ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಹೆಚ್ಚಿಸಬೇಕಿದೆ ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನ ಮೂಲ

ಇಂಧನ ದಕ್ಷತೆ ಮಂಡಳಿಯು ಈಗಾಗಲೇ ಇಂಧನ ದಕ್ಷತೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸುವಲ್ಲಿ ಹೊಸ ದಿಶೆಯನ್ನು ಪರಿಚಯಿಸಿದೆ. ಉಜಾಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಸುಮಾರು 36.1 ಕೋಟಿ ಎಲ್‌ಇಡಿ ಬಲ್ಬ್‌ಗಳನ್ನು ಜನರಿಗೆ ತಲುಪಿಸಿದೆ. ಅಷ್ಟೇ ಅಲ್ಲ, 23.1 ಲಕ್ಷ ಅಧಿಕ ಸಾಮರ್ಥ್ಯದ ಫ್ಯಾನ್‌ಗಳು ಮತ್ತು 71.61 ಲಕ್ಷ ಎಲ್‌ಇಡಿ ಟ್ಯೂಬ್‌ಲೈಟ್‌ಗಳನ್ನು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಒದಗಿಸಲಾಗಿದೆ. ಈ ಮೂಲಕ ಅಪಾರ ಪ್ರಮಾಣದ ವಿದ್ಯುತ್​​ ಉಳಿಸುವ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿದೆ.

By

Published : Feb 20, 2020, 9:44 PM IST

world-needs-to-shift-from-fossil-fuels-to-clean-energy
world-needs-to-shift-from-fossil-fuels-to-clean-energyworld-needs-to-shift-from-fossil-fuels-to-clean-energy

ಹೈದಾರಬಾದ್​: ಔದ್ಯಮಿಕತೆ ಮತ್ತು ಆಧುನಿಕ ಜೀವನ ಶೈಲಿಯ ಪರಿಣಾಮದಿಂದಾಗಿ ದೇಶದ ಇಂಧನ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೇ ವೇಳೆ, ವಿಪರೀತ ಇಂಧನವನ್ನು ಕೂಡ ನಾವು ಬಳಕೆ ಮಾಡುತ್ತಿದ್ದೇವೆ. ಇದು ಒಂದಲ್ಲ ಒಂದು ಸಮಸ್ಯೆಯನ್ನು ಹಲವು ಹಂತದಲ್ಲಿ ಹುಟ್ಟು ಹಾಕುತ್ತಿದೆ. ನಾವು ಬಳಕೆ ಮಾಡುತ್ತಿರುವ ವೇಗದಲ್ಲೇ ಇಂಧನದ ಸಂಪನ್ಮೂಲಗಳು ಕೂಡ ಇಳಿಕೆ ಕಾಣುತ್ತಿವೆ. ಆದರೆ ನಾವು ಇಂಧನವನ್ನು ಬಳಕೆ ಮಾಡುತ್ತಿರುವುದರಿಂದಾಗಿ ಪರಿಸರಕ್ಕೆ ಅಪಾಯಕಾರಿ ಕಾರ್ಬನ್‌ಗಳು ಸೇರಿಕೊಳ್ಳುತ್ತಿವೆ. ಪರಿಣಾಮವಾಗಿ ನಮ್ಮೆಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ದೇಶದಲ್ಲೂ ಇಂಧನ ಮೂಲಗಳ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಕಚ್ಚಾ ತೈಲ ಮತ್ತು ಕಲ್ಲಿದ್ದಲಿಗಾಗಿ ನಾವು ಇತರ ದೇಶಗಳನ್ನೇ ಅವಲಂಬಿಸುವ ಪರಿಸ್ಥಿತಿ ಉಂಟಾಗಿದೆ.

ಇದರ ಫಲಿತಾಂಶವಾಗಿ, ದೇಶ ಅಪಾರ ಮೊತ್ತದ ವಿದೇಶಿ ವಿನಿಮಯವನ್ನು ಈ ಸಂಪನ್ಮೂಲ ಆಮದು ಮಾಡಿಕೊಳ್ಳುವುದಕ್ಕಾಗಿಯೇ ವೆಚ್ಚ ಮಾಡುವ ಸ್ಥಿತಿಯಿದೆ. ಸುಮಾರು 50 ರಿಂದ 60 ಕಿಲೋ ಕಲ್ಲಿದ್ದಲನ್ನು ಉರಿಸಿ 100 ಯೂನಿಟ್ ವಿದ್ಯುತ್ತನ್ನು ಜನರೇಟ್ ಮಾಡಬೇಕಾಗಿದೆ. ಸುಮಾರು 62.90 ಕೋಟಿ ಟನ್ ಕಲ್ಲಿದ್ದಲನ್ನು 2018-19 ವಿತ್ತ ವರ್ಷದಲ್ಲಿ ದಹನ ಮಾಡಲಾಗಿದೆ. ಇದರಿಂದಾಗಿ, ಪರಿಸರದಲ್ಲಿ ಭಾರಿ ಅಪಾಯಕಾರಿ ಕಾರ್ಬನ್‌ಗಳು ಸೇರಿಕೊಂಡಿವೆ. ಇದನ್ನು ನಿವಾರಿಸಲು ನಮ್ಮ ಬಳಿ ಇರುವ ಒಂದೇ ವಿಧಾನ. ಕಲ್ಲಿದ್ದಲಿನ ಬಳಕೆಯನ್ನು ಸಾಧ್ಯವಾದಷ್ಟೂ ಮಟ್ಟಿಗೆ ಕಡಿಮೆ ಮಾಡಬೇಕು. ಹಾಗೆಂದ ಮಾತ್ರಕ್ಕೆ ಇಂಧನವನ್ನು ಬಳಸದೇ ಯಾವ ಉದ್ಯಮವೂ ನಡೆಯದು. ಹೀಗಾಗಿ ನಾವು ನವೀಕರಿಸಬಹುದಾದ ಇಂಧನದ ಮೂಲವನ್ನೇ ಹೆಚ್ಚು ನೆಚ್ಚಿಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೌರ ಮತ್ತು ಪವನ ವಿದ್ಯುತ್ ಸಾಮರ್ಥ್ಯ ಹೆಚ್ಚಳಕ್ಕೆ ಪ್ರಯತ್ನ ನಡೆಸಿದ್ದಾರೆ.

ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸುವಾಗ ವೆಚ್ಚ ತುಂಬ ಕಡಿಮೆ ಸಾಕು. ಸೌರ ವಿದ್ಯುತ್‌ನ ಬೆಲೆ ಕೂಡ ಇತರ ನವೀಕರಿಸಬಹುದಾದ ಇಂಧನದ ಮೂಲಕ್ಕೆ ಹೋಲಿಸಿದರೆ ಕಡಿಮೆ. ಒಂದು ಯೂನಿಟ್‌ನ ವೆಚ್ಚ ಇದರಲ್ಲಿ ಅಂದಾಜು ಮೂರು ರೂಪಾಯಿಗಳಾಗುತ್ತವೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತವು ಸೌರ ಮತ್ತು ಪವನ ವಿದ್ಯುತ್‌ ಯೋಜನೆಗಳ ವಿಚಾರದಲ್ಲಿ ಇನ್ನೂ ಬಹಳ ಪ್ರಗತಿ ಸಾಧಿಸಬೇಕಿದೆ ಮತ್ತು ಪ್ರಗತಿ ಸಾಧಿಸುವ ಅವಕಾಶಗಳೂ ಇವೆ. ಒಂದು ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್‌ಗಳ ಇನ್‌ಸ್ಟಾಲ್‌ ಮಾಡಲು ಸುಮಾರು 10 ಮೀಟರ್‌ ಸ್ಪೇಸ್ ಅಗತ್ಯವಿರುತ್ತದೆ. ಪ್ರತಿ ವರ್ಷವೂ ಹೆಚ್ಚು ಹೆಚ್ಚು ವಿದ್ಯುತ್ತನ್ನು ಬಳಸುತ್ತಿರುವ ನಗರಗಳು ಮತ್ತು ಪಟ್ಟಣಗಳು ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಬೇಕು. ಇಲ್ಲಿ ಭೂಮಿ ಸಮಸ್ಯೆಯನ್ನು ನೀಗಿಸಲು ಈ ನಗರ ಮತ್ತು ಪಟ್ಟಣಗಳು ಕಟ್ಟಡಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಬಹುದು. ಪ್ರತಿ ಕಿಲೋಗೆ ಸೌರ ಪ್ಯಾನೆಲ್‌ಗಳ ವೆಚ್ಚವು ರೂ. 52,000 ಆಗಿದೆ. ಆದರೆ ಮನೆ ಬಳಕೆಗೆ ಇಂತಹ ಸೌರ ಫಲಕಗಳ ವೆಚ್ಚದ ಮೇಲೆ ಮೂರು ಕಿ.ವ್ಯಾ ವರೆಗೆ 40 ಶೇ. ತನಕ ಸಬ್ಸಿಡಿ ನೀಡುತ್ತಿದೆ. ಇನ್ನು ಮೂರರಿಂದ 10 ಕಿ.ವ್ಯಾ ವರೆಗೆ ಶೇ. 20 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

ಸೌರ ವಿದ್ಯುತ್ – ಆಶಾ ಕಿರಣ

ಒಂದು ಅಂದಾಜಿನ ಪ್ರಕಾರ ದೇಶದಲ್ಲಿರುವ ಸುಮಾರು 3.8 ಕೋಟಿ ಕಟ್ಟಡಗಳ ಪೈಕಿ ಶೇ. 20 ರಷ್ಟು ಕಟ್ಟಡಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲು ಆರಂಭಿಸಿದರೆ, 124 ಗಿಗಾ ವ್ಯಾಟ್ ಸೌರ ವಿದ್ಯುತ್ತನ್ನು ಉತ್ಪಾದಿಸಬಹುದು ಎಂದು ಅಂದಾಜು ಮಾಡಲಾಗಿದೆ. ಇದನ್ನು ಅರಿತುಕೊಂಡ ಕೇಂದ್ರ ಸರ್ಕಾರ ಕೇವಲ ಮೇಲ್ಛಾವಣಿ ಸೌರ ಯೋಜನೆಗಳಿಂದಲೇ 2022 ರ ವೇಳೆಗೆ 40 ಗಿಗಾ ವ್ಯಾಟ್‌ ಸೌರ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಈ ಗುರಿಯನ್ನು ಸಾಧಿಸಲು, ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಅಗತ್ಯವಿದೆ. ಇದೇ ವೇಳೆ ಪರಿಣಿತರ ಸಂಖ್ಯೆ ಮತ್ತು ಪರಿಣಿತಿಯನ್ನೂ ನಾವು ಹೆಚ್ಚಳ ಮಾಡಬೇಕಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಪರಿಣಿತರು ಹುಟ್ಟಿಕೊಂಡಷ್ಟೂ ಇದರ ವಿಸ್ತರಣೆ ಸುಲಭವಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಬರಡು ಭೂಮಿಗಳಿದ್ದು, ಇಲ್ಲಿ ಸೌರ ವಿದ್ಯುತ್ ಸ್ಥಾಪನೆ ಮಾಡಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಈ ಭೂಮಿಯಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಸಮೀಪದ ಗ್ರಿಡ್‌ಗೆ ಒದಗಿಸಿದರೆ ಪವರ್ ಜನರೇಶನ್ ಮತ್ತು ಟ್ರಾನ್ಸ್‌ಮಿಶನ್‌ನಲ್ಲಿ ಭಾರಿ ಮೊತ್ತದ ಉಳಿತಾಯ ಸರ್ಕಾರಕ್ಕೆ ಉಂಟಾಗುತ್ತದೆ. ಸೌರ ವಿದ್ಯುತ್​ ಘಟಕಗಳನ್ನು ರಾಜಭವನ ಹಾಗೂ ಹೈದರಾಬಾದ್‌ನ ಮರ್ರಿ ಚೆನ್ನ ರೆಡ್ಡಿ ಇನ್‌ಸ್ಟಿಟ್ಯೂಟ್ ಆಫ್‌ ಹ್ಯೂಮನ್ ರಿಸೋರ್ಸಸ್‌ ಡೆವಲಪ್‌ಮೆಂಟ್‌ ಕಟ್ಟಡದ ಮೇಲೆ ಅಳವಡಿಸಲಾಗಿದೆ. ಭಾರತ ಉಷ್ಣವಲಯದಲ್ಲಿದ್ದು, ಸಾಕಷ್ಟು ಸೂರ್ಯನ ಬಿಸಿಲು ಇಡೀ ವರ್ಷ ಬೀಳುತ್ತದೆ. ಹೀಗಾಗಿ ನಾವು ಸೌರ ವಿದ್ಯುತ್‌ನ ಮೂಲಕ್ಕಾಗಿ ಬೇರೆಲ್ಲೂ ಹೋಗುವ ಅಗತ್ಯವೇ ಇಲ್ಲ. ನಮ್ಮಲ್ಲಿರುವ ಸೌರ ಶಕ್ತಿಯನ್ನೇ ಸಮರ್ಪಕ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಿದೆ. ಹೀಗಾಗಿ, ಈ ಶಕ್ತಿಯನ್ನು ಬಳಸಿಕೊಂಡಲ್ಲಿ ನಾವು ನಿರಂತರ ವಿದ್ಯುತ್ತನ್ನು ಪಡೆಯಬಹುದು ಮತ್ತು ಉತ್ಪಾದನೆಯನ್ನೂ ಮಾಡಬಹುದು.

ಪವನ ಶಕ್ತಿಯನ್ನು ಕೂಡ ಪವನ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಉತ್ಪಾದನೆ ಮಾಡಬಹುದು. ಆದರೆ ಇದರಲ್ಲಿ ಕೆಲವು ಅಡ್ಡಿಗಳೂ ಇವೆ. ಕೆಲವು ಕಾಲಗಳಲ್ಲಿ ಈ ಘಟಕಗಳು ಉತ್ತಮ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತವೆ ಮತ್ತು ಗಾಳಿಯ ದಿಕ್ಕು ಕೂಡ ಇವುಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ನಿರಂತರ ಒಂದೇ ಪ್ರಮಾಣದ ವಿದ್ಯುತ್ತನ್ನು ಇವುಗಳಿಂದ ನಾವು ನಿರೀಕ್ಷಿಸಲಾಗದು. ಅಷ್ಟೇ ಅಲ್ಲ, ಇದು ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸಕ್ಕೂ ಕಾರಣವಾಗಬಹುದು. ಒಂದೆಡೆ ನಾವು ನವೀಕರಿಸಬಹುದಾದ ವಿದ್ಯುತ್ತನ್ನು ಬಳಸುವ ಮೂಲಕ ಇಂಧನದ ನಷ್ಟವನ್ನು ಕಡಿಮೆ ಮಾಡಬಹುದು. ಇದೇ ವೇಳೆ, ಇನ್ನೊಂದೆಡೆ ನಾವು ಉತ್ತಮ ಸಲಕರಣೆ ಮತ್ತು ಉತ್ತಮ ಅಭ್ಯಾಸವನ್ನೂ ರೂಢಿಸಿಕೊಳ್ಳಬೇಕಿದೆ. ಹೀಗೆ ಮಾಡಿದಲ್ಲಿ ಪ್ರತಿ ಯೂನಿಟ್ಟನ್ನೂ ಉಳಿಸಬಹುದು. ಒಂದು ಯೂನಿಟ್‌ ಉಳಿಸಿದ್ದೇವೆ ಎಂದಾದರೆ ಒಂದು ಯೂನಿಟ್​ನನ್ನು ಉತ್ಪಾದನೆ ಮಾಡಿದ ಹಾಗೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 2001ರಲ್ಲಿ, ಇಂಧನ ಉಳಿತಾಯ ಕಾಯ್ದೆಯನ್ನು ಪರಿಚಯಿಸಿ ಜಾರಿಗೆ ತರಲಾಯಿತು. ಈ ಕಾಯ್ದೆಯ ಅಡಿಯಲ್ಲಿ ಸ್ಟೀಲ್, ಸಿಮೆಂಟ್, ರೈಲ್ವೆ, ಜವಳಿ, ಉಷ್ಣ ವಿದ್ಯುತ್ ಘಟಕಗಳನ್ನೂ ತೆರೆಯಲಾಯಿತು. ಈ ಕಾನೂನು ಪ್ರಕಾರ ಈ ಸಂಸ್ಥೆಗಳು ತಾವು ಎಷ್ಟು ಪ್ರಮಾಣದ ಇಂಧನವನ್ನು ಬಳಸುತ್ತಿದ್ದೇವೆ ಎಂಬ ವರದಿಯನ್ನು ವರ್ಷಕ್ಕೊಮ್ಮೆ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ಈ ವಲಯದ ಉದ್ಯಮಗಳಿಗೆ ದಂಡವನ್ನೂ ವಿಧಿಸಲಾಗುತ್ತದೆ. ಈ ಎಲ್ಲ ವಹಿವಾಟುಗಳನ್ನು ಮೇಲ್ವಿಚಾರಣೆ ನಡೆಸುವುದಕ್ಕೆಂದೇ ಬ್ಯೂರೋ ಆಫ್‌ ಎನರ್ಜಿ ಎಫೀಶಿಯನ್ಸಿ (ಬಿಇಇ) ಎಂಬ ವಿಭಾಗವನ್ನು ಸ್ಥಾಪಿಸಲಾಗಿದೆ. ಹೊಸ ಕಟ್ಟಡಗಳು ಎಷ್ಟು ಇಂಧನವನ್ನು ಬಳಸಬೇಕು ಎಂಬುದನ್ನು ನಿಗದಿಸುವುದಕ್ಕಾಗಿಯೇ ಎನರ್ಜಿ ಕನ್ಸರ್ವೇಶನ್ ಬಿಲ್ಡಿಂಗ್ ಕೋಡ್ (ಇಸಿಬಿಸಿ) ಎಂದರೆ ಇಂಧನ ಸಂರಕ್ಷಣೆ ಕಟ್ಟಡ ನೀತಿಯನ್ನು ರೂಪಿಸಲಾಗಿದೆ. ಹೊಸ ಕಟ್ಟಡಗಳು ಹೇಗೆ ಇಂಧನವನ್ನು ಸಂರಕ್ಷಿಸಬೇಕು ಎಂಬ ಬಗ್ಗೆ ಇದರಲ್ಲಿ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಲಾಗಿದೆ. ಎಲ್ಲ ಹೊಸ ದೊಡ್ಡ ಆಸ್ಪತ್ರೆಗಳು, ಕಾನ್ಫರೆನ್ಸ್ ರೂಮ್‌ಗಳು ಮತ್ತು ಬಹು ಮಹಡಿ ಸಿನಿಮಾ ಮಂದಿರಗಳಿಗೆ ಈ ಹೊಸ ನೀತಿ ಅನ್ವಯಿಸುತ್ತದೆ.

ಎಲೆಕ್ಟ್ರಿಕ್‌ ವಾಹನದ ಹೊರತು ಅನ್ಯ ಮಾರ್ಗವಿಲ್ಲ...

ವಾಯು ಮಾಲಿನ್ಯಕ್ಕೆ ಮುಖ ಕಾರಣವೇ ಪೆಟ್ರೋಲ್ ಮತ್ತು ಡೀಸೆಲ್‌ ವಾಹನಗಳು ಎಂಬುದರಲ್ಲಿ ಎರಡು ಮಾತೇ ಇಲ್ಲ. ಭಾರತದಲ್ಲಿ ಥರಹೇವಾರಿ ವಾಹನಗಳು ಸಂಚರಿಸುತ್ತಿವೆ ಮತ್ತು ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ನಿತ್ಯ ಒಂದು ಮಿಲಿಯನ್‌ಗೂ ಹೆಚ್ಚು ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತಿವೆ. ಇದೇ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ವಾಯು ಮಾಲಿನ್ಯದ ಸಮಸ್ಯೆಯು ಇನ್ನಷ್ಟು ತೀವ್ರಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇದನ್ನು ತಡೆಯಲು ನಮ್ಮ ಬಳಿ ಇರುವ ಏಕೈಕ ಪರ್ಯಾಯ ಮಾರ್ಗವೆಂದರೆ ಎಲೆಕ್ಟ್ರಿಕ್ ಅಥವಾ ಹೈಡ್ರೋಜನ್‌ ವಾಹನಗಳು. ಈ ವಾಹನಗಳನ್ನು ನಾವು ಬಳಸಿದರೆ ಇಂಧನ ಬಳಕೆಯನ್ನು ಕಡಿಮೆ ಮಾಡಬಹುದು. ಇದರಿಂದ ವಿದೇಶಿ ವಿನಿಮಯವನ್ನು ಭಾರಿ ಪ್ರಮಾಣದಲ್ಲಿ ಉಳಿಸಬಹುದು ಎಂದು ಊಹಿಸಲಾಗಿದೆ.

ಈ ವಿಚಾರದಲ್ಲಿ ಸರ್ಕಾರ ತುಂಬಾ ಪ್ರಯತ್ನವನ್ನೇನೋ ನಡೆಸುತ್ತಲೇ ಇದೆ. ಆದರೆ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ್ದು ಅಷ್ಟಕ್ಕಷ್ಟೇ. ಎಲೆಕ್ಟ್ರಿಕ್‌ ವಾಹನಗಳ ವೆಚ್ಚ ಹೆಚ್ಚುತ್ತಿರುವುದು ಮತ್ತು ಪವರ್ ಚಾರ್ಜಿಂಗ್‌ ಸ್ಟೇಷನ್‌ಗಳು ಕಡಿಮೆ ಇರುವುದರಿಂದ ಜನರು ಈ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ. ಇದರ ಜೊತೆಗೆ ಒಂದು ಬಾರಿ ಚಾರ್ಜ್‌ ಮಾಡಿದರೆ ತುಂಬಾ ದೂರ ಪ್ರಯಾಣ ಮಾಡಲು ಈ ವಾಹನಗಳಲ್ಲಿ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಚಾರ್ಜ್ ಮಾಡಲು ಅಪಾರ ಸಮಯವನ್ನೂ ಇದು ತೆಗೆದುಕೊಳ್ಳುತ್ತಿದೆ. ಈ ಎಲ್ಲ ಕಾರಣದಿಂದ ಈ ವಿಧಾನಕ್ಕೆ ಇನ್ನೂ ಯಶಸ್ಸು ಸಿಗುತ್ತಿಲ್ಲ. ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ಮಾಲಿನ್ಯವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ನೀತಿಯನ್ನು ರೂಪಿಸಬೇಕು. ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಗಮನಾರ್ಹವಾಗಿ ಸುಧಾರಣೆ ಮಾಡಬೇಕು. ಸರ್ಕಾರ ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ, ಪರಿಹರಿಸಿದರೆ ಮಾತ್ರ ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆಯನ್ನು ನಾವು ಮಾಡಬಹುದು. ಆಗ ಮಾತ್ರವೇ 2030ರ ವೇಳೆಗೆ 50% ರಷ್ಟು ಎಲೆಕ್ಟ್ರಿಕ್‌ ವಾಹನಗಳು ರಸ್ತೆಯಲ್ಲಿ ಓಡಾಡುವಂತಾಗಬೇಕು ಎಂಬ ಸರ್ಕಾರದ ಧ್ಯೇಯ ಪೂರೈಸಬಹುದು.

ಜಾಗೃತಿ ಹೆಚ್ಚಬೇಕಿದೆ

ಇಂಧನ ದಕ್ಷತೆಯ ಮಂಡಳಿಯು ಈಗಾಗಲೇ ಇಂಧನ ದಕ್ಷತೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸುವಲ್ಲಿ ಹೊಸ ದಿಶೆಯನ್ನು ಪರಿಚಯಿಸಿದೆ. ಉಜಾಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಸುಮಾರು 36.1 ಕೋಟಿ ಎಲ್‌ಇಡಿ ಬಲ್ಬ್‌ಗಳನ್ನು ಜನರಿಗೆ ತಲುಪಿಸಿದೆ. ಅಷ್ಟೇ ಅಲ್ಲ, 23.1 ಲಕ್ಷ ಅಧಿಕ ಸಾಮರ್ಥ್ಯದ ಫ್ಯಾನ್‌ಗಳು ಮತ್ತು 71.61 ಲಕ್ಷ ಎಲ್‌ಇಡಿ ಟ್ಯೂಬ್‌ಲೈಟ್‌ಗಳನ್ನು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಒದಗಿಸಲಾಗಿದೆ. ಈ ಮೂಲಕ ಅಪಾರ ಪ್ರಮಾಣದ ವಿದ್ಯುತ್ತನ್ನು ಉಳಿಸುವ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿದೆ.

ಕಾರ್ಬನ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಮಾಲಿನ್ಯವನ್ನು ನಿಯಂತ್ರಿಸಲಾಗುತ್ತಿದೆ. ದೇಶದಲ್ಲಿರುವ ಸುಮಾರು 1050 ಮುನಿಸಿಪಾಲಿಟಿಗಳು ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸಿ ಇಂಧನ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ.

ಸೌರ ಫಲಕಗಳನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವ ಅಗತ್ಯವಿದೆ. ನಗರಗಳು ಮತ್ತು ಪಟ್ಟಣಗಳಲ್ಲಿ ಕಟ್ಟಡಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಬೇಕಾಗಿದೆ. ಎಲ್ಲ ಕೃಷಿ ಭೂಮಿಯಲ್ಲೂ ಸೌರ ಫಲಕಗಳನ್ನು ಸ್ಥಾಪಿಸಬಹುದು. ಇದರಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಸಮೀಪದ ಗ್ರಿಡ್‌ಗೆ ಪೂರೈಸಿ ರೈತರು ಆದಾಯ ಗಳಿಸಿಕೊಳ್ಳಬಹುದು. ವಿಂಡ್‌ಮಿಲ್‌ಗಳು ಮತ್ತು ವಿಂಡ್‌ ಪವರ್ ಅನ್ನು ಪ್ರಚಾರ ಮಾಡುವ ಅಗತ್ಯವೂ ಇದೆ. 2.1 ಕೋಟಿ ಎಲೆಕ್ಟ್ರಿಕ್ ಮೋಟಾರುಗಳನ್ನು ದೇಶದೆಲ್ಲೆಡೆ ಬದಲಿಸಿ, ಇನ್ನೂ ಹೆಚ್ಚು ದಕ್ಷವಾದ ಮತ್ತು ಕಡಿಮೆ ಇಂಧನ ಬಳಸುವ ಮೋಟಾರುಗಳನ್ನು ಸ್ಥಾಪಿಸುವ ಅಗತ್ಯವೂ ಇದೆ. ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಹೆಚ್ಚಳ ಮಾಡಲು ನೀತಿಗಳನ್ನೂ ರೂಪಿಸಬೇಕಿದೆ. ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಇಂಧನ ಬಳಕೆಯನ್ನು ಪಾಠವನ್ನಾಗಿ ಮಕ್ಕಳಿಗೆ ಬೋಧಿಸಬೇಕು. ಇದರಿಂದ ಮಕ್ಕಳು ತಮ್ಮ ಶಾಲಾ ದಿನಗಳಲ್ಲೇ ಇಂಧನ ಉಳಿತಾಯದ ಪ್ರಾಮುಖ್ಯತೆಯನ್ನು ಅರಿಯಲು ಅನುವು ಮಾಡುತ್ತದೆ ಮತ್ತು ಇದನ್ನು ಮಕ್ಕಳು ಮುಂದಿನ ದಿನಗಳಲ್ಲಿ ಅನುಸರಿಸಲೂ ನೆರವಾಗುತ್ತದೆ. ಇದರ ಜೊತೆಗೇ, ಸಾರ್ವಜನಿಕರಿಗೆ ಇಂಧನ ಉಳಿತಾಯದ ಬಗ್ಗೆ ವ್ಯಾಪಕವಾಗಿ ತಿಳಿಸಬೇಕಿದೆ. ಪ್ರತಿಯೊಬ್ಬರೂ ಇಂಧನ ಉಳಿತಾಯವು ನಮ್ಮದೇ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಈ ನಿಟ್ಟಿನಲ್ಲಿ ನಾವು ಯಶಸ್ಸು ಕಾಣಲು ಸಾಧ್ಯ.

ABOUT THE AUTHOR

...view details