ನವದೆಹಲಿ :ಕೋಲ್ಕತ್ತಾದಿಂದ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದಾಗ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖ್ಯಸ್ಥ ಜೆ ಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಖಂಡಿಸಿದ್ದಾರೆ.
ಈ ದಾಳಿಯನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ "ಇಂದು, ಬಂಗಾಳದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಾಡ್ಡಾ ಅವರ ಮೇಲೆ ದಾಳಿ ನಡೆಸಲಾಗಿದೆ. ಕೇಂದ್ರ ಸರ್ಕಾರ ಈ ದಾಳಿಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಈ ಪ್ರಾಯೋಜಿತ ಹಿಂಸಾಚಾರಕ್ಕೆ ಬಂಗಾಳ ಸರ್ಕಾರವು, ರಾಜ್ಯದ ಶಾಂತಿ ಪ್ರಿಯ ಜನರಿಗೆ ಉತ್ತರಿಸಬೇಕಾಗಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆದರಿಕೆ ಇದೆ ಎಂದಿದ್ದಾರೆ. "ತೃಣಮೂಲ ಆಡಳಿತದಲ್ಲಿ ಬಂಗಾಳ ದಬ್ಬಾಳಿಕೆ, ಅರಾಜಕತೆ ಮತ್ತು ಕತ್ತಲೆಯ ಯುಗಕ್ಕೆ ಸಾಗಿದೆ. ಟಿಎಂಸಿ ಆಳ್ವಿಕೆಯಲ್ಲಿ ರಾಜಕೀಯ ಹಿಂಸಾಚಾರ ಸಾಂಸ್ಥೀಕರಣಗೊಳಿಸಲಾಗಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬುವ ಜನರಲ್ಲಿ ಆತಂಕ ಸೃಷ್ಠಿಯಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಡ್ಡಾ, ಇಂದು ನಡೆದ ಘಟನೆಯು ರಾಜ್ಯದಲ್ಲಿ ಅರಾಜಕತೆ ಮತ್ತು ಅಸಹಿಷ್ಣುತೆ ತೋರಿಸುತ್ತದೆ. ಇಲ್ಲಿ ರಾಜಕೀಯ ಚರ್ಚೆಗೆ ಸ್ಥಳವಿಲ್ಲ. ಮಮತಾ ಸರ್ಕಾರ ಕಾರ್ಯನಿರ್ವಹಿಸುತ್ತಿರುವ ರೀತಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ ಎಂದು ಕಿಡಿಕಾರಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರಿರುವ ಸಿಎಂ ಮಮತಾ ಬ್ಯಾನರ್ಜಿ, ನಿಮ್ಮೊಂದಿಗೆ ಭದ್ರತಾ ಸಿಬ್ಬಂದಿ ಇದ್ದರೂ ನಿಮ್ಮ ಮೇಲೆ ಹೇಗೆ ಆಕ್ರಮಣ ಮಾಡಬಹುದು? ರಾಜ್ಯವನ್ನು ಅವಲಂಬಿಸುವ ಬದಲು, ನೀವು ಕೇಂದ್ರ ಬಲ ಅವಲಂಬಿಸಿರುತ್ತೀರಿ. ಮೊದಲೇ ಯೋಜಿಸಿ ದಾಳಿ ನಡೆಸಿರಬಹುದು, ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೆ, ನಾನು ಸಾರ್ವಕಾಲಿಕ ಸುಳ್ಳನ್ನು ಹೇಳುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.