ಕರ್ನಾಟಕ

karnataka

By

Published : Apr 12, 2022, 8:34 PM IST

ETV Bharat / bharat

ಎಣ್ಣೆಕಾಳು, ಖಾದ್ಯ ತೈಲ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಡಿವಾಣ

ಖಾದ್ಯ ತೈಲ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಸಂಸ್ಕರಣಾ ಘಟಕಗಳ ಮೇಲೆ ಕಣ್ಣಿಟ್ಟಿದೆ. ನಿಗದಿಗಿಂತ ಅಧಿಕ ದಾಸ್ತಾನಿಡುವುದನ್ನು ತಡೆಯಲು ಸರ್ಕಾರವೇ ತಂಡಗಳನ್ನು ರೂಪಿಸಿ ಕಾರ್ಯಾಚರಣೆ ನಡೆಸುತ್ತಿದೆ.

oilseed-and-edible-oil
ಎಣ್ಣೆಕಾಳು, ಖಾದ್ಯ ತೈಲ

ನವದೆಹಲಿ:ದೇಶದಲ್ಲಿ ಹೆಚ್ಚಳವಾಗುತ್ತಿರುವ ಖಾದ್ಯ ತೈಲ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸರ್ವಪ್ರಯತ್ನಗಳ ಹೊರತಾಗಿಯೂ ವ್ಯಾಪಾರಿಗಳು, ಉತ್ಪಾದಕರು ಹೆಚ್ಚಿನ ದಾಸ್ತಾನು ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದು ದೇಶದಲ್ಲಿ ಅಡುಗೆ ಎಣ್ಣೆ ದರ ಏರಿಕೆಗೆ ಕಾರಣವಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಖಾದ್ಯ ತೈಲ ದರ ಉತ್ಪಾದಿಸುವ ರಾಜ್ಯಗಳ ಮೇಲೆ ಹದ್ದಿನ ಕಣ್ಣಿಡಲು ತಂಡಗಳನ್ನು ರವಾನಿಸಿದೆ.

ಖಾದ್ಯ ತೈಲ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಪಶ್ಚಿಮಬಂಗಾಳ, ತೆಲಂಗಾಣ, ಗುಜರಾತ್​, ನವದೆಹಲಿಯಲ್ಲಿ ತೈಲ ದಾಸ್ತಾನಿನ ಪರಿಶೀಲನೆಗಾಗಿ ತಂಡಗಳನ್ನು ನಿಯೋಜಿಸಲಾಗಿದೆ. ಈ ರಾಜ್ಯಗಳ ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಸಂಸ್ಕರಣೆದಾರರು ಹೊಂದಿರುವ ಖಾದ್ಯ ತೈಲಗಳು ಮತ್ತು ಎಣ್ಣೆಕಾಳುಗಳ ದಾಸ್ತಾನುಗಳ ತಪಾಸಣೆ ನಡೆಸಲು ಕೇಂದ್ರ ತಂಡಗಳನ್ನು ಕಳುಹಿಸಲಾಗಿದೆ.

ಕೆಲವೆಡೆ ಅಧಿಕ ಸಂಗ್ರಹ ಪತ್ತೆ:ಮಧ್ಯಪ್ರದೇಶದ ದೇವಾಸ್, ಶಾಜಾಪುರ ಮತ್ತು ಗುಣಾ ಜಿಲ್ಲೆಗಳಲ್ಲಿ ಕೇಂದ್ರ ತಂಡಗಳ ತಪಾಸಣೆ ವೇಳೆ ಸೋಯಾಬೀನ್ ಮತ್ತು ಸಾಸಿವೆ ಕಾಳುಗಳ ಅಧಿಕ ಸಂಗ್ರಹ, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಎಣ್ಣೆಕಾಳುಗಳು ಮತ್ತು ಖಾದ್ಯ ತೈಲಗಳ ಹೆಚ್ಚಿನ ಸಂಗ್ರಹಣೆಯನ್ನು ವಿಶೇಷ ತಂಡಗಳು ಪತ್ತೆ ಹಚ್ಚಿವೆ ಇದಲ್ಲದೇ ಇನ್ನೂ ಐದು ರಾಜ್ಯಗಳಲ್ಲಿ ತಪಾಸಣೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಇಲ್ಲಿ ಸರ್ಕಾರ ನಿಗದಿ ಮಾಡಿದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿಡಲಾಗಿತ್ತು ಎಂದು ಆಹಾರ ಸಚಿವಾಲಯ ಮಾಹಿತಿ ನೀಡಿದೆ. ಹೆಚ್ಚಿನ ಪ್ರಮಾಣದಲ್ಲಿ ಬೀಜ ಮತ್ತು ತೈಲ ಸಂಗ್ರಹಣೆಯು ಬೆಲೆಗಳನ್ನು ಹೆಚ್ಚಿಸಿದೆ. ನಿಗದಿಗಿಂತ ಹೆಚ್ಚು ದಾಸ್ತಾನಿಟ್ಟ ಸಂಸ್ಕರಣಾ ಘಟಕಗಳ ಮೇಲೆ ಅಗತ್ಯ ವಸ್ತುಗಳ ಕಾಯಿದೆ- 1955 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:ಪಿಂಚಣಿಗಾಗಿ 56 ವರ್ಷ ಹೋರಾಡಿ ಕೊನೆಗೂ ಗೆದ್ದ ಹುತಾತ್ಮ ಯೋಧನ ಪತ್ನಿ!

ABOUT THE AUTHOR

...view details