ಕರ್ನಾಟಕ

karnataka

Charminar Lighting: ಪ್ರತಿದಿನ ಸಂಜೆ ದೀಪಾಲಂಕಾರದಿಂದ ಕಂಗೊಳಿಸಲಿದೆ ಚಾರ್​ಮಿನಾರ್

By

Published : Aug 6, 2023, 3:39 PM IST

Charminar Lighting: ಹೈದರಾಬಾದ್​ನಲ್ಲಿರುವ ಚಾರ್ಮಿನಾರ್ ಇನ್ನು ಮುಂದೆ ಪ್ರತಿದಿನ ಸಂಜೆ ದೀಪಾಲಂಕಾರದಿಂದ ಕಂಗೊಳಿಸಲಿದೆ.

hyderabads iconic charminar
hyderabads iconic charminar

ಹೈದರಾಬಾದ್ (ತೆಲಂಗಾಣ): ಹೈದರಾಬಾದ್​ನ ಐತಿಹಾಸಿಕ ಸಂಕೇತವಾದ ಚಾರ್ ಮಿನಾರ್ ಇನ್ನು ಮುಂದೆ ವರ್ಷಪೂರ್ತಿ ವಿದ್ಯುದ್ಧೀಪಗಳಿಂದ ಜಗಮಗಿಸಲಿದೆ. ಪ್ರಸಿದ್ಧ ಸ್ಮಾರಕವಾಗಿರುವ ಚಾರ್ಮಿನಾರ್​ ಮುಂಭಾಗದ ವಿದ್ಯುದ್ದೀಪದ ವ್ಯವಸ್ಥೆಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಶನಿವಾರ ರಾತ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಾರ್ಮಿನಾರ್ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಅದ್ಭುತವಾಗಿ ಬೆಳಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ರೆಡ್ಡಿ, "ಇನ್ನು ಮುಂದೆ ವರ್ಷವಿಡೀ ಪ್ರತಿದಿನ ಸಂಜೆ ಚಾರ್ಮಿನಾರ್ ಅನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು" ಎಂದು ಘೋಷಿಸಿದರು. ಚಾರ್ಮಿನಾರ್ ಅನ್ನು 1591 ರಲ್ಲಿ ಕುತುಬ್ ಶಾಹಿ ರಾಜವಂಶದ ಐದನೇ ರಾಜ ಮೊಹಮ್ಮದ್ ಕುಲಿ ಕುತುಬ್ ಷಾ ನಿರ್ಮಿಸಿದರು. 432 ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ನೆಲಮಟ್ಟದಿಂದ 160 ಅಡಿ ಎತ್ತರದಲ್ಲಿದೆ. ಇದು ನಾಲ್ಕು ಮಿನಾರ್‌ಗಳನ್ನು ಹೊಂದಿದೆ. ನಾಲ್ಕು ಮಿನಾರ್​ಗಳು ಇರುವುದರಿಂದಲೇ ಇದಕ್ಕೆ ಚಾರ್ಮಿನಾರ್ ಎಂದು ಹೆಸರಿಡಲಾಗಿದೆ.

"ರಾಷ್ಟ್ರೀಯ ಸಂಸ್ಕೃತಿ ನಿಧಿ (ಎನ್ಸಿಎಫ್) ಮತ್ತು ಇಂಡಿಯನ್ ಆಯಿಲ್ ಫೌಂಡೇಶನ್ (ಐಒಎಫ್) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್ಐ) ಇಲಾಖೆ ಇವುಗಳ ಕ್ರಮದಿಂದ ಇನ್ನೂ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಈ ಐತಿಹಾಸಿಕ ಸ್ಥಳಕ್ಕೆ ಆಗಮಿಸಲಿದ್ದಾರೆ" ಎಂದು ಕಿಶನ್ ರೆಡ್ಡಿ ಹೇಳಿದರು. ಐಒಎಫ್ ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಇಂಡಿಯನ್ ಆಯಿಲ್ ಕಂಪನಿ ಸ್ಥಾಪಿಸಿದ ಲಾಭರಹಿತ ಟ್ರಸ್ಟ್ ಆಗಿದೆ.

"ಗೋಲ್ಕೊಂಡ ಕೋಟೆ, ವಾರಂಗಲ್ ಕೋಟೆ ಮತ್ತು ಸಾವಿರ ಕಂಬಗಳ ದೇವಾಲಯಕ್ಕೆ ಇದೇ ರೀತಿಯ ಬೆಳಕಿನ ವ್ಯವಸ್ಥೆಯನ್ನು ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು" ಎಂದು ಕೇಂದ್ರ ಸಚಿವರು ಹೇಳಿದರು.

"ಐತಿಹಾಸಿಕ ಚಾರ್ಮಿನಾರ್ ಮತ್ತು ಗೋಲ್ಕೊಂಡ ಕೋಟೆಗೆ ಯುನೆಸ್ಕೋ ಪಾರಂಪರಿಕ ಟ್ಯಾಗ್ ಪಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಎರಡೂ ಸ್ಮಾರಕಗಳನ್ನು ಯುನೆಸ್ಕೋದ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ" ಎಂದು ಅವರು ಹೇಳಿದರು. "ರಾಮಪ್ಪ ದೇವಾಲಯವನ್ನು ಈಗಾಗಲೇ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ" ಎಂದು ಕೇಂದ್ರ ಸಚಿವರು ತಿಳಿಸಿದರು.

"ಹೊಸ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲು ಮತ್ತು ಈಗ ಅಸ್ತಿತ್ವದಲ್ಲಿರುವ ವಸ್ತು ಸಂಗ್ರಹಾಲಯಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶೀಘ್ರದಲ್ಲೇ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಮತ್ತು ಸಲಾರ್ ಜಂಗ್ ವಸ್ತುಸಂಗ್ರಹಾಲಯದಲ್ಲಿ ಮೂಲಸೌಕರ್ಯಗಳನ್ನು ಮತ್ತಷ್ಟು ಸುಧಾರಿಸಲಾಗುವುದು" ಎಂದು ಅವರು ಹೇಳಿದರು. ತೆಲಂಗಾಣದ ಸಚಿವ ಶ್ರೀನಿವಾಸ್ ಗೌಡ್, ಸ್ಥಳೀಯ ಕಾರ್ಪೊರೇಟರುಗಳು ಮತ್ತು ಎಎಸ್​ಐ, ಎನ್​ಸಿಎಫ್ ಮತ್ತು ಐಒಎಫ್ ಅಧಿಕಾರಿಗಳು ಉಪಸ್ಥಿತರಿದ್ದರು.

ಒಂದು ದಂತಕಥೆಯ ಪ್ರಕಾರ, ಮುಹಮ್ಮದ್ ಕುಲಿ ಖುಬ್ ಷಾ ತನ್ನ ರಾಜಧಾನಿಯನ್ನು ಹತ್ತಿರದ ಗೋಲ್ಕೊಂಡದಿಂದ ಹೈದರಾಬಾದ್​ಗೆ ಸ್ಥಳಾಂತರಿಸುವ ಸಮಯದಲ್ಲಿ ಪ್ಲೇಗ್ ಮಹಾಮಾರಿ ಕಾಡುತ್ತಿತ್ತು. ನಂತರ ಪ್ಲೇಗ್ ಸಂಪೂರ್ಣವಾಗಿ ನಿರ್ಮೂಲನೆಯಾದ ನಂತರ ಅದರ ಅಂತ್ಯವನ್ನು ಸೂಚಿಸಲು ಹೊಸ ಮಸೀದಿಯನ್ನು ಕಟ್ಟಿಸಿದ್ದರು. ಅದರ ನಾಲ್ಕು ಎತ್ತರದ ಮತ್ತು ವಿಶಿಷ್ಟ ಮಿನಾರ್ ಗಳಿಂದಾಗಿ ಅದು ಚಾರ್ ಮಿನಾರ್ ಎಂದು ಕರೆಯಲ್ಪಟ್ಟಿತು,

ಇದನ್ನೂ ಓದಿ :Redmi 12 Series: ಮೊದಲ ದಿನವೇ 3 ಲಕ್ಷ ಫೋನ್​ ಮಾರಾಟ; ಬೆಲೆ 10,999 ರೂ.

ABOUT THE AUTHOR

...view details