ಕರ್ನಾಟಕ

karnataka

3 ಲೋಕಸಭೆ, 7 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ; ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

By

Published : Jun 26, 2022, 10:05 AM IST

ಜೂನ್ 23 ರಂದು ಆರು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಪ್ರಗತಿಯಲ್ಲಿದೆ.

bypoll
bypoll

ನವದೆಹಲಿ: ದೆಹಲಿ ಸೇರಿದಂತೆ ಆರು ರಾಜ್ಯಗಳಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಏಳು ವಿಧಾನಸಭಾ ಸ್ಥಾನಗಳಿಗೆ ಗುರುವಾರ (ಜೂನ್ 23 ರಂದು) ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು ಮತಎಣಿಕೆ ನಡೆಯುತ್ತಿದೆ. ಎಣಿಕೆ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ.

ಚುನಾವಣೆ ಎಲ್ಲೆಲ್ಲಿ?:

1. ತ್ರಿಪುರಾದ ಅಗರ್ತಲಾ, ಜುಬರಾಜನಗರ, ಸುರ್ಮಾ ಮತ್ತು ಟೌನ್ ಬರ್ಡೋವಾಲಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಟೌನ್ ಬರ್ಡೋ ವಾಲಿಯಿಂದ ಸ್ಪರ್ಧಿಸಿರುವ ರಾಜ್ಯಸಭಾ ಸಂಸದ ಮಾಣಿಕ್ ಸಹಾ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ.

2. ಉತ್ತರ ಪ್ರದೇಶದ ರಾಂಪುರ, ಅಜಂಗಢ್ ಮತ್ತು ಪಂಜಾಬ್‌ನ ಸಂಗ್ರೂರ್ ಕ್ಷೇತ್ರದಲ್ಲಿ ಲೋಕಸಭಾ ಉಪಚುನಾವಣೆ ನಡೆದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ವರ್ಷದ ಆರಂಭದಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಅಜಂಗಢ್​ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಹಾಗೆಯೇ, ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೂ ವಿಧಾನಸಭೆಗೆ ಆಯ್ಕೆಯಾದಾಗ ರಾಂಪುರ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

3. ರಾಂಪುರದಲ್ಲಿ ಬಿಜೆಪಿ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಘನಶ್ಯಾಮ್ ಸಿಂಗ್ ಲೋಧಿ ಅವರನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಸೀಂ ರಾಜಾ ಸ್ಪರ್ಧಿಸಿದ್ದಾರೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ರಾಂಪುರದಿಂದ ಸ್ಪರ್ಧಿಸಲಿಲ್ಲ.

ವಿಧಾನಸಭಾ ಉಪಚುನಾವಣೆ ನಡೆದ ಇತರೆ ಕ್ಷೇತ್ರಗಳೆಂದರೆ ದೆಹಲಿಯ ರಾಜಿಂದರ್ ನಗರ, ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಮಂದರ್ ಮತ್ತು ಆಂಧ್ರಪ್ರದೇಶದ ಆತ್ಮಕೂರು.

4. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಅಲ್ಲಿ ಕೂಡ ಉಪ ಚುನಾವಣೆ ನಡೆದಿದೆ. ಎಎಪಿಯ ಗುರ್ಮಾಲಿ ಸಿಂಗ್, ಕಾಂಗ್ರೆಸ್‌ನ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಕಣದಲ್ಲಿದ್ದಾರೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದ ಆರೋಪಿ ಬಲ್ವಂತ್ ಸಿಂಗ್ ರಾಜೋನಾ ಅವರ ಸಹೋದರಿ ಕಮಲದೀಪ್ ಕೌರ್ ಅವರನ್ನು ಶಿರೋಮಣಿ ಅಕಾಲಿ ದಳದಿಂದ ಕಣಕ್ಕಿಳಿಸಲಾಗಿದೆ.

5. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ರಾಘವ್ ಛಡ್ಡಾ ಅವರ ನಿರ್ಗಮನದಿಂದ ತೆರವಾದದೆಹಲಿಯ ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರದಲ್ಲಿ ಎಎಪಿಯ ದುರ್ಗೇಶ್ ಪಾಠಕ್ ಮತ್ತು ಬಿಜೆಪಿಯ ರಾಜೇಶ್ ಭಾಟಿಯಾ ಅವರೊಂದಿಗೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರೇಮ್ ಲತಾ ಸ್ಪರ್ದಿಸಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಎಂದು ಇಂದು ಗೊತ್ತಾಗಲಿದೆ.

6. ಕಳೆದ ಫೆಬ್ರವರಿಯಲ್ಲಿ ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನರಾದ ನಂತರ ತೆರವಾದ ಸ್ಥಾನಕ್ಕೆ ಆಂಧ್ರಪ್ರದೇಶದಲ್ಲಿ ಉಪಚುನಾವಣೆ ನಡೆದಿದ್ದು, ಗೌತಮ್ ರೆಡ್ಡಿ ಕಿರಿಯ ಸಹೋದರ ವಿಕ್ರಮ್ ರೆಡ್ಡಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಜಿ ಭರತ್ ಕುಮಾರ್ ಯಾದವ್ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ.. ವಿಡಿಯೋ

ABOUT THE AUTHOR

...view details