ಹೈದರಾಬಾದ್ (ತೆಲಂಗಾಣ): ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆಗಾಗಿ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪುತ್ರಿ, ವಿಧಾನ ಪರಿಷತ್ ಸದಸ್ಯೆ ಕವಿತಾ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ.
ಎರಡು ತಂಡಗಳಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು ಕವಿತಾ ಅವರನ್ನು ಸಾಕ್ಷಿಯಾಗಿ ಸಿಆರ್ಪಿಸಿ 161ರ ಅಡಿಯಲ್ಲಿ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ಆಗಮಿಸಿರುವ ಸಿಬಿಐ ತಂಡದಲ್ಲಿ ಮಹಿಳಾ ಅಧಿಕಾರಿಗಳೂ ಇದ್ದು, ಸಂಜೆವರೆಗೂ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ.6ರಂದು ಕವಿತಾ ಅವರಿಗೆ ಮೊದಲು ನೋಟಿಸ್ ನೀಡಿತ್ತು. ಆದರೆ, ನ.11, 12, 14, 15ರಂದು ವಿಚಾರಣೆ ಹಾಜರಾಗುವುದಾಗಿ ಕವಿತಾ ಸಿಬಿಐಗೆ ಪತ್ರ ಬರೆದು ತಿಳಿಸಿದ್ದರು. ಅದರಂತೆ ಭಾನುವಾರ (ಇಂದು) ತನಿಖೆ ನಡೆಸುವುದಾಗಿ ಸಿಬಿಐ ತಿಳಿಸಿತ್ತು. ಇದಕ್ಕೆ ಕವಿತಾ ಒಪ್ಪಿಗೆ ಸೂಚಿಸಿದ್ದರಿಂದ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್ಎಸ್ ಎಂಎಲ್ಸಿ ಕವಿತಾ
ಮತ್ತೊಂದೆಡೆ ಶನಿವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಕೆಸಿಆರ್ ಅವರನ್ನು ಭೇಟಿಯಾಗಿ ಕವಿತಾ ಚರ್ಚಿಸಿದ್ದರು. ಸಿಬಿಐಗೆ ಸಹಕಾರಿಸಿ ಸೂಕ್ತ ಉತ್ತರ ನೀಡುವಂತೆ ಕವಿತಾಗೆ ತಂದೆ ಕೆಸಿಆರ್ ಸೂಚಿಸಿದ್ದಾರೆ. ಜೊತೆಗೆ ಸಿಬಿಐ ವಿಚಾರಣೆ ನಿಟ್ಟಿನಲ್ಲಿ ಕವಿತಾ ಈಗಾಗಲೇ ಹಲವು ಕಾನೂನು ತಜ್ಞರ ಸಲಹೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.