ನವದೆಹಲಿ:2022ರ ವೇಳೆಗೆ ದೇಶದ ಪ್ರತಿ ಮಗುವಿಗೆ ಸಮರ್ಪಕ ಆರೋಗ್ಯ, ಶಿಕ್ಷಣ ಮತ್ತು ಪೌಷ್ಠಿಕ ಆಹಾರದ ಸೌಲಭ್ಯ ಹಾಗೂ ಮಹಿಳೆಯರಿಗೆ ಸುರಕ್ಷತೆ ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವಾಕ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, 75ನೇ ಸ್ವಾತಂತ್ರ್ಯ ವರ್ಷದ ವೇಳೆಗೆ ನವ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ಮಾನವತಾವಾದ ಮಾತ್ರ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊರೊನಾದ ಪರಿಣಾಮಗಳನ್ನು ನಿಯಂತ್ರಿಸುವಲ್ಲಿ ಭಾರತದ ಯಶಸ್ಸಿನ ಹಿಂದೆ ಆರೋಗ್ಯ ಇಲಾಖೆಯ ಕಾರ್ಯಗಳ ಬಗ್ಗೆ ಹರ್ಷವರ್ಧನ್ ಮಾತನಾಡಿದರು. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್ನಿಂದ ಗುಣಮುಖರಾದವರ ಪ್ರಮಾಣ ನಮ್ಮಲ್ಲೇ ಹೆಚ್ಚು ಹಾಗೂ ಸಾವಿನ ಸಂಖ್ಯೆ ನಮ್ಮಲ್ಲೇ ಕಡಿಮೆಯಿದೆ ಎಂದರು.
ಲಸಿಕೆಗಳನ್ನು ತಯಾರಿಸುವಲ್ಲಿ ದೇಶದ ವಿಜ್ಞಾನಿಗಳ ಪ್ರಯತ್ನ ಮತ್ತು ಕೊಡುಗೆಯನ್ನು ಸಚಿವರು ಇದೇ ವೇಳೆ ಶ್ಲಾಘಿಸಿದರು. ದಾಖಲೆಯ ಸಮಯದಲ್ಲಿ ಎರಡು ದೇಶೀಯ ಲಸಿಕೆಗಳನ್ನು ನೀಡುವಲ್ಲಿ ವಿಜ್ಞಾನಿಗಳು ಗಮನಾರ್ಹ ಕೆಲಸ ಮಾಡಿದ್ದಾರೆ. ದೇಶದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಯಶಸ್ವಿಯಾಗಿ ನಡೆಯುತ್ತಿದ್ದು, 15 ದಿನಗಳಲ್ಲಿ 37 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ ಎಂದರು.