ಕರ್ನಾಟಕ

karnataka

ETV Bharat / bharat

ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ-ಏಕನಾಥ ಬಣಕ್ಕೆ ಮೇಲುಗೈ: ಬಿಜೆಪಿ ಪ್ರತಿಪಾದನೆ - ಬಿಜೆಪಿ ಹಾಗೂ ಏಕನಾಥ ಶಿಂದೆ ಬಣದ ಮೇಲುಗೈ

ಮಹಾರಾಷ್ಟ್ರದ 547 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿ ಹಾಗೂ ಏಕನಾಥ ಶಿಂದೆ ಬಣದ ಮೇಲುಗೈ ಆಗಿದೆ ಎಂದು ಬಿಜೆಪಿ ಹೇಳಿದೆ.

ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ-ಏಕನಾಥ ಬಣಕ್ಕೆ ಮೇಲುಗೈ
BJP Eknath Shinde Camp Claim Big Win

By

Published : Sep 20, 2022, 11:32 AM IST

ಮುಂಬೈ: ಬಿಜೆಪಿ ಬೆಂಬಲಿತ 259 ಅಭ್ಯರ್ಥಿಗಳು ಮತ್ತು ಶಿವಸೇನೆ ಏಕನಾಥ ಶಿಂಧೆ ಬಣ ಬೆಂಬಲಿತ 40 ಅಭ್ಯರ್ಥಿಗಳು ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಸರಪಂಚ್‌ಗಳಾಗಿ ಆಯ್ಕೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರು ಸೋಮವಾರ ಹೇಳಿದ್ದಾರೆ.

ರಾಜ್ಯದ 16 ಜಿಲ್ಲೆಗಳ 547 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಶೇ 76ರಷ್ಟು ಮತದಾನವಾಗಿದೆ. ಪಕ್ಷಾತೀತವಾಗಿ ಚುನಾವಣೆ ನಡೆದಿದ್ದು ಸೋಮವಾರ ಮತ ಎಣಿಕೆ ನಡೆಯಿತು. ಗ್ರಾಮ ಪಂಚಾಯಿತಿಗಳ ಚುನಾವಣೆಯ ಜೊತೆಗೆ ಗ್ರಾಮಗಳ ಸರಪಂಚ್‌ಗಳ ಸ್ಥಾನಕ್ಕೂ ನೇರ ಚುನಾವಣೆ ನಡೆಯಿತು.

ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಾವಂಕುಲೆ, 259 ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲಿತ ಅಭ್ಯರ್ಥಿಗಳು ಸರಪಂಚರಾಗಿ ಆಯ್ಕೆಯಾಗಿದ್ದಾರೆ ಎಂದರು.

ಬಿಜೆಪಿಯ ಮಿತ್ರಪಕ್ಷ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದ ಬೆಂಬಲಿತ 40 ಅಭ್ಯರ್ಥಿಗಳು ಸರಪಂಚರಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಸಚಿವರೂ ಆಗಿದ್ದ ಬಾವಂಕುಲೆ ಹೇಳಿದರು. ಒಟ್ಟಾರೆಯಾಗಿ ಹೊಸದಾಗಿ ಆಯ್ಕೆಯಾಗಿರುವ ಶೇ 50ಕ್ಕೂ ಹೆಚ್ಚು ಸರಪಂಚಗಳು ಶಿಂಧೆ-ಬಿಜೆಪಿ ಮೈತ್ರಿಕೂಟದ ಬೆಂಬಲಿಗರಾಗಿದ್ದಾರೆ. ಗ್ರಾಮ ಪಂಚಾಯತ್ ಫಲಿತಾಂಶಗಳು ಶಿಂಧೆ-ಫಡ್ನವಿಸ್ ಸರ್ಕಾರದ ಮೇಲೆ ಮಹಾರಾಷ್ಟ್ರ ಜನರ ನಂಬಿಕೆಯನ್ನು ದೃಢಪಡಿಸಿವೆ ಎಂದು ಬಾವಂಕುಲೆ ತಿಳಿಸಿದರು.

ಜೂನ್ ಅಂತ್ಯದಲ್ಲಿ ಅಧಿಕಾರಕ್ಕೆ ಬಂದ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿದ್ದಾರೆ. ಶಿವಸೇನೆ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಶಿಂಧೆ ಮತ್ತು ಇತರ 39 ಶಾಸಕರು ಜೂನ್‌ನಲ್ಲಿ ಶಿವಸೇನೆಯಿಂದ ಹೊರಬಂದಿದ್ದರು.

ಇದನ್ನೂ ಓದಿ: ಔರಂಗಾಬಾದ್​​ಗೆ ಸಂಭಾಜಿನಗರ, ಉಸ್ಮಾನಾಬಾದ್​ಗೆ ಧರಶಿವ ಎಂದು ಮರು ನಾಮಕರಣ...

ABOUT THE AUTHOR

...view details