ಕರ್ನಾಟಕ

karnataka

By

Published : Jun 25, 2020, 5:44 PM IST

ETV Bharat / bharat

ಲಾಕ್‌ಡೌನ್‌ ವೇಳೆ ನೌಕರಿ ಕಳ್ಕೊಂಡ ಇಂಜಿನಿಯರ್ ಇಡ್ಲಿಯಲ್ಲಿ ಬದುಕು ಕಂಡುಕೊಂಡ!‌

ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್​ಡೌನ್​ ಜಾರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನೇಕರು ತಮ್ಮ ನೌಕರಿ ಕಳೆದುಕೊಂಡರು. ಇದೇ ರೀತಿ ಕೆಲಸ ಕಳ್ಕೊಂಡ ಮಹಾರಾಷ್ಟ್ರದ ವ್ಯಕ್ತಿ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾದ. ಕೊನೆಗೆ ಬದುಕಿನಲ್ಲಿ ಭರವಸೆ ಕಳೆದುಕೊಳ್ಳದ ಆತ ಹೊಸ ದಾರಿ ಹಿಡಿದ..

Young engineer lost his job
Young engineer lost his job

ಚಂದ್ರಾಪುರ್​​​(ಮಹಾರಾಷ್ಟ್ರ):ಲಾಕ್​ಡೌನ್​​ ವೇಳೆ ಅನೇಕ ಕಂಪನಿಗಳು ಜಾಬ್‌ ಕಟ್‌ ಮಾಡಿದ್ದವು. ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಹಲವರು ಬೇರೆ ದಾರಿ ಕಾಣದೆ ಹತಾಶೆಯಿಂದ ಆತ್ಮಹತ್ಯೆಗೆ ಶರಣಾಗಿ ಬದುಕು ಮುಗಿಸಿದರು. ಇನ್ನೂ ಕೆಲವರು ಕೂಲಿ ಕೆಲಸಕ್ಕೂ ಸೈ ಎಂದರು. ಇಂಥ ಉದಾಹರಣೆಗಳು ಬಹಳಷ್ಟಿವೆ.

ಹೀಗೆ ಅನ್ನ ನೀಡುವ ಉದ್ಯೋಗ ಕಳೆದುಕೊಂಡ ಮಹಾರಾಷ್ಟ್ರದ ಇಂಜಿನಿಯರ್‌ ಒಬ್ಬ ತೀವ್ರ ಸ್ವರೂಪದ ಮಾನಸಿಕ ಖಿನ್ನತೆಯಿಂದ ಹೊರಬಂದಿದ್ದು ಹೇಗೆ? ಅನ್ನೋದೇ ಈ ಸ್ಟೋರಿ. ಈತನ ಹೆಸರು ಪಲಾಶ್ ಜೈನ್. ಚಂದ್ರಾಪೂರದ ನಿವಾಸಿ.​​ ಪ್ರತಿಷ್ಠಿತ ಕಂಪನಿಯಲ್ಲಿ ಕೈತುಂಬಾ ರೊಕ್ಕ ತಂದುಕೊಡುವ ಉದ್ಯೋಗವಿತ್ತು. ಕೆಲಸವೇನೋ ಸಲೀಸಾಗಿಯೇ ಸಾಗುತ್ತಿತ್ತು. ಆದರೆ ಯಾವಾಗ ಲಾಕ್​ಡೌನ್ ಘೋಷಣೆಯಾಯಿತೋ ಕಂಪನಿ ಇವರಿಗೆ ಗೇಟ್‌ಪಾಸ್‌ ಕೊಟ್ಟಿದೆ. ಪರಿಣಾಮ, ಉದ್ಯೋಗವಿಲ್ಲದ ಇವರು ನರಕ ಯಾತನೆ ಅನುಭವಿಸಿದರು. ಆದ್ರೆ, ಸಾವಿನ ಕದತಟ್ಟಲಿಲ್ಲ. ಹೊಸ ಬಗೆಯ ಬದುಕಿನ ಅವಕಾಶಗಳ ಬಗ್ಗೆ ಯೋಚಿಸಿದರು. ಹೀಗೆ ತಲೆಗೆ ಹುಳಬಿಟ್ಟುಕೊಂಡಾಗ ಹೊಳೆದಿದ್ದೇ ಇಡ್ಲಿ ಸೆಂಟರ್‌!

ಆಸ್ಪತ್ರೆಯೊಂದರ ಪಕ್ಕದಲ್ಲಿ ಇಡ್ಲಿ ಅಂಗಡಿಯಿಟ್ಟ ಇವರು ಈಗ ಪ್ರತಿದಿನ 50-60 ಪ್ಲೇಟ್​​ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಹೇಳಿಕೊಳ್ಳುವಷ್ಟು ಹಣ ಸಂಪಾದನೆ ಮಾಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಇದು ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಹೆಚ್ಚು ಸಂಪಾದನೆ ಮಾಡುವ ವಿಶ್ವಾಸವಿದೆ ಎನ್ನುತ್ತಾರೆ ಪಲಾಶ್.

ಪ್ರತಿ ಪ್ಲೇಟ್​ ಇಡ್ಲಿಗೆ 20 ರೂ. ತೆಗೆದುಕೊಳ್ಳುವ ಇವರು ಪ್ರತಿ ದಿನ ಖರ್ಚು ಹೊರತಾಗಿ​​ 600-700 ರೂ ಸಂಪಾದಿಸುತ್ತಿದ್ದಾರೆ.

ಈ ಕುರಿತಾಗಿಈಟಿವಿ ಭಾರತದ ಜೊತೆ ಮಾತನಾಡಿರುವ ಯುವ ಇಂಜಿನಿಯರ್​ ಪಲಾಶ್ ಜೈನ್, ಡಿಗ್ರಿ ಮುಗಿಸಿದ ತಕ್ಷಣ ಔರಂಗಾಬಾದ್​ನ ಪ್ರತಿಷ್ಠಿತ ಕಂಪನಿಯಲ್ಲಿ ಮೇಲ್ವಿಚಾರಕ ಹುದ್ದೆ ಸಿಕ್ತು. ಆದರೆ ಲಾಕ್​ಡೌನ್​ ಜಾರಿಗೊಳ್ತಿದ್ದಂತೆ ನಮ್ಮನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಕುಟುಂಬ ನಡೆಸುವ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. ಅನ್ಯದಾರಿ ಕಾಣದೆ ಇಡ್ಲಿ ವ್ಯಾಪಾರವೇ ಬದುಕಿನ ದಾರಿಯಾಯ್ತು ಎನ್ನುತ್ತಾ ನಿರಾಳರಾದರು.

ABOUT THE AUTHOR

...view details