ನವದೆಹಲಿ:ಅಕ್ರಮ ಹಣ ಸಾಗಾಣೆ ಹಾಗೂ ಭಯೋತ್ಪಾದನೆ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಜಾಕೀರ್ ನಾಯಕ್ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ನಮಗೆ ಯಾವುದೇ ರೀತಿಯಲ್ಲಿ ಮನವಿ ಸಲ್ಲಿಕೆ ಮಾಡಿಲ್ಲ ಎಂದು ಅಲ್ಲಿನ ಪ್ರಧಾನಿ ಮಹತೀರ್ ಮೊಹಮ್ಮದ್ ಇದೀಗ ಹೇಳಿಕೆ ನೀಡಿದ್ದಾರೆ.
94 ವರ್ಷದ ಮಲೇಷಿಯಾದ ಪ್ರಧಾನಿ ರೇಡಿಯೋ ಸ್ಟೇಷನ್ನಲ್ಲಿ ಮಾತನಾಡುತ್ತಿದ್ದ ವೇಳೆ ಈ ಕುರಿತು ಹೇಳಿಕೆ ನೀಡಿದ್ದು, ಭಾರತಕ್ಕೆ ಬೇಕಾಗಿರುವ ಜಾಕೀರ್ ನಾಯಕ್ನನ್ನು ತನ್ನ ವಶಕ್ಕೆ ಒಪ್ಪಿಸಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಜೊತೆ ಚರ್ಚಿಸಿಲ್ಲ ಎಂದು ಅವರು ಇದೀಗ ತಿಳಿಸಿದ್ದಾರೆ.
ಹಲವು ದೇಶಗಳಿಗೆ ಜಾಕೀರ್ ನಾಯಕ್ ಬೇಕಾಗಿಲ್ಲ. ನಾನು ಪ್ರಧಾನಿ ಮೋದಿಯವರನ್ನ ಈ ಹಿಂದೆ ಭೇಟಿ ಮಾಡಿದಾಗ ಅವರು ಈತನಿಗಾಗಿ ಯಾವುದೇ ರೀತಿಯ ಕೋರಿಕೆ ಮಂಡನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 5ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೊಹಮ್ಮದ್ ಭೇಟಿಯಾಗಿದ್ದರು. ಈ ವೇಳೆ ಪ್ರಧಾನಮಂತ್ರಿಗಳ ದ್ವಿಪಕ್ಷೀಯ ಮಾತುಕತೆ ಕುರಿತು ಸುದ್ದಿಗಾರರಿಗೆ ವಿವರಣೆ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ , ‘ಜಾಕೀರ್ ನಾಯಕ್ ಹಸ್ತಾಂತರ ಕುರಿತು ಮೋದಿ ಅಲ್ಲಿನ ಪ್ರಧಾನಿ ಜತೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ಇದೀಗ ವಿವಾದಿತ ಮುಸ್ಲಿಂ ಧರ್ಮ ಪ್ರಚಾರಕನ ಹಸ್ತಾಂತರಕ್ಕೆ ಭಾರತದಿಂದ ನಮಗೆ ಯಾವುದೇ ರೀತಿಯ ಮನವಿ ಬಂದಿಲ್ಲ. ಈ ಕುರಿತು ನವದೆಹಲಿಯಿಂದ ಅಧಿಕೃತ ನೋಟಿಸ್ ಮಾತ್ರ ತಲುಪಿದೆ ಎಂದು ಮಹತೀರ್ ತಿಳಿಸಿದ್ದಾರೆ.
53 ವರ್ಷದ ಮುಸ್ಲಿಂ ಧರ್ಮ ಪ್ರಚಾರಕ ಜಾಕೀರ್ ನಾಯಕ್, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ ಆರೋಪದಿಂದಾಗಿ 2016ರಲ್ಲಿ ಭಾರತ ಬಿಟ್ಟು ಹೋಗಿದ್ದು,ಇದೀಗ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾನೆ. ಜಾಕೀರ್ ನಾಯಕ್ ನಮ್ಮ ದೇಶದ ಪೌರನಲ್ಲ. ಈ ಹಿಂದಿನ ಸರ್ಕಾರ ಆತನಿಗೆ ಪೌರತ್ವ ನೀಡಿದೆ ಎಂದು ಮಹತೀರ್ ಇದೇ ವೇಳೆ ತಿಳಿಸಿದ್ದಾರೆ.