ಕರ್ನಾಟಕ

karnataka

By

Published : May 29, 2023, 10:49 AM IST

Updated : May 29, 2023, 11:12 AM IST

ETV Bharat / bharat

ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ: ಕುಸ್ತಿಪಟುಗಳ ವಿರುದ್ಧ ಪ್ರಕರಣ ದಾಖಲು

ದೇಶದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಬಜರಂಗ್​ ಪುನಿಯಾ ಸೇರಿ ಹಲವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್
ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್

ನವದೆಹಲಿ:ಭಾನುವಾರಜಂತರ್ ಮಂತರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರತಿಭಟನಾಕಾರ ಕುಸ್ತಿಪಟುಗಳು ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಪ್ರತಿಭಟನೆಯ ಇತರ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ನಡುವೆಯೇ ರಾತ್ರಿ ವೇಳೆ ಕೆಲ ಕುಸ್ತಿಪಟುಗಳು ಜಂತರ್ ಮಂತರ್‌ಗೆ ಆಗಮಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಇದಕ್ಕೆ ಅವಕಾಶ ಕೊಡದೆ ಅವರನ್ನು ವಾಪಸ್ ಕಳುಹಿಸಲಾಯಿತು. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147, 149, 186, 188, 332, 353, ಪಿಡಿಪಿಪಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಕುಸ್ತಿಪಟುಗಳು ಮತ್ತು ಇತರೆ ಪ್ರತಿಭಟನಾಕಾರರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಭಾನುವಾರ ತಡರಾತ್ರಿ ಕುಸ್ತಿಪಟು ಬಜರಂಗ್​ ಪುನಿಯಾ ಮಾಧ್ಯಮದೊಂದಿಗೆ ಮಾತನಾಡಿ, "ಹೊಸ ಸಂಸತ್​ ಭವನ, ಲೋಕತಂತ್ರ ಭವನದ ಉದ್ಘಾಟನೆಯಾಗಿದೆ. ಅದರಲ್ಲಿ ಆರೋಪಿಯೊಬ್ಬ ಕುಳಿತಿರುವುದು ದೇಶದ ದೌರ್ಭಾಗ್ಯವೇ ಸರಿ" ಎಂದರು. ಜಂತರ್​ ಮಂತರ್​ ಅಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂಬ ಮಾಧ್ಯಮದ ಪ್ರಶ್ನೆಗೆ, "ಬ್ರಿಜ್​​ ಭೂಷಣ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ಪೊಲೀಸರು 7 ದಿನಗಳ ಕಾಲ ಸಮಯ ತೆಗದುಕೊಂಡರು. ಆದರೆ ಕುಸ್ತಿಪಟುಗಳ ವಿರುದ್ಧ ಕೇಸು ದಾಖಲಿಸಲು 7 ಗಂಟೆಯೂ ತೆಗೆದುಕೊಳ್ಳಲಿಲ್ಲ. ಇದಕ್ಕೆ ದೆಹಲಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕು" ಎಂದು ಕಿಡಿ ಕಾರಿದರು.

ಪ್ರಕರಣದ ಹಿನ್ನೆಲೆ ಹೀಗಿದೆ..:ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಏ.23ರಿಂದ ಕುಸ್ತಿಪಟುಗಳು ಜಂತರ್​ ಮಂತರ್​ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ (ಭಾನುವಾರ) ಹೊಸ ಸಂಸತ್​ ಭವನ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಪ್ರತಿಭಟನಾನಿರತ ಕುಸ್ತಿಪಟುಗಳು ಮಹಿಳಾ ಸಮ್ಮಾನ್ ಮಹಾ ಪಂಚಾಯತ್​ ಹೆಸರಲ್ಲಿ ನೂತನ ಸಂಸತ್​ ಭವನದತ್ತ ತೆರಳಲು ಮುಂದಾದಾಗ ಪೊಲೀಸರ ವಶಕ್ಕೆ ಪಡೆದಿದ್ದರು.

ಜಂತರ್​ ಮಂತರ್​ನಲ್ಲಿದ್ದ ಕುಸ್ತಿಪಟುಗಳ ಮಂಚಗಳು, ಹಾಸಿಗೆಗಳು, ಕೂಲರ್‌ಗಳು, ಫ್ಯಾನ್‌ಗಳು ಮತ್ತು ಆಶ್ರಯಕ್ಕೆ ಬಳಕೆ ಮಾಡಿದ್ದ ಟಾರ್ಪಾಲಿನ್​​ಗಳನ್ನು ತೆಗೆದು ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದರು. ಇದಕ್ಕೂ ಮುನ್ನ ಸಂಗೀತಾ ಫೋಗಟ್, ವಿನೇಶ್ ಫೋಗಟ್​ ಮತ್ತು ಸಾಕ್ಷಿ ಮಲಿಕ್​ ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದೆ ಸಾಗಲು ಪ್ರಯತ್ನಿಸಿದರು. ಆಗ ಕುಸ್ತಿಪಟುಗಳು ಮತ್ತು ಪೊಲೀಸ್ ಅಧಿಕಾರಿಗಳು ನಡುವೆ ಪರಸ್ಪರ ತಳ್ಳಾಟ, ನೂಕಾಟ ಉಂಟಾಗಿ ಜಂತರ್ ಮಂತರ್‌ನಲ್ಲಿ ಕೆಲ ಕಾಲ ಉದ್ವಿಘ್ನ ಸ್ಥಿತಿ ಉಂಟಾಗಿತ್ತು. ಈ ವೇಳೆ ಪೋಲೀಸ್ ಅಧಿಕಾರಿಗಳು ಕುಸ್ತಿಪಟುಗಳು ಮತ್ತವರ ಬೆಂಬಲಿಗರನ್ನು ಎಳೆದು ಬಸ್‌ಗಳಿಗೆ ಹತ್ತಿಸಿ ವಶಕ್ಕೆ ಪಡೆದರು.

ಇದನ್ನೂ ಓದಿ:ನೂತನ ಸಂಸತ್​ ಭವನದತ್ತ ಹೊರಟ ಕುಸ್ತಿಪಟುಗಳ ಬಂಧನ: ಪೊಲೀಸರಿಂದ ಪ್ರತಿಭಟನಾ ಸ್ಥಳ ತೆರವು

Last Updated : May 29, 2023, 11:12 AM IST

ABOUT THE AUTHOR

...view details