ಕರ್ನಾಟಕ

karnataka

By

Published : Jan 31, 2022, 11:15 AM IST

Updated : Jan 31, 2022, 12:07 PM IST

ETV Bharat / bharat

ಮಹಾಮಾರಿ ಕೋವಿಡ್‌ ವಿರುದ್ಧದ ಭಾರತದ ಹೋರಾಟ ಸ್ಫೂರ್ತಿದಾಯಕ - ರಾಷ್ಟ್ರಪತಿ ಕೋವಿಂದ್ ಬಣ್ಣನೆ

ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾವು 150 ಕೋಟಿ ಡೋಸ್‌ಗಳ ಲಸಿಕೆಯನ್ನು ನೀಡಿದ ದಾಖಲೆ ಮಾಡಿದ್ದೇವೆ. ಇಂದು ಗರಿಷ್ಠ ಸಂಖ್ಯೆಯ ಡೋಸ್‌ಗಳನ್ನು ನೀಡುವ ವಿಷಯದಲ್ಲಿ ನಾವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕೇಂದ್ರ ಸರ್ಕಾರದ ಸಾಧನೆಯನ್ನು ಜಂಟಿ ಅಧಿವೇಶನದ ಭಾಷಣದಲ್ಲಿ ಪ್ರಸ್ತಾಪಿಸಿದರು.

Budget 2022: President ramanath kovind speech highlights
2022ರ ಬಜೆಟ್​ ಭಾಷಣ

ನವದೆಹಲಿ:ಕೋವಿಡ್‌ನಿಂದಾಗಿ ಅನೇಕ ಜೀವಗಳು ಬಲಿಯಾದವು. ಅಂತಹ ಸಂದರ್ಭಗಳಲ್ಲಿಯೂ ಕೇಂದ್ರ, ರಾಜ್ಯಗಳು, ವೈದ್ಯರು, ದಾದಿಯರು, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ತಂಡಗಳಾಗಿ ಕೆಲಸ ಮಾಡಿದರು. ನಮ್ಮ ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದ್ದಾರೆ.

2022ರ ಕೇಂದ್ರ ಬಜೆಟ್​​ ಅಧಿವೇಶನದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದ ಸಾಮರ್ಥ್ಯ ಏನೆಂಬುದು ಲಸಿಕೆ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾವು 150 ಕೋಟಿ ಡೋಸ್‌ಗಳ ಲಸಿಕೆಯನ್ನು ನೀಡಿದ ದಾಖಲೆ ಮಾಡಿದ್ದೇವೆ. ಇಂದು, ಗರಿಷ್ಠ ಸಂಖ್ಯೆಯ ಡೋಸ್‌ಗಳನ್ನು ನೀಡುವ ವಿಷಯದಲ್ಲಿ ನಾವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಆಯುಷ್ಮಾನ್ ಭಾರತ್ ಕಾರ್ಡ್ ಬಡವರಿಗೆ ಅನುಕೂಲವಾಗಿದೆ. ಜನೌಷದಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿಗಳ ಲಭ್ಯತೆಯೂ ಉತ್ತಮ ಕ್ರಮವಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಯನ್ನು ಹಾಡಿ ಹೊಗಳಿದರು.

ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳನ್ನು ಪಡೆಯಲು ನೆರವಾದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವದಿಂದ ಸ್ಮರಿಸುತ್ತೇನೆ.

ಈ ವರ್ಷದಿಂದ ಸರ್ಕಾರವು ನೇತಾಜಿ ಅವರ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಪ್ರಾರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಹಿಂದಿನದನ್ನು ಸ್ಮರಿಸುವುದು ಮತ್ತು ಅದರಿಂದ ಕಲಿಯುವುದು ಬಹಳ ಮುಖ್ಯ ಎಂಬುದನ್ನು ಸರ್ಕಾರ ನಂಬುತ್ತದೆ ಎಂದರು.

'ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ'

ಆದರ್ಶ ಸಮಾಜವು ಸ್ವಾತಂತ್ರ್ಯ, ಸಮಾನತೆ ಹಾಗೂ ಸೌಹಾರ್ದತೆ ಆಧರಿಸಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ, ಪ್ರಜಾಪ್ರಭುತ್ವದ ಮೂಲವು ಜನರನ್ನು ಗೌರವಿಸುವ ಭಾವನೆಯಾಗಿದೆ. ಕೇಂದ್ರ ಸರ್ಕಾರವು ಬಾಬಾಸಾಹೇಬರ ಆದರ್ಶಗಳನ್ನು ತನ್ನ ಮಾರ್ಗದರ್ಶಿ ತತ್ತ್ವವೆಂದು ಪರಿಗಣಿಸುತ್ತದೆ.

ಯಾರೂ ಹಸಿವಿನಿಂದ ಮನೆಗೆ ಹಿಂದಿರುಗಬಾರದು ಎಂದು ಖಚಿತಪಡಿಸಿಕೊಳ್ಳಲು, ನನ್ನ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ ಪ್ರತಿ ತಿಂಗಳು ಬಡವರಿಗೆ ಉಚಿತ ಪಡಿತರವನ್ನು ವಿತರಿಸುತ್ತದೆ. ಇಂದು ಭಾರತವು ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮ ನಡೆಸುತ್ತಿದೆ; ಇದನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ.

ಸಾಂಕ್ರಾಮಿಕ ಸಮಯದಲ್ಲಿ 44 ಕೋಟಿ ಬಡ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಲಿಂಕ್ ಮಾಡುವ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳು ನೇರ ನಗದು ವರ್ಗಾವಣೆಯ ಪ್ರಯೋಜನಗಳನ್ನು ಪಡೆದಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯನ್ನೂ ಸರ್ಕಾರ ನಡೆಸುತ್ತಿದೆ. ಇಲ್ಲಿಯವರೆಗೆ 28 ​​ಲಕ್ಷ ಬೀದಿ ವ್ಯಾಪಾರಿಗಳು 2,900 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಸರ್ಕಾರ ಈಗ ಈ ಮಾರಾಟಗಾರರನ್ನು ಆನ್‌ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣವು ನನ್ನ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಉಜ್ವಲ ಯೋಜನೆಯ ಯಶಸ್ಸಿಗೆ ನಾವೇ ಸಾಕ್ಷಿಗಳು. ಮುದ್ರಾ ಯೋಜನೆಯ ಮೂಲಕ, ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಗಳು ಉತ್ತೇಜನವನ್ನು ಪಡೆದಿವೆ. 'ಬೇಟಿ ಬಚಾವೋ, ಬೇಟಿ ಪಢಾವೋ' ಮೂಲಕ ಹಲವು ಸಕಾರಾತ್ಮಕ ಫಲಿತಾಂಶಗಳು ಮುನ್ನೆಲೆಗೆ ಬಂದಿವೆ ಎಂದು ರಾಷ್ಟ್ರಪತಿ ಬಣ್ಣಿಸಿದರು.

'ಸ್ಥಳೀಯ ಭಾಷೆಗಳಿಗೆ ಉತ್ತೇಜನ'

ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲಾಗುತ್ತಿದೆ. ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ಭಾರತೀಯ ಭಾಷೆಗಳಲ್ಲಿ ನಡೆಸಲು ಒತ್ತು ನೀಡಲಾಗುತ್ತಿದೆ. ಈ ವರ್ಷ 10 ರಾಜ್ಯಗಳಲ್ಲಿ 19 ಇಂಜಿನಿಯರಿಂಗ್ ಕಾಲೇಜುಗಳು 6 ಭಾರತೀಯ ಭಾಷೆಗಳಲ್ಲಿ ಶಿಕ್ಷಣ ನೀಡಲಿವೆ. ಗಂಡು - ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನಮಾನ ಕಲ್ಪಿಸಿ, ಕೇಂದ್ರ ಸರ್ಕಾರವು ವಿವಾಹವಾಗಲು ಮಹಿಳೆಯರಿಗೆ ಕನಿಷ್ಠ 18 ವರ್ಷ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಲು ಮಸೂದೆಯನ್ನು ಮಂಡಿಸಿದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ತಮ್ಮ ಸುದೀರ್ಘ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 31, 2022, 12:07 PM IST

ABOUT THE AUTHOR

...view details