ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನ ಐತಿಹಾಸಿಕ ಸಂಕೇತವಾದ ಚಾರ್ ಮಿನಾರ್ ಇನ್ನು ಮುಂದೆ ವರ್ಷಪೂರ್ತಿ ವಿದ್ಯುದ್ಧೀಪಗಳಿಂದ ಜಗಮಗಿಸಲಿದೆ. ಪ್ರಸಿದ್ಧ ಸ್ಮಾರಕವಾಗಿರುವ ಚಾರ್ಮಿನಾರ್ ಮುಂಭಾಗದ ವಿದ್ಯುದ್ದೀಪದ ವ್ಯವಸ್ಥೆಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಶನಿವಾರ ರಾತ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಾರ್ಮಿನಾರ್ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಅದ್ಭುತವಾಗಿ ಬೆಳಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ರೆಡ್ಡಿ, "ಇನ್ನು ಮುಂದೆ ವರ್ಷವಿಡೀ ಪ್ರತಿದಿನ ಸಂಜೆ ಚಾರ್ಮಿನಾರ್ ಅನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು" ಎಂದು ಘೋಷಿಸಿದರು. ಚಾರ್ಮಿನಾರ್ ಅನ್ನು 1591 ರಲ್ಲಿ ಕುತುಬ್ ಶಾಹಿ ರಾಜವಂಶದ ಐದನೇ ರಾಜ ಮೊಹಮ್ಮದ್ ಕುಲಿ ಕುತುಬ್ ಷಾ ನಿರ್ಮಿಸಿದರು. 432 ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ನೆಲಮಟ್ಟದಿಂದ 160 ಅಡಿ ಎತ್ತರದಲ್ಲಿದೆ. ಇದು ನಾಲ್ಕು ಮಿನಾರ್ಗಳನ್ನು ಹೊಂದಿದೆ. ನಾಲ್ಕು ಮಿನಾರ್ಗಳು ಇರುವುದರಿಂದಲೇ ಇದಕ್ಕೆ ಚಾರ್ಮಿನಾರ್ ಎಂದು ಹೆಸರಿಡಲಾಗಿದೆ.
"ರಾಷ್ಟ್ರೀಯ ಸಂಸ್ಕೃತಿ ನಿಧಿ (ಎನ್ಸಿಎಫ್) ಮತ್ತು ಇಂಡಿಯನ್ ಆಯಿಲ್ ಫೌಂಡೇಶನ್ (ಐಒಎಫ್) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್ಐ) ಇಲಾಖೆ ಇವುಗಳ ಕ್ರಮದಿಂದ ಇನ್ನೂ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಈ ಐತಿಹಾಸಿಕ ಸ್ಥಳಕ್ಕೆ ಆಗಮಿಸಲಿದ್ದಾರೆ" ಎಂದು ಕಿಶನ್ ರೆಡ್ಡಿ ಹೇಳಿದರು. ಐಒಎಫ್ ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಇಂಡಿಯನ್ ಆಯಿಲ್ ಕಂಪನಿ ಸ್ಥಾಪಿಸಿದ ಲಾಭರಹಿತ ಟ್ರಸ್ಟ್ ಆಗಿದೆ.
"ಗೋಲ್ಕೊಂಡ ಕೋಟೆ, ವಾರಂಗಲ್ ಕೋಟೆ ಮತ್ತು ಸಾವಿರ ಕಂಬಗಳ ದೇವಾಲಯಕ್ಕೆ ಇದೇ ರೀತಿಯ ಬೆಳಕಿನ ವ್ಯವಸ್ಥೆಯನ್ನು ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು" ಎಂದು ಕೇಂದ್ರ ಸಚಿವರು ಹೇಳಿದರು.