ಕರ್ನಾಟಕ

karnataka

By PTI

Published : Jan 2, 2024, 5:10 PM IST

ETV Bharat / bharat

ಸಾಕ್ಷ್ಯಾಧಾರಗಳ ಕೊರತೆ: 2019ರ ಐಪಿಎಲ್ ಬೆಟ್ಟಿಂಗ್ ಹಗರಣ ಪ್ರಕರಣಗಳ ಮುಚ್ಚಿದ ಸಿಬಿಐ

CBI Closes 2019 IPL Betting Cases: ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2019ರ ಐಪಿಎಲ್​ ಪಂದ್ಯಗಳ ಫಿಕ್ಸಿಂಗ್ ಆರೋಪ ಹಗರಣಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಸಿಬಿಐ ಮುಕ್ತಾಯಗೊಳಿಸಿದೆ.

CBI closes 2019 IPL betting cases over lack of evidence
ಸಾಕ್ಷ್ಯಾಧಾರಗಳ ಕೊರತೆ: 2019ರ ಐಪಿಎಲ್ ಬೆಟ್ಟಿಂಗ್ ಹಗರಣ ಪ್ರಕರಣಗಳ ಮುಚ್ಚಿದ ಸಿಬಿಐ

ನವದೆಹಲಿ: 2019ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​) ಪಂದ್ಯಗಳ ಫಿಕ್ಸಿಂಗ್ ಆರೋಪ ಹಗರಣಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮುಕ್ತಾಯಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಪ್ರಕರಣಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ವ್ಯಕ್ತಿಗಳ ಜಾಲವು ಐಪಿಎಲ್ ಪಂದ್ಯಗಳ ಫಲಿತಾಂಶದ ಮೇಲೂ ಪ್ರಭಾವ ಬೀರುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಕೇಂದ್ರ ತನಿಖಾ ಸಂಸ್ಥೆಯು 2022ರ ಮೇ ತಿಂಗಳಲ್ಲಿ ಏಳು ಜನರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

ಮೊದಲ ಎಫ್‌ಐಆರ್‌ಅನ್ನು ದೆಹಲಿಯ ರೋಹಿಣಿ ಮೂಲದ ದಿಲೀಪ್ ಕುಮಾರ್ ಮತ್ತು ಹೈದರಾಬಾದ್ ಮೂಲದ ಗುರ್ರಂ ವಾಸು ಹಾಗೂ ಗುರ್ರಂ ಸತೀಶ್ ಎಂಬುವರ ವಿರುದ್ಧ ಸಿಬಿಐ ದಾಖಲಿಸಲಾಗಿತ್ತು. ಎರಡನೇ ಎಫ್‌ಐಆರ್‌ನಲ್ಲಿ ರಾಜಸ್ಥಾನ ಮೂಲದ ಸಜ್ಜನ್ ಸಿಂಗ್, ಪ್ರಭು ಲಾಲ್ ಮೀನಾ, ರಾಮ್ ಅವತಾರ್ ಮತ್ತು ಅಮಿತ್ ಕುಮಾರ್ ಶರ್ಮಾ ಎಂಬುವವರ ಹೆಸರಗಳನ್ನು ಉಲ್ಲೇಖಿಸಿತ್ತು. ಆದರೆ, ಸುಮಾರು ಎರಡು ವರ್ಷಗಳ ತನಿಖೆಯ ನಂತರ ಸಿಬಿಐಗೆ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಮುಂದುವರಿಸಲು ಸಾಕಷ್ಟು ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋರ್ಟ್​ಗೆ ಸಿಬಿಐ ವರದಿ:ಹೀಗಾಗಿ ಡಿಸೆಂಬರ್ 23ರಂದು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಚ್ಚುವ ವರದಿಯನ್ನು ಸಿಬಿಐ ಸಲ್ಲಿಸಿದೆ. ಇದರಲ್ಲಿ ಆರೋಪಗಳ ವಿವರವಾದ ವಿವರಣೆ ಮತ್ತು ಈ ವಿಷಯದಲ್ಲಿ ಕೈಗೊಂಡ ತನಿಖೆ ಮಾಹಿತಿ ನೀಡಿದೆ. ಜೊತೆಗೆ ಪ್ರಕರಣವನ್ನು ಮುಚ್ಚಲು ಶಿಫಾರಸು ಮಾಡಲು ಕಾರಣಗಳನ್ನೂ ತನಿಖಾ ಸಂಸ್ಥೆ ಉಲ್ಲೇಖಿಸಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಇದೀಗ ತನಿಖಾ ಸಂಸ್ಥೆ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಬೇಕೆ? ಅಥವಾ ಮುಂದಿನ ತನಿಖೆಯನ್ನು ಮುಂದುವರಿಸಲು ಆದೇಶಿಸಬೇಕೆ? ಎಂಬುದು ಈಗ ನ್ಯಾಯಾಲಯಕ್ಕೆ ಬಿಟ್ಟದ್ದು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಎಫ್‌ಐಆರ್‌ನಲ್ಲಿದ್ದ ಆರೋಪಗಳು:2019ರಲ್ಲಿ ದೆಹಲಿ ಮತ್ತು ಇತರ ಸ್ಥಳಗಳಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಈ ಜಾಲವು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಈ ಪ್ರಕರಣದ ಹೆಸರಿಸಲಾದ ಆರೋಪಿತರು 10-13 ವರ್ಷಗಳಿಂದ ದಂಧೆಯನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸಂಸ್ಥೆಯು ಅವರ ಬ್ಯಾಂಕ್​ ಖಾತೆಗಳಿಂದ ಅನುಮಾನಾಸ್ಪದ ನಗದು ವಹಿವಾಟು ನಡೆಸುತ್ತಿದ್ದರು. ಅಲ್ಲದೇ, ಈ ವ್ಯಕ್ತಿಗಳು ಪಾಕಿಸ್ತಾನದ ಮೊಬೈಲ್ ಸಂಖ್ಯೆ ಮೂಲಕ ಪಾಕಿಸ್ತಾನಿ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು. ಪಾಕಿಸ್ತಾನದಿಂದ ಇನ್‌ಪುಟ್‌ಗಳನ್ನು ಪಡೆಯುವ ಎರಡು ನೆಟ್‌ವರ್ಕ್‌ಗಳು ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರೇರೇಪಿಸುವ ಮೂಲಕ ವಂಚಿಸುತ್ತಿದ್ದವು ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಉಲ್ಲೇಸಿತ್ತು.

ದಂಧೆಕೋರರು ನಕಲಿ ಗುರುತಿನ ಮೂಲಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಕೆಲ ಗುರುತಿಸದ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಗ್ರಾಹಕರ (ಕೆವೈಸಿ) ದಾಖಲೆಗಳನ್ನು ಹೊಂದಿದ್ದರು. ದಿಲೀಪ್ ಕುಮಾರ್ ಎಂಬಾತ ಹಲವಾರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಇದರಲ್ಲಿ 2013ರಿಂದ 43 ಲಕ್ಷಕ್ಕೂ ಹೆಚ್ಚು ಮೌಲ್ಯದ ದೇಶೀಯ ನಗದು ಠೇವಣಿ ಮಾಡಲಾಗಿದೆ. ಗುರ್ರಂ ಸತೀಶ್ ನಿರ್ವಹಿಸುತ್ತಿದ್ದ ಆರು ಬ್ಯಾಂಕ್ ಖಾತೆಗಳಲ್ಲಿ 2012-20ರಲ್ಲಿ 4.55 ಕೋಟಿ ರೂಪಾಯಿ (ದೇಶೀಯ) ಮತ್ತು 3.05 ಲಕ್ಷ ರೂಪಾಯಿ (ವಿದೇಶಿ) ಹಣ ಠೇವಣಿ ಮಾಡಲಾಗಿದೆ. ಇದೇ ಅವಧಿಯಲ್ಲಿ ಗುರ್ರಂ ವಾಸು ಖಾತೆಯಲ್ಲಿ 5.37 ಕೋಟಿ ರೂ. ಠೇವಣಿ ಮಾಡಲಾಗಿತ್ತು. ಈ ವಹಿವಾಟುಗಳನ್ನು ವಿವರಿಸಲು ಯಾವುದೇ ಗುರುತಿಸಬಹುದಾದ ವ್ಯಾಪಾರ ಸಮರ್ಥನೆ ಒದಗಿಸಿಲ್ಲ ಎಂದು ತನಿಖಾ ಸಂಸ್ಥೆ ದೂರಿತ್ತು.

ಇದನ್ನೂ ಓದಿ:ರಾಷ್ಟ್ರೀಯ ಕುಸ್ತಿ ಚಾಂಪಿಯನ್​ಶಿಪ್ ಆಯೋಜನೆ ಮಾಡುತ್ತೇವೆ : ಸಂಜಯ್​ ಸಿಂಗ್​

ABOUT THE AUTHOR

...view details