ಜಮ್ಮು-ಶ್ರೀನಗರ :ಪಾಕಿಸ್ತಾನ ಡ್ರೋಣ್ ಇಲ್ಲಿನ ಅರ್ನಿಯಾ ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿ ದಾಟಲು ಪ್ರಯತ್ನಿಸಿದ್ದು, ಬಿಎಸ್ಎಫ್ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆಸುತ್ತಿದ್ದಂತೆ ಡ್ರೋಣ್ ಹಿಂತಿರುಗಿದೆ. ಇನ್ನು, ಈಗಾಗಲೇ ಡ್ರೋಣ್ ಒಂದನ್ನು ಸೇನೆ ವಶಪಡಿಸಿಕೊಂಡಿದ್ದು, ಡಜನ್ಗಟ್ಟಲೇ ಐಇಡಿ ಜಪ್ತಿ ಮಾಡಲಾಗಿದೆ.
ಜಮ್ಮು ವಾಯುಪಡೆ ನಿಲ್ದಾಣದ ಮೇಲೆ 5 ದಿನಗಳಲ್ಲಿ ಮೂರು ಬಾರಿ ಡ್ರೋಣ್ ದಾಳಿ ನಡೆಸಿದೆ. ಇನ್ನು, ಪಾಕಿಸ್ತಾನದಲ್ಲಿ ದಾಳಿಯ ಯೋಜನೆಯನ್ನು ಮತ್ತೆ ರೂಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಹಿಂದೆ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಐಎಸ್ಐ ಕೈವಾಡವಿದೆ ಎಂದು ತಿಳಿದು ಬಂದಿದೆ.
ಇನ್ನು, ಈ ಬಗ್ಗೆ ಡಿಜಿಪಿ ದಿಲ್ಬಾಗ್ ಸಿಂಗ್ ಮಾತನಾಡಿದ್ದು, "ಡ್ರೋಣ್ ಮೂಲಕ ಪಾಕಿಸ್ತಾನದಿಂದ ಬಂದ ರೆಡಿಮೇಡ್ ಐಇಡಿಯನ್ನು ವಶಪಡಿಸಿಕೊಂಡಿದ್ದೇವೆ. ತನಿಖೆ ವೇಳೆ ಎಲ್ಇಟಿ ಉಗ್ರ ಸಂಘಟನೆ ಕೈವಾಡ ಇದು ಎಂದು ತಿಳಿದು ಬಂದಿದೆ" ಎಂದರು.
ಅಷ್ಟೇ ಅಲ್ಲ, ಐಇಡಿಯನ್ನು ಪಡೆದು ಜಮ್ಮುವಿನ ಕೆಲವೆಡೆ ಸ್ಫೋಟಿಸಲು ಯೋಜನೆ ರೂಪಿಸುತ್ತಿದ್ದವರನ್ನೂ ಸಹ ಸೇನೆ ಬಂಧಿಸಿದೆ. ಈಗಾಗಲೇ ದಾಳಿ ನಡೆಸಲು ಸಂಘಟನೆ ತೀವ್ರ ರೀತಿಯಲ್ಲಿ ತೊಡಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿದೆ.
ವಾಯುಪಡೆ ನಿಲ್ದಾಣದ ಮೇಲೆ ದಾಳಿ ನಡೆದ ಮರುದಿನವೇ ಜಮ್ಮುವಿನ ಕಲುಚಕ್ ಮಿಲಿಟರಿ ನಿಲ್ದಾಣದ ಬಳಿ ಎರಡು ಡ್ರೋಣ್ಗಳು ಕಾಣಿಸಿದ್ದವು. ಸೇನಾ ಸಿಬ್ಬಂದಿ ಗುಂಡು ಹಾರಿಸಿದ ಕೂಡಲೇ ಡ್ರೋಣ್ಗಳು ಅಲ್ಲಿಂದ ಪರಾರಿಯಾಗಿದ್ದವು. ಮೊದಲ ಡ್ರೋಣ್ ಅನ್ನು ಕಲುಚಕ್ ಮಿಲಿಟರಿ ಸ್ಟೇಷನ್ ಬಳಿ ರಾತ್ರಿ 11: 45ಕ್ಕೆ ಮತ್ತು ಎರಡನೆಯದನ್ನು ಮಧ್ಯಾಹ್ನ 2:40ಕ್ಕೆ ನೋಡಲಾಗಿತ್ತು. ಡ್ರೋಣ್ ಬಳಸಿ ಭಾರತೀಯ ಮಿಲಿಟರಿ ನೆಲೆಯ ಮೇಲೆ ನಡೆದ ಮೊದಲ ದಾಳಿ ಇದು.
ಜಮ್ಮುವಿನ ವಾಯುಪಡೆ ನಿಲ್ದಾಣದ ಮೇಲೆ ನಡೆದ ದಾಳಿಯ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಈ ಮಧ್ಯೆ ಡ್ರೋಣ್ ದಾಳಿಯನ್ನು ಎದುರಿಸಲು ಭಾರತವು ಒಂದು ವ್ಯವಸ್ಥೆ ಮತ್ತು ತಂತ್ರಜ್ಞಾನವನ್ನು ಕಂಡು ಹಿಡಿದಿದೆ. ಉನ್ನತ ಮಟ್ಟದ ಮೂಲಗಳ ಪ್ರಕಾರ ಶೀಘ್ರದಲ್ಲೇ ಜಮ್ಮು ವಾಯುಪಡೆ ನಿಲ್ದಾಣದಂತಹ ಪ್ರದೇಶದಲ್ಲಿ ಭಯೋತ್ಪಾದಕ ಡ್ರೋನ್ ದಾಳಿಯನ್ನು ಎದುರಿಸಲು ಬಲವಾದ ನೀತಿಯನ್ನು ಜಾರಿಗೊಳಿಸಲಿದೆ ಎಂದು ತಿಳಿದು ಬಂದಿದೆ.
ಪಿಎಂ ಮೋದಿ ಅವರು ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದು,ಇದರಲ್ಲಿ ಸ್ಫೋಟಕಗಳನ್ನು ಹೊಂದಿದ ಈ ಡ್ರೋನ್ಗಳ ಭಯೋತ್ಪಾದಕ ದಾಳಿಯನ್ನು ಎದುರಿಸಲು ಸಮಗ್ರ ಡ್ರೋನ್ ನೀತಿಯನ್ನು ಸಿದ್ಧಪಡಿಸುವ ಕುರಿತು ಚರ್ಚಿಸಲಾಗಿದೆ.