ಕರ್ನಾಟಕ

karnataka

By ETV Bharat Karnataka Team

Published : Oct 26, 2023, 1:50 PM IST

Updated : Oct 26, 2023, 2:29 PM IST

ETV Bharat / bharat

Video - ಸಿನಿಮೀಯ ಶೈಲಿಯಲ್ಲಿ ವಾಷಿಂಗ್ ಮಷಿನ್​ನಲ್ಲಿ ಇರಿಸಿ ಬಂಡಲ್​ಗಟ್ಟಲೆ ನೋಟುಗಳ ಸಾಗಣೆ.. ಶೋರೂಮ್ ಎಂಡಿ, ಪೊಲೀಸರು ಹೇಳಿದ್ದೇನು?

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಾಷಿಂಗ್ ಮಷಿನ್​ನಲ್ಲಿ ಇರಿಸಿ ಸಾಗಿಸುತ್ತಿದ್ದ ಬಂಡಲ್​ಗಟ್ಟಲೆ ನೋಟುಗಳು ಹಾಗೂ ಮೊಬೈಲ್​ ಫೋನ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

bundled-notes-and-mobiles-transported-in-washing-machine-in-andhra
ಸಿನಿಮೀಯ ಶೈಲಿನಲ್ಲಿ ವಾಷಿಂಗ್ ಮಷಿನ್​ನಲ್ಲಿ ಇರಿಸಿ ಬಂಡಲ್​ ಗಟ್ಟಲೆ ನೋಟುಗಳ ಸಾಗಾಟ... ಶೋರೂಮ್ ಎಂಡಿ, ಪೊಲೀಸರು ಹೇಳಿದ್ದೇನು?

ಸಿನಿಮೀಯ ಶೈಲಿನಲ್ಲಿ ವಾಷಿಂಗ್ ಮಷಿನ್​ನಲ್ಲಿ ಇರಿಸಿ ಬಂಡಲ್​ ಗಟ್ಟಲೆ ನೋಟುಗಳ ಸಾಗಾಟ...

ವಿಶಾಖಪಟ್ಟಣಂ (ಆಂಧ್ರಪ್ರದೇಶ): ವಾಷಿಂಗ್​ ಮಷಿನ್​ಗಳಲ್ಲಿ ಕೋಟ್ಯಂತರ ಮೌಲ್ಯದ ನೋಟುಗಳು ಹಾಗೂ ದುಬಾರಿ ಮೊಬೈಲ್​ ಫೋನ್​ಗಳನ್ನು ಸಾಗಿಸುತ್ತಿದ್ದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೆಳಕಿಗೆ ಬಂದಿದೆ. ಈ ಬಂಡಲ್​ಗಟ್ಟಲೆ ಹಣದ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅಂತೆಯೇ, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಇದರ ಭಾಗವಾಗಿ ಎನ್‌ಎಡಿ ಜಂಕ್ಷನ್​ನಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆ ವೇಳೆ ವಾಹನವೊಂದರಲ್ಲಿ ವಾಷಿಂಗ್ ಮಷಿನ್​ಗಳನ್ನು ಸಾಗಿಸುತ್ತಿದ್ದು, ಅವುಗಳ ಒಳಗೆ ನೋಟುಗಳ ರಾಶಿ ಇರುವುದು ಪತ್ತೆಯಾಗಿದೆ. ಇದಲ್ಲದೇ, 30 ಪ್ಯಾಕ್‌ಗಳ ದುಬಾರಿ ಮೊಬೈಲ್​ ಫೋನ್‌ಗಳು ಸಹ ಪತ್ತೆಯಾಗಿವೆ.

ಸಿನಿಮೀಯ ರೀತಿಯಲ್ಲಿ ಹಣ ಸಾಗಣೆ:ವಾಷಿಂಗ್ ಮಷಿನ್​ಗಳಲ್ಲಿ ಹಣವನ್ನು ಸಿನಿಮೀಯ ರೀತಿಯಲ್ಲಿ ಸಾಗಾಟ ಮಾಡಲಾಗಿತ್ತು. ವಾಷಿಂಗ್ ಮಿಷನ್‌ಗಳಲ್ಲಿ ನೋಟುಗಳನ್ನು ರಾಶಿ ಹಾಕಿ ಅದರ ಮೇಲೆ ಥರ್ಮಾಕೋಲ್​ ಹಾಳೆಗಳಿಂದ ಮುಚ್ಚಲಾಗಿತ್ತು. ವಾಹನದಲ್ಲಿ ಹಣದ ಸಮೇತ ಚಾಲಕ ಮತ್ತು ಓರ್ವ ಕ್ಲೀನರ್ ತೆರಳುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ಬೈಕ್​ನಲ್ಲಿ​ ಬಾಡಿಗಾರ್ಡ್​ ರೀತಿ ಹಿಂಬಾಲಿಸುತ್ತಿದ್ದ. ಇದರಿಂದ ವಾಹನ, ವಾಷಿಂಗ್ ಮಷಿನ್​ ಹಾಗೂ ಅದರಲ್ಲಿದ್ದ ಹಣ ಹಾಗೂ ಮೊಬೈಲ್​ಗಳು, ಬೈಕ್​ ಅನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 1.30 ಕೋಟಿ ರೂ. ಮೌಲ್ಯದ ನೋಟುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಎಲೆಕ್ಟ್ರಾನಿಕ್ಸ್ ಶೋರೂಂ ಎಂಡಿ ವಿವರಣೆ ಹೀಗಿದೆ:ಇಷ್ಟೊಂದು ಹಣವನ್ನು ಕದ್ದು ಮುಚ್ಚಿ ಸಾಗಾಟ ಮಾಡುತ್ತಿರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ನೆರೆಯ ತೆಲಂಗಾಣದ ವಿಧಾನಸಭಾ ಚುನಾವಣೆಗಾಗಿ ಹವಾಲಾ ಮತ್ತು ಕಪ್ಪುಹಣ ಸಾಗಿಸಲಾಗುತ್ತಿತ್ತು ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ವಾಷಿಂಗ್ ಮಷಿನ್​ಗಳು ಹಾಗೂ ಹಣವು ಎಲೆಕ್ಟ್ರಾನಿಕ್ಸ್ ಶೋರೂಂವೊಂದಕ್ಕೆ ಸೇರಿದ್ದು, ಈ ಕುರಿತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸಹ ಸ್ಪಷ್ಟನೆ ನೀಡಿದ್ದಾರೆ.

ವಿಶಾಖಪಟ್ಟಣಂದ ಶೋರೂಂನಿಂದ ವಿಜಯವಾಡದ ಕೇಂದ್ರ ಕಚೇರಿಗೆ ಕಂಪನಿಯ ವಾಹನದಲ್ಲಿ ಆರು ವಾಷಿಂಗ್ ಮಷಿನ್​ಗಳನ್ನು ತೆಗೆದುಕೊಂದು ಹೋಗಲಾಗುತ್ತಿತ್ತು. ದಸರಾ ಮಾರಾಟದ ನಗದನ್ನು ಬ್ಯಾಂಕ್​ನಲ್ಲಿ ಜಮಾ ಮಾಡಲು ತಾಂತ್ರಿಕ ತೊಂದರೆಗಳು ಉಂಟಾಗಿದ್ದವು. ಹೀಗಾಗಿ ವಾಷಿಂಗ್ ಮಷಿನ್​ ಸಮೇತವಾಗಿ ಸೂಕ್ತ ದಾಖಲೆಗಳೊಂದಿಗೆ ನಗದನ್ನು ವಿಜಯವಾಡಕ್ಕೆ ರವಾನಿಸಲಾಗುತ್ತಿತ್ತು. ಇದು ಯಾವುದೇ ಹವಾಲಾ ಮತ್ತು ಕಪ್ಪುಹಣವಲ್ಲ ಎಂದು ಕಂಪನಿಯ ಎಂಡಿ ತಿಳಿಸಿದ್ದಾರೆ.

ವಿಶಾಖಪಟ್ಟಣಂ ಎಸಿಪಿ ಹೇಳಿದ್ದೇನು?:ಈ ಕುರಿತು ವಿಶಾಖಪಟ್ಟಣಂ ಪಶ್ಚಿಮ ವಿಭಾಗದ ಉಪ ಪೊಲೀಸ್​ ಆಯುಕ್ತ ನರಸಿಂಹಮೂರ್ತಿ ಪ್ರತಿಕ್ರಿಯಿಸಿ, ನಿಯಮಗಳ ಪ್ರಕಾರ, ನಾವು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಗದು ಮತ್ತು ಮೊಬೈಲ್ ಫೋನ್‌ಗಳನ್ನು ಹಾಜರುಪಡಿಸಿದ್ದೇವೆ. ಇದರ ಮಾಲೀಕರು ನ್ಯಾಯಾಲಯದ ಮುಂದೆ ಸಾಕ್ಷ್ಯವನ್ನು ತೋರಿಸಬೇಕು. ನಗದು ಹಣಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ, ಐಟಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಿದ್ದೇವೆ. ಆಯಾ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.53 ಕೋಟಿ ರೂ. ಹಣ ಜಪ್ತಿ

Last Updated : Oct 26, 2023, 2:29 PM IST

ABOUT THE AUTHOR

...view details