ನವದೆಹಲಿ: ಆರು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಉತ್ತರ ಪ್ರದೇಶದ ಗೋಲ ಗೋಕರ್ಣನಾಥ ಕ್ಷೇತ್ರದಲ್ಲಿ ಕಮಲ ಮತ್ತೆ ಅರಳಿದೆ. ಅಮನ್ ಗಿರಿ ಅವರು ಎಸ್ಪಿ ಅಭ್ಯರ್ಥಿ ವಿನಯ್ ತಿವಾರಿ ಎದುರು 32 ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ತಂದೆ ಅರವಿಂದ್ ಗಿರಿ ನಿಧನದಿಂದ ತೆರವಾದ ಸ್ಥಾನಕ್ಕೆ ಪುತ್ರ ಅಮನ್ ಗಿರಿ ಸ್ಪರ್ಧಿಸಿದ್ದರು.
ವಿಧಾನಸಭೆ ಉಪಚುನಾವಣೆ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಜಯ - ವಿಧಾನಸಭೆ ಉಪಚುನಾವಣೆ
ದೇಶದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು.

ಹರಿಯಾಣದ ಆದಂಪುರ, ಒಡಿಶಾದ ಧಮ್ನಗರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಹಾಗೆಯೇ ತೆಲಂಗಾಣದ ಮುನುಗೋಡುದಲ್ಲಿ ಟಿಆರ್ಎಸ್ ಮುನ್ನಡೆ ಕಾಯ್ದುಕೊಂಡಿದ್ದು 5ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಟಿಆರ್ಎಸ್ ಅಭ್ಯರ್ಥಿ ಕೂಸುಕುಂಟ್ಲ ಪ್ರಭಾಕರ್ ರೆಡ್ಡಿ 1631 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಮಟಿರೆಡ್ಡಿ ರಾಜ್ ಗೋಪಾಲ ರೆಡ್ಡಿ ಹಿನ್ನಡೆ ಅನುಭವಿಸಿದ್ದಾರೆ. ಬಿಹಾರದ ಮೊಕಾಮಾ ಕ್ಷೇತ್ರದಲ್ಲಿ ಆರ್ಜೆಡಿಯ ನೀಲಂ ದೇವಿ, ಮಹಾರಾಷ್ಟ್ರದ ಅಂಧೇರಿ ಪೂರ್ವದಲ್ಲಿ ಉದ್ಧವ್ ಠಾಕ್ರೆ ಅವರ ಶಿವ ಸೇನೆ ಅಭ್ಯರ್ಥಿ ಋತುಜ ಲಟಕೆ ಮುನ್ನಡೆ ಗಳಿಸಿದ್ದಾರೆ.
ನ.3 ರಂದು ಬಿಹಾರದ ಮೊಕಾಮಾ ಮತ್ತು ಗೋಪಾಲ್ಗಂಜ್ ವಿಧಾನಸಭಾ ಕ್ಷೇತ್ರಗಳು, ಮಹಾರಾಷ್ಟ್ರದ ಅಂಧೇರಿ (ಪೂರ್ವ), ಹರಿಯಾಣದ ಆದಂಪುರ, ತೆಲಂಗಾಣದ ಮುನುಗೋಡು, ಉತ್ತರ ಪ್ರದೇಶದ ಗೋಲಾ ಗೋಕರನಾಥ್ ಮತ್ತು ಒಡಿಶಾದ ಧಮ್ನಗರದಲ್ಲಿ ಮತದಾನ ನಡೆದಿತ್ತು.