ಕರ್ನಾಟಕ

karnataka

ETV Bharat / bharat

ನಾಳೆ ಹಾನಗಲ್‌, ಸಿಂದಗಿ ಸೇರಿ ದೇಶದ 29 ವಿಧಾನಸಭೆ, 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ರಿಸಲ್ಟ್‌

ಕರ್ನಾಟಕದ ಹಾನಗಲ್‌, ಸಿಂದಗಿ ಸೇರಿದಂತೆ ದೇಶದ 29 ವಿಧಾನಸಭಾ ಕ್ಷೇತ್ರಗಳು ಹಾಗೂ 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ನಾಳೆ ಮಧ್ಯಾಹ್ನದೊಳಗೆ ಬಹಿರಂಗವಾಗಲಿದೆ.

By

Published : Nov 1, 2021, 8:55 PM IST

Bypolls: Counting Of Votes In 3 Lok Sabha, 29 Assembly Constituencies Tomorrow
ನಾಳೆ ಹಾನಗಲ್‌, ಸಿಂದಗಿ ಸೇರಿ ದೇಶದ 29 ವಿಧಾನಸಭಾ, 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ

ನವದೆಹಲಿ: ಅಕ್ಟೋಬರ್‌ 30ರಂದು ನಡೆದಿದ್ದ 13 ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಸೇರಿ 3 ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಮತ ಎಣಿಕೆಗಾಗಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಕರ್ನಾಟಕದ ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆ ಹಾನಗಲ್‌ ಉಪ ಚುನಾವಣೆಯ ಫಲಿತಾಂಶವೂ ನಾಳೆ ಬಹಿರಂಗವಾಗಲಿದೆ.

ಸಿಂದಗಿಯಲ್ಲಿ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಮತ್ತು ಹಾನಗಲ್‌ನಲ್ಲಿ ಬಿಜೆಪಿಯ ಸಿ.ಎಂ ಉದಾಸಿ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ಸಿಂದಗಿಯಲ್ಲಿ ಕಾಂಗ್ರೆಸ್‌ನ ಅಶೋಕ ಮನಗೂಳಿ ಹಾಗೂ ಬಿಜೆಪಿಯ ರಮೇಶ ಭೂಸನೂರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇತ್ತ ಹಾನಗಲ್‌ನಲ್ಲೂ ಬಿಜೆಪಿಯ ಶಿವರಾಜ್ ಸಜ್ಜನರ್‌, ಕಾಂಗ್ರೆಸ್‌ ಶ್ರೀನಿವಾಸ ಮಾನೆ ನಡುವೆ ಪೈಪೋಟಿ ಇದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ನಡೆದಿರುವ ಮೊದಲ ಚುನಾವಣೆ ಇದಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಕೇಸರಿ ಪಕ್ಷವನ್ನು ಗೆಲ್ಲಿಸಲು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್‌ ಕೂಡ ತಮ್ಮ ಬಲ ಪ್ರದರ್ಶನ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ ವಿಧಾನಸಭೆಯಿಂದ ಹೊರಬಂದಿದ್ದ ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲ, ಕಾಂಗ್ರೆಸ್‌ನ ಪ್ರತಿಭಾ ಸಿಂಗ್, ದಿ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ, ಮಾಜಿ ರಾಷ್ಟ್ರೀಯ ಫುಟ್‌ಬಾಲ್ ಆಟಗಾರ ಯುಜೆನೆಸನ್ ಲಿಂಗ್ಡೋಹ್ ಹಾಗೂ ತೆಲಂಗಾಣದ ಮಾಜಿ ಸಚಿವ ಈಟಾಲಾ ರಾಜೇಂದರ್‌ ಕರಣಕ್ಕಿಳಿದಿದ್ದವರಲ್ಲಿ ಪ್ರಮುಖರಾಗಿದ್ದಾರೆ. ನಾಳೆ ಮಧ್ಯಾಹ್ನದೊಳಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

3 ಲೋಕಸಭಾ ಕ್ಷೇತ್ರಗಳ ಫಲಿತಾಂಶ

ಅಸ್ಸಾಂನಲ್ಲಿ ಐದು, ಪಶ್ಚಿಮ ಬಂಗಾಳದ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಮೂರು, ಕರ್ನಾಟಕ, ಬಿಹಾರ, ರಾಜಸ್ಥಾನದಲ್ಲಿ ತಲಾ ಎರಡು, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ ಮಿಜೋರಾಂನಲ್ಲಿ ತಲಾ 1 ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಹಾಗೂ ಮಧ್ಯಪ್ರದೇಶದ ಖಾಂಡ್ವಾ ಮೂರು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಿದೆ. ಈ ಮೂರೂ ಕ್ಷೇತ್ರಗಳಲ್ಲಿನ ಹಾಲಿ ಸಂಸದರು ಮೃತಪಟ್ಟಿದ್ದರು.

ಮಾರ್ಚ್‌ನಲ್ಲಿ ರಾಮಸ್ವರೂಪ್ ಶರ್ಮಾ (ಬಿಜೆಪಿ) ನಿಧನದ ನಂತರ ಮಂಡಿ ಸ್ಥಾನ ತೆರವಾಗಿತ್ತು. ದಾದ್ರಾ ಮತ್ತು ನಗರ್ ಹವೇಲಿಯ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ವಿಧಿವಶರಾಗಿದ್ದರು. ಇನ್ನು ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಸದಸ್ಯರಾಗಿದ್ದ ಮೋಹನ್ ದೇಲ್ಕರ್ ಅಕಾಲಿಕ ಮರಣ ಹೊಂದಿದ್ದರು. ಮಂಡಿಯಲ್ಲಿ ಪ್ರತಿಭಾ ಸಿಂಗ್ ಅವರು ಕಾರ್ಗಿಲ್ ಯುದ್ಧ ವೀರ ಬಿಜೆಪಿಯ ಖುಶಾಲ್ ಸಿಂಗ್ ಠಾಕೂರ್ ವಿರುದ್ಧ ಕಣಕ್ಕಿಳಿದಿದ್ದಾರೆ.

ಮೇಘಾಲಯದಲ್ಲಿ ಮಾಜಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಯುಜೆನೆಸನ್ ಲಿಂಗ್ಡೋಹ್ ಅವರು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ)ಯಲ್ಲಿ ಟಿಕೆಟ್‌ ಪಡೆದು ಮಾಫ್ಲಾಂಗ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಮಾಜಿ ಕಾಂಗ್ರೆಸ್ ಶಾಸಕ ಕೆನಡಿ ಸಿ ಖೈರಿಮ್ ಮತ್ತು ಎನ್‌ಪಿಪಿಯಿಂದ ಜಿಲ್ಲಾ ಕೌನ್ಸಿಲ್ (ಎಂಡಿಸಿ) ಹಾಲಿ ಸದಸ್ಯ ಲ್ಯಾಂಫ್ರಾಂಗ್ ಬ್ಲಾ ವಿರುದ್ಧ ಸ್ಪರ್ಧಿಸಿದ್ದಾರೆ.

ಅಭಯ್ ಚೌಟಾಲಗೆ ಅಗ್ನಿ ಪರೀಕ್ಷೆ:

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದಲ್ಲಿ ಇಂಡಿಯನ್ ನ್ಯಾಷನಲ್ ಲೋಕ ದಳ (INLD) ನಾಯಕ ಅಭಯ್ ಚೌಟಾಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎಲೆನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಅಗತ್ಯವಾಗಿತ್ತು. ಐಎನ್‌ಎಲ್‌ಡಿ ಮುಖ್ಯಸ್ಥ ಓಂಪ್ರಕಾಶ್ ಚೌಟಾಲ ಅವರ ಪುತ್ರ ಅಭಯ್‌ ಚೌಟಾಲ ಅವರು ಕಾಂಗ್ರೆಸ್ ಅಭ್ಯರ್ಥಿ ಪವನ್ ಬೇನಿವಾಲ್ ಮತ್ತು ಬಿಜೆಪಿ-ಜೆಪಿ ಅಭ್ಯರ್ಥಿ ಗೋಬಿಂದ್ ಕಾಂಡ ವಿರುದ್ಧ ಸ್ಪರ್ಧಿಸಿದ್ದಾರೆ. ದಾದ್ರಾ ಮತ್ತು ನಗರ ಹವೇಲಿ ಲೋಕಸಭಾ ಕ್ಷೇತ್ರದಲ್ಲಿ ಏಳು ಬಾರಿ ಸ್ವತಂತ್ರ ಸಂಸದ ಮೋಹನ್ ದೇಲ್ಕರ್ ಅವರ ಪತ್ನಿ ಕಲಾಬೆನ್ ದೇಲ್ಕರ್ ಅವರು ಬಿಜೆಪಿಯ ಮಹೇಶ್ ಗವಿತ್ ಮತ್ತು ಕಾಂಗ್ರೆಸ್‌ನ ಮಹೇಶ್ ಧೋಡಿ ವಿರುದ್ಧ ಶಿವಸೇನಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಇತ್ತ ತೆಲಂಗಾಣದ ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಟಿಆರ್‌ಎಸ್, ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಭೂಕಬಳಿಕೆ ಆರೋಪದ ಮೇಲೆ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ ನಂತರ ಜೂನ್‌ನಲ್ಲಿ ಈಟಾಲ ರಾಜೇಂದರ್ ರಾಜೀನಾಮೆ ನೀಡಿದ ನಂತರ ಉಪಚುನಾವಣೆ ನಡೆದಿದೆ. ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿರುವ ರಾಜೇಂದರ್, ಟಿಆರ್‌ಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್‌ಗೆ ಪರ್ಯಾಯವಾಗಿ ಹೊರಹೊಮ್ಮುವ ಗುರಿ ಹೊಂದಿರುವ ಬಿಜೆಪಿಗೆ ಈ ಫಲಿತಾಂಶ ಮಹತ್ವದ್ದಾಗಿದೆ.

ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ಮೂರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇನ್ನೆರಡನ್ನು ಮೈತ್ರಿ ಪಾಲುದಾರ ಯುಪಿಪಿಎಲ್‌ಗೆ ಬಿಟ್ಟಿದೆ. ಕಾಂಗ್ರೆಸ್ ಎಲ್ಲಾ ಐದರಲ್ಲಿಯೂ ನಾಮನಿರ್ದೇಶಿತರನ್ನು ಹಾಕಿದರೆ, ಅದರ ಹಿಂದಿನ ಮಿತ್ರಪಕ್ಷಗಳಾದ ಎಐಯುಡಿಎಫ್ ಮತ್ತು ಬಿಪಿಎಫ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ, ತೃಣಮೂಲ ಪ್ರಭಾವಿ ನಾಯಕ ಉದಯನ್ ಗುಹಾ ಅವರು ಏಪ್ರಿಲ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಕಸಿದುಕೊಂಡಿದ್ದ ದಿನ್ಹತಾ ಕ್ಷೇತ್ರವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ABOUT THE AUTHOR

...view details