ನವದೆಹಲಿ: ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದಿದ್ದ ವಕೀಲರು- ಪೊಲೀಸರ ನಡುವಿನ ಸಂಘರ್ಷದ ಕಾವು ತೀವ್ರ ಸ್ವರೂಪ ಪಡೆದಿದೆ. ಘಟನೆಯನ್ನು ಖಂಡಿಸಿ ಒಂದೆ ವಕೀಲರು ಮತ್ತೊಂದೆಡೆ ಪೊಲೀಸರ ಸಂಘಟನೆಗಳು ದೇಶಾದ್ಯಂತ ಮುಷ್ಕರ ನಡೆಸುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸ್ ಸಂಘಟನೆಯ ಸದಸ್ಯ ಪೊಲೀಸರು ದೆಹಲಿ ಹೆಡ್ಕ್ವಾಟರ್ಸ್ ಮುಂಭಾಗದಲ್ಲಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು, ರಾಷ್ಟ್ರ ರಾಜಧಾನಿಯ ರಸ್ತೆಗಳಲ್ಲಿ ಪೊಲೀಸರು ಪ್ರತಿಭಟನೆ ನಡೆಸುವುದು ಹೊಸದೊಂದು ಸಮಸ್ಯೆ ಸೃಷ್ಟಿಯಾದಂತಾಗಿದೆ. ಇದು ಬಿಜೆಪಿಯ ಹೊಸ ಭಾರತ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ದೆಹಲಿ ಪೊಲೀಸರನ್ನು ದೆಹಲಿ ರಾಜ್ಯಪಾಲರು ನಿಯಂತ್ರಿಸುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರವಾಗಿ ದೆಹಲಿ ಪೊಲೀಸರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಗೃಹ ಸಚಿವರು ಈ ಘಟನೆಯಲ್ಲಿ ಕಾಣಿಯಾಗಿದ್ದಾರೆ ಏಕೆ? ಕಾನೂನನ್ನು ಪುನಃಸ್ಥಾಪಿಸಲು ಅವರು ಏಕೆ ಮುಂದೆ ಬರುತ್ತಿಲ್ಲ. ಇದು ನಾಯಕತ್ವದ ಸಂಪೂರ್ಣ ವೈಫಲ್ಯವೆಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಮೂಲಭೂತ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯಗಳಲ್ಲಿ ಪೊಲೀಸರಿಗೆ ಕನಿಷ್ಠವಾದ ಕಾಳಜಿ ಇದೆ. ಪೊಲೀಸ್ ಅಧಿಕಾರಿಗಳು ಅಹಂಕಾರಿಗಳು. ದೆಹಲಿ ಪೊಲೀಸರನ್ನು ರಾಜಕೀಯ ಘಟಕವಾಗಿ ಪರಿವರ್ತಿಸಲಾಗಿದೆ ಹಾಗೂ ಬಿಜೆಪಿಯ ಸಶಸ್ತ್ರ ವಿಭಾಗದಂತೆ ಕಾರ್ಯನಿರ್ವಹಿಸುತ್ತದೆ ಎಂದು ಆಪ್ ಶಾಸಕ ಸೌರಭ್ ಭಾರದ್ವಾಜ್ ಟ್ವೀಟ್ ಮೂಲಕ ಆರೋಪಿಸಿದ್ದಾರೆ.