು ಮತ್ತು ಸಂಸದರ ಮನೆಗಳನ್ನು ಮುತ್ತಿಗೆ ಹಾಕಿದ್ದಾರೆ.

ಕುರುಕ್ಷೇತ್ರದಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಥಾನೇಸರ್‌ನಲ್ಲಿರುವ ಬಿಜೆಪಿ ಶಾಸಕ ಸುಭಾಷ್ ಸುಧಾ ಅವರ ನಿವಾಸವನ್ನು ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಪ್ರಯತ್ನಿಸಿದ ವೇಳೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ.

ಅಂಬಾಲದಲ್ಲಿ ರೈತರು ಬಿಜೆಪಿ ಶಾಸಕ ಅಸಿಮ್ ಗೋಯಲ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬಿಜೆಪಿ ಶಾಸಕರ ಮನೆಗೆ ಹೋಗುವ ರಸ್ತೆಗಳಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ರೈತರು ಕಿತ್ತು ಹಾಕಿದ್ದು, ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಪಂಚಕುಲದಲ್ಲಿ ಕೂಡ ಪ್ರತಿಭಟನಾನಿರತ ರೈತರು ವಿಧಾನಸಭಾ ಸ್ಪೀಕರ್ ಜ್ಞಾನಚಂದ್ ಗುಪ್ತಾ ಅವರ ನಿವಾಸವನ್ನು ಸುತ್ತುವರಿದು ಘೇರಾವ್​ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನೇ ಟ್ರ್ಯಾಕ್ಟರ್‌ ಮೂಲಕ ಬೀಳಿಸಲು ಪ್ರಯತ್ನಿಸಿದರು. ಆಕ್ರೋಶಗೊಂಡ ರೈತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.

ರೈತರು ಸರ್ಕಾರದ ಮೊದಲ ಘೋಷಣೆಯಂತೆ ಭತ್ತವನ್ನು ಮಂಡಿಗಳಿಗೆ ತಂದಿದ್ದಾರೆ. ಆದರೆ, ಮಂಡಿಯಲ್ಲಿ ಶೆಡ್‌ಗಳ ವ್ಯವಸ್ಥೆ ಇಲ್ಲ ಮತ್ತು ಭಾರಿ ಮಳೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಬಿದ್ದಿರುವ ಬೆಳೆ ಕೊಳೆಯುತ್ತಿದೆ. ಮಳೆಯಿಂದಾಗಿ ರೈತರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಭತ್ತ ಖರೀದಿಸುವವರೆಗೂ ಪ್ರತಿಭಟನೆ ಮತ್ತು ಧರಣಿಗಳು ಮುಂದುವರಿಯಲಿವೆ ಎಂದು ರೈತರು ಘೋಷಿಸಿದ್ದಾರೆ.

"ನಾಳೆ ಖರೀದಿಸಲು ಪ್ರಾರಂಭಿಸಿ, ಇಲ್ಲದಿದ್ದರೆ ನಿಮ್ಮ ಶಾಸಕರು, ಸಂಸದರು ಮತ್ತು ನಾಯಕರ ಮನೆಗಳು ಮನೆಯ ನಾಯಿಯನ್ನು ಕೂಡ ಹೊರಗೆ ಬರಲು ಸಾಧ್ಯವಾಗದ ರೀತಿ ಸುತ್ತುವರಿಯುತ್ತೇವೆ'' ಎಂದು ರೈತ ಮುಖಂಡ ಗುರ್ನಾಮ್ ಚದುನಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದರು.''ರೈತರೇ, ನಾಳೆವರೆಗೂ ಕಾಯಿರಿ, ಖರೀದಿಗೆ ಸರ್ಕಾರ ಬರದಿದ್ದರೆ, ಶನಿವಾರ ಜನಪ್ರತಿನಿಧಿಗಳ ಮನೆಗಳಿಗೆ ಮುತ್ತಿಗೆ ಹಾಕಿ'' ಎಂದು ಗುರ್ನಾಮ್ ಚದುನಿ ಹೇಳಿಕೆ ನೀಡಿದ್ದರು. ಅದರಂತೆ ಸರ್ಕಾರ ಶುಕ್ರವಾರ ಖರೀದಿಗೆ ಮುಂದಾಗದ ಹಿನ್ನೆಲೆ ಶನಿವಾರ ರೊಚ್ಚಿಗೆದ್ದ ರೈತರು ಬಿಜೆಪಿ ಶಾಸಕರು, ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಪ್ರಾರಂಭಿಸಿದ್ದಾರೆ.

ABOUT THE AUTHOR

...view details