ಕರ್ನಾಟಕ

karnataka

ಲಂಡನ್​ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ ಛತ್ರಪತಿ ಶಿವಾಜಿಯ 'ವಾಘ್​ ನಖ್​': ಹಿಂತಿರುಗಿಸಲು ಒಪ್ಪಿದ ಬ್ರಿಟನ್​ ಸರ್ಕಾರ

By ETV Bharat Karnataka Team

Published : Sep 8, 2023, 6:07 PM IST

Updated : Sep 8, 2023, 7:07 PM IST

Shivaji Maharaj Wagh Nakh returns to Maharashtra: ಶಿವಾಜಿ ಬಳಸಿದ ವಾಘ್​ ನಖ್​ ಹಿಂತಿರುಗಿಸಲು ಒಪ್ಪಿಗೆ ಸೂಚಿಸಿ ಪತ್ರ ಬರೆದಿರುವ ಬ್ರಿಟನ್​ ಸರ್ಕಾರ

Chhatrapati Shivaji Wagh Nakh
ಛತ್ರಪತಿ ಶಿವಾಜಿಯ 'ವಾಘ್​ ನಖ್​'

ಮುಂಬೈ (ಮಹಾರಾಷ್ಟ್ರ) : ಇತಿಹಾಸ ಪ್ರಸಿದ್ಧ ಮರಾಠ ನಾಯಕ ಛತ್ರಪತಿ ಶಿವಾಜಿಯ 'ವಾಘ್​ ನಖ್​' (ಹುಲಿಯ ಉಗುರು) ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದೆ. 1659ರಲ್ಲಿ ಬಿಜಾಪುರ ಸುಲ್ತಾನರ ಜನರಲ್​ ಅಫ್ಜಲ್​ ಖಾನ್​ನನ್ನು ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜ ಬಳಸಿದ್ದ ಹುಲಿ ಉಗುರುಗಳ ಆಕಾರದ ಕಠಾರಿಯನ್ನು ಮರಳಿ ಭಾರತಕ್ಕೆ ನೀಡಲು ಯುಕೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್​​ ಮುಂಗಂತಿವಾರ್​ ಅವರು ಅಕ್ಟೋಬರ್​ ಆರಂಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಲು ಲಂಡನ್​ಗೆ ಭೇಟಿ ನೀಡಲಿದ್ದಾರೆ.

ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ಸಚಿವ, ವಾಘ್​ ನಖ್​ ಅಕ್ಟೋಬರ್​ನಲ್ಲಿ ಮಹಾರಾಷ್ಟ್ರಕ್ಕೆ ಬರಲಿದೆ. ಈ ಬಗ್ಗೆ ಬ್ರಿಟನ್​ ಸರ್ಕಾರದಿಂದ ಪತ್ರವೂ ಬಂದಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಬ್ರಿಟನ್​ ಜೊತೆ ಪತ್ರ ವ್ಯವಹಾರ: ಮರಾಠ ಸಾಮ್ರಾಜ್ಯದ ಐತಿಹಾಸಿಕ ಪ್ರತೀಕವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಜಗದಂಬಾ ಖಡ್ಗ ಹಾಗೂ ಪ್ರಸಿದ್ಧ ವಾಘ್​ ನಖ್​ ಅನ್ನು ಮರಳಿ ಸ್ವದೇಶಕ್ಕೆ ತರಲು ರಾಜ್ಯ ಸರ್ಕಾರ ಬ್ರಿಟಿಷ್​ ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡಿದೆ. ಪತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಬ್ರಿಟನ್​ ಸರ್ಕಾರ ನೀಡಿದೆ. ಈ ಮೂಲಕ ಶಿವಾಜಿ ಮಹಾರಾಜರ ಎರಡು ಆಯುಧಗಳು ಮಹಾರಾಷ್ಟ್ರಕ್ಕೆ ಮರಳುತ್ತಿದ್ದು, ಮರಾಠಿಗರ ಸಂತಸ ಉತ್ತುಂಗಕ್ಕೆ ಏರಿದೆ ಎಂದು ಮುಂಗಂತಿವಾರ್​ ಹೇಳಿದರು.

ಪ್ರಸ್ತುತ ಬ್ರಿಟನ್​ನಲ್ಲಿರುವ ವಾಘ್​ ನಖ್​: ಶಿವಾಜಿ ಮಹಾರಾಜರು ಅಫ್ಜಲ್​ ಖಾನ್​ನನ್ನು ಕೊಲ್ಲಲು ಬಳಸಿದ್ದ ಹುಲಿ ಉಗುರಿನ ಆಕಾರದ ಆಯುಧವನ್ನು ಬ್ರಿಟನ್​ನಿಂದ ವಾಪಸ್​ ಮಹಾರಾಷ್ಟ್ರಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರ ಬ್ರಿಟನ್​ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಒಪ್ಪಂದಕ್ಕೆ ಸಚಿವ ಮುಂಗಂತಿವಾರ್​ ಅಕ್ಟೋಬರ್​ ಆರಂಭದಲ್ಲಿ ಬ್ರಿಟನ್​ಗೆ ತೆರಳಿ ಸಹಿ ಹಾಕಲಿದ್ದಾರೆ. ಸದ್ಯ ಈ ವಾಘ್​ ನಘ್​ ಕಠಾರಿಯನ್ನು ಬ್ರಿಟನ್​ನ ವಿಕ್ಟೋರಿಯಾ ಮತ್ತು ಆಲ್ಬರ್ಟ್​ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.

"ವಾಘ್​ ನಖ್​ ಅನ್ನು ಮಹಾರಾಷ್ಟ್ರಕ್ಕೆ ಹಿಂತಿರುಗಿಸಲು ಬ್ರಿಟನ್​ ಒಪ್ಪಿಕೊಂಡಿದ್ದು, ಹಿಂದೂ ಕ್ಯಾಲೆಂಡರ್​ ಆಧಾರದಲ್ಲಿ ಶಿವಾಜಿ ಅಫ್ಜಲ್​ ಖಾನ್​ನನ್ನು ಕೊಂದ ದಿನದ ವಾರ್ಷಿಕೋತ್ಸವಕ್ಕೆ ಅದನ್ನು ಮರಳಿ ಪಡೆಯಲು ಚಿಂತಿಸುತ್ತಿದ್ದೇವೆ. ಗ್ರೆಗೋರಿಯನ್​ ಕ್ಯಾಲೆಂಡರ್​ ಆಧಾರದ ಮೇಲೆ ಶಿವಾಜಿ ಅಫ್ಜಲ್​ ಖಾನ್​ನನ್ನು ಹತ್ಯೆ ಮಾಡಿದ ದಿನಾಂಕ ನವೆಂಬರ್​ 10. ಆದರೆ, ನಾವು ಹಿಂದೂ ತಿಥಿ ಕ್ಯಾಲೆಂಡರ್​ ಆಧರಿಸಿ ದಿನಾಂಕಗಳನ್ನು ರೂಪಿಸುತ್ತಿದ್ದೇವೆ. ಇಲ್ಲವಾದಲ್ಲಿ ಇತರ ಕೆಲವು ದಿನಾಂಕಗಳನ್ನು ಕೂಡ ಪರಿಗಣಿಸಲಾಗುತ್ತಿದೆ. ಅದರ ಜೊತೆಗೆ ವಾಘ್​ ನಖ್​ ಅನ್ನು ಹಿಂದಕ್ಕೆ ತರುವ ವಿಧಾನಗಳನ್ನು ಕೂಡ ರೂಪಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಸಿದ್ಧ ವಾಘ್​ ನಖ್​ ಅಕ್ಟೋಬರ್​ನಲ್ಲಿಯೇ ಮಹಾರಾಷ್ಟ್ರಕ್ಕೆ ಬರಬಹುದು" ಎಂದು ತಿಳಿಸಿದ್ದಾರೆ.

ಕೆಲವು ಮೂಲಗಳ ಪ್ರಕಾರ ಈ ಹುಲಿಯ ಉಗುರುಗಳ ಆಕಾರದ ಕಠಾರಿಯನ್ನು ಮೂಲತಃ ಇತಿಹಾಸಕಾರ ಜೇಮ್ಸ್​ ಗ್ರಾಂಟ್​ ಡಫ್​ ಕಂಡು ಹಿಡಿದರು ಎಂದು ಹೇಳಲಾಗುತ್ತದೆ. ಇಂಗ್ಲ್ಯಾಂಡ್​ ಪ್ರವಾದ ಸಮಯದಲ್ಲಿ ಸಚಿವರ ನೇತೃತ್ವದ ತಂಡ ವಾಘ್​ ನಖ್​ ವಾಪಸಾತಿಗೆ ಸಹಿ ಹಾಕುವುದರ ಜೊತೆಗೆ, ಶಿವಾಜಿಗೆ ಸಂಬಂಧಿಸಿದ ಇತರ ಯಾವುದಾದರೂ ವಸ್ತುಗಳಿವೆಯೇ ಎಂಬುದನ್ನು ನೋಡಲು ಅಲ್ಲಿನ ಇತರ ವಸ್ತು ಸಂಗ್ರಹಾಲಯಗಳಿಗೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಈ ವರ್ಷ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷವನ್ನು ಆಚರಿಸಲಾಗುತ್ತಿದೆ. ಪ್ರಜೆಗಳಿಗೆ ಕ್ರೂರ ಹಿಂಸೆ ನೀಡುತ್ತಿದ್ದ ಅಫ್ಜಲ್​ ಖಾನ್​ನನ್ನು ಸದೆಬಡಿಯಲು ಶಿವಾಜಿ ಮಹಾರಾಜರು ಮಾತುಕತೆ ನಡೆಸಲು ನಿರ್ಧರಿಸಿದ್ದರು. ಈ ಮಾತುಕತೆ ವೇಳೆ ಯಾವುದೇ ಸೈನ್ಯ, ಶಸ್ತ್ರಾಸ್ತ್ರಗಳು ಇರಬಾರದು ಎನ್ನುವ ಒಪ್ಪಂದವಾಗಿತ್ತು. ಶಿವಾಜಿ ಒಪ್ಪಂದಕ್ಕೆ ಬದ್ಧವಾಗಿದ್ದರೆ, ಕ್ರೂರಿ ಅಫ್ಜಲ್​ ಖಾನ್​ ಭೇಟಿ ವೇಳೆ ಶಿವಾಜಿ ಮಹಾರಾಜರನ್ನು ಕೊಲ್ಲಲು ಸಂಚು ರೂಪಿಸಿದ್ದ. ತಮ್ಮ ಮೇಲೆ ಅಫ್ಜಲ್​ ಖಾನ್​ ದಾಳಿ ಮಾಡಿದ್ದ ಸಮಯದಲ್ಲಿ ಶಿವಾಜಿ ಮಹಾರಾಜರು ಕೋಟ್​ ತೆಗೆದು ಒಳಗಿಟ್ಟಿದ್ದ ಹುಲಿಯ ಉಗುರುಗಳ ಆಕಾರದ ಕಠಾರಿಯಿಂದ ಆತನನ್ನು ಕೊಂದಿದ್ದರು. ಆದ್ದರಿಂದ ವಾಘ್​ ನಖ್​ ನಮಗೆ ನಂಬಿಕೆಯ ವಿಷಯವಾಗಿದೆ. ಅದನ್ನು ಲಂಡನ್​ನಿಂದ ಮಹಾರಾಷ್ಟ್ರಕ್ಕೆ ತರಲು ಅಕ್ಟೋಬರ್​ 1 ರಂದು ರಾತ್ರಿ ಲಂಡನ್​ಗೆ ತರೆಳಲಿದ್ದೇವೆ" ಎಂದು ತಿಳಿಸಿದ್ದಾರೆ.

ಜಗದಂಬಾ ಖಡ್ಗ ತರಲು ತಾಂತ್ರಿಕ ತೊಂದರೆ:"ಛತ್ರಪತಿ ಶಿವಾಜಿ ಮಹಾರಾಜರು ದೇವರಲ್ಲ. ಆದರೆ ನಮಗೆ ಅವರು ದೇವರಿಗಿಂತ ಕಡಿಮೆಯೇನಲ್ಲ. ವಾಘ್​ ನಖ್​ ಜೊತೆ ಶಿವಾಜಿ ಮಹಾರಾಜರ ಜಗದಂಬಾ ಖಡ್ಗವನ್ನು ಕೂಡ ಮಹಾರಾಷ್ಟ್ರಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಆದರೆ ಇದಕ್ಕೆ ಕೆಲವು ತಾಂತ್ರಿಕ ತೊಂದರೆಗಳಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು" ಎಂದರು.

ಪ್ರತಿಪಕ್ಷಗಳ ಟೀಕೆ:ವಾಘ್​ ನಖ್​ ಅನ್ನು ಮಹಾರಾಷ್ಟ್ರಕ್ಕೆ ತರುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನವನ್ನು ವಿಪಕ್ಷಗಳು ಟೀಕಿಸಿವೆ. ಇದರ ಹಿಂದೆ ರಾಜಕೀಯ ಇದೆ. ಚುನಾವಣೆ ಸಮೀಪಿಸುತ್ತಿದ್ದು, ಆಡಳಿತ ಪಕ್ಷ ಈ ಕುತಂತ್ರ ನಡೆಸಿದೆ ಎಂದು ಆರೋಪಿಸಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಮುಂಗಂತಿವಾರ್​, 'ಮೂರ್ಖರು ಮಾತ್ರ ಇಂತಹ ಆರೋಪ ಮಾಡಲು ಸಾಧ್ಯ. ಇದು ಛತ್ರಪತಿ ಶಿವಾಜಿ ಮಹಾರಾಜ ಪಟ್ಟಾಭಿಷೇಕ ಸಮಾರಂಭವೇ ಹೊರತು ಇದು ಚುನಾವಣಾ ಕಾರ್ಯಕ್ರಮವಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿವಾದ: ಆರೋಪ ಸಾಬೀತು ಪಡಿಸಿದರೆ ರಾಜೀನಾಮೆ... ಎಂಎಲ್​ಸಿ ಪೂಜಾರ ಸವಾಲು

Last Updated : Sep 8, 2023, 7:07 PM IST

ABOUT THE AUTHOR

...view details