ಮುಂಬೈ: ಕೌನ್ ಬನೇಗಾ ಕರೋಡಪತಿ (ಕೆಬಿಸಿ) ಕಾರ್ಯಕ್ರಮದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪದ ಮೇಲೆ ಬಿಜೆಪಿ ಶಾಸಕರೊಬ್ಬರು ಅಮಿತಾಬ್ ಬಚ್ಚನ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಲಾತೂರ್ ಜಿಲ್ಲೆ ಔಸಾ ಕ್ಷೇತ್ರದ ಬಿಜೆಪಿ ಶಾಸಕ ಅಭಿಮನ್ಯು ಪವಾರ್ ಈ ದೂರು ನೀಡಿದ್ದು, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಸೋನಿ ಎಂಟರ್ಟೈನ್ಮೆಂಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಾತೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಿಂಗಳೆ ಅವರಿಗೆ ದೂರು ನೀಡಿದ್ದಾರೆ.
ಕಳೆದ ಶುಕ್ರವಾರ ಪ್ರಸಾರಗೊಂಡಿರುವ ಕೌನ್ ಬನೇಗಾ ಕರೋಡಪತಿ(ಕೆಬಿಸಿ)ಯಲ್ಲಿ ಕೇಳಲಾಗಿರುವ ಪ್ರಶ್ನೆವೊಂದು ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂಬುದು ಅವರ ವಾದವಾಗಿದೆ.ತಾವು ನೀಡಿರುವ ದೂರಿನ ಪ್ರತಿಯನ್ನ ಶಾಸಕ ಅಭಿಮನ್ಯು ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಅದು ಎರಡು ಪುಟಗಳಿಂದ ಕೂಡಿದೆ.
ಕೇಳಿರುವ ಪ್ರಶ್ನೆ ಏನು!?
1927ರ ಡಿಸೆಂಬರ್ 25ರಂದು ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥ ಸುಟ್ಟು ಹಾಕಿದ್ದರು? ಎಂಬ ಪ್ರಶ್ನೆ ಕೇಳಲಾಗಿತ್ತು.(ಎ) ವಿಷ್ಣು ಪುರಾಣ (ಬಿ) ಭಗವದ್ಗೀತೆ (ಸಿ) ಋಗ್ವೇದ ಮತ್ತು (ಡಿ) ಮನುಸ್ಮೃತಿ ಎಂಬ ಆಯ್ಕೆ ನೀಡಲಾಗಿತ್ತು. ಈ ಪ್ರಶ್ನೆ 6.40 ಲಕ್ಷ ರೂ ಬಹುಮಾನದ್ದಾಗಿತ್ತು.
ಇದರ ವಿವರಣೆ ನೀಡುತ್ತಿದ್ದ ವೇಳೆ ಬಚ್ಚನ್, ಮನುಸ್ಮೃತಿಯಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಸಮರ್ಥಿಸಲಾಗಿದೆ ಎಂದು ಹೇಳಿ, 1927ರಲ್ಲಿ ಅಂಬೇಡ್ಕರ್ ಇದರ ಪ್ರತಿಗಳನ್ನ ಸುಟ್ಟು ಹಾಕಿದ್ದರು ಎಂದು ತಿಳಿಸಿದ್ದರು. ಹೀಗಾಗಿ ಹಿಂದೂಗಳ ನೋಯಿಸುವ ಕೆಲಸ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇನ್ನು ಅಭಿಮನ್ಯು ಪವಾರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಈ ಪ್ರಶ್ನೆ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಸಹ ವ್ಯಕ್ತವಾಗಿದೆ.