ಕರ್ನಾಟಕ

karnataka

ಲಾಲುಗೆ ಮತ್ತೆ ಭಾರಿ ಹಿನ್ನಡೆ: ಬಹುಕೋಟಿ ಮೇವು ಹಗರಣದ 5ನೇ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ

By

Published : Feb 21, 2022, 2:14 PM IST

Updated : Feb 21, 2022, 5:35 PM IST

ಬಹುಕೋಟಿ ಮೇವು ಹಗರಣ ಸಂಬಂಧ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್​ಗೆ ಸಿಬಿಐ ಕೋರ್ಟ್ ದಂಡ ಸಮೇತ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್

ರಾಂಚಿ (ಜಾರ್ಖಂಡ್):ಬಹುಕೋಟಿ ಮೇವು ಹಗರಣ ಸಂಬಂಧ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೇ 60 ಲಕ್ಷ ರೂ. ದಂಡವನ್ನೂ ವಿಧಿಸಿದೆ.

ಮೇವು ಹಗರಣ:ಜಾರ್ಖಂಡ್​ನ ಒಟ್ಟು ಐದು ಮೇವು ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿಯನ್ನು ಖಜಾನೆಗಳಿಂದ ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಲಾಲು ಯಾದವ್ ಮೇಲಿದ್ದು, ಇದೀಗ ಜಾರ್ಖಂಡ್​ನ ಐದನೇ ಮೇವು ಪ್ರಕರಣದಲ್ಲಿ ಲಾಲೂಗೆ ಶಿಕ್ಷೆ ನೀಡಲಾಗಿದೆ.

ಮೇವಿಗಾಗಿ ವಿವಿಧ ಜಿಲ್ಲೆಗಳಲ್ಲಿ ಖಜಾನೆಗಳಲ್ಲಿ ಪಶುಸಂಗೋಪನಾ ಇಲಾಖೆ ಮೀಸಲಿಟ್ಟಿದ್ದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಆರೋಪ ಸಾಬೀತಾಗಿದ್ದು, ಫೆಬ್ರವರಿ 15 ರಂದು ಸಿಬಿಐ ಕೋರ್ಟ್​ ಐದನೇ ಮೇವು ಪ್ರಕರಣದಲ್ಲಿ (ಡೊರಾಂಡಾ ಖಜಾನೆ ಕೇಸ್​) ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿತ್ತು.

ಬಿಜೆಪಿ ಜೊತೆ ಸೇರದಿದ್ದಕ್ಕೆ ನಮ್ಮ ತಂದೆಯನ್ನು ಸಿಬಿಐ ಗುರಿಯಾಗಿಸಿದೆ - ತೇಜಸ್ವಿ ಯಾದವ್​​

ತಮ್ಮ ತಂದೆಗೆ ಜೈಲು ಶಿಕ್ಷೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​​, "ಬಿಜೆಪಿಯೊಂದಿಗೆ ಕೈಕುಲುಕಲು ನಿರಾಕರಿಸಿದ್ದಕ್ಕೆ ಲಾಲೂ ಪ್ರಸಾದ್​ ಯಾದವ್​ರನ್ನು ಸಿಬಿಐ ಗುರಿಯಾಗಿಸಿಕೊಂಡಿದೆ. ನಮ್ಮ ತಂದೆ ಬಿಜೆಪಿ ಸೇರಿದ್ದರೆ ಅವರನ್ನು ರಾಜಾ ಹರಿಶ್ಚಂದ್ರ ಎಂದು ಕರೆಯುತ್ತಿದ್ದರು. ಆದರೆ ಅವರು ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ಆದ್ದರಿಂದ ಅವರು ಜೈಲುವಾಸವನ್ನು ಎದುರಿಸುತ್ತಿದ್ದಾರೆ" ಎಂದರು.

ಇದನ್ನೂ ಓದಿ:ಶಿವಮೊಗ್ಗ ಯುವಕನ ಕೊಲೆ : ಇಬ್ಬರ ಬಂಧನ.. ಮೃತದೇಹ ಮೆರವಣಿಗೆ ವೇಳೆ ಬೆಂಕಿ ಹಚ್ಚಿ, ಕಲ್ಲು ತೂರಾಟ

ಹೈಕೋರ್ಟ್ ಮೆಟ್ಟಿಲೇರುತ್ತೇವೆ..

"ಸಿಬಿಐ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತವರ ಹಗರಣಗಳನ್ನು ಸಿಬಿಐ ಮರೆತುಬಿಟ್ಟಿದೆ. ಬಿಹಾರದಲ್ಲಿ ಸುಮಾರು 80 ಹಗರಣಗಳು ನಡೆದಿವೆ ಆದರೆ ಆ ಹಗರಣಗಳಲ್ಲಿ ಸಿಬಿಐ, ಇಡಿ, ಎನ್ಐಎ ಎಲ್ಲಿದೆ?" ಎಂದು ಪ್ರಶ್ನಿಸಿದ ತೇಜಸ್ವಿ, ರಾಂಚಿ ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್, ಸುಪ್ರೀಂಕೋರ್ಟ್​ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಉನ್ನತ ನ್ಯಾಯಾಲಯಗಳಲ್ಲಿ ತೀರ್ಪು ಲಾಲು ಜೀ ಪರವಾಗಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Feb 21, 2022, 5:35 PM IST

ABOUT THE AUTHOR

...view details