ಕೋಲ್ಕತ್ತಾ:ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಮೊದಲ ದಿನ ಟೀಂ ಇಂಡಿಯಾ ಮೆಲುಗೈ ಸಾಧಿಸಿದೆ.
ಇದರ ಮಧ್ಯೆ ಬಾಂಗ್ಲಾದೇಶದ ಬ್ಯಾಟ್ಸ್ಮನ್ ನಯೀಮ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅವರ ಹೆಲ್ಮೆಟ್ಗೆ ಚೆಂಡು ತಗುಲಿದ್ದರಿಂದ ತಕ್ಷಣವೇ ಮೈದಾನದಲ್ಲಿ ಬಿದ್ದಿದ್ದಾರೆ. ಈ ವೇಳೆ ಟೀಂ ಇಂಡಿಯಾ ಫಿಸಿಯೋ ನಿತಿನ್ ಪಟೇಲ್ ಮೈದಾನಕ್ಕೆ ಓಡಿ ಬಂದು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಕಾರ್ಯಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಂದ್ಯ ನಡೆಯುತ್ತಿದ್ದ ವೇಳೆ ಬಾಂಗ್ಲಾ ಬ್ಯಾಟ್ಸ್ಮನ್ ಲಿಟನ್ ದಾಸ್ ಹೆಲ್ಮೆಟ್ಗೆ ಚೆಂಡು ಬಡಿದ ಕಾರಣ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಮೈದಾನಕ್ಕೆ ಬಂದ ಬಾಂಗ್ಲಾ ಫಿಸಿಯೋ ತಕ್ಷಣವೇ ಅವರನ್ನ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಮತ್ತೊಬ್ಬ ಆಟಗಾರ ಗಾಯಗೊಂಡ ಕಾರಣ ತಕ್ಷಣವೇ ವಿರಾಟ್ ಕೊಹ್ಲಿ ಮನವಿ ಮಾಡುತ್ತಿದ್ದಂತೆ ಟೀಂ ಇಂಡಿಯಾ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ.
ಕ್ರೀಡಾಸ್ಫೂರ್ತಿಯಿಂದ ನಿತಿನ್ ಪಟೇಲ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ ಎಂದು ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಬಾಂಗ್ಲಾ ಪ್ಲೇಯರ್ಸ್ಗಳನ್ನ ಭೇಟಿಯಾದ ಪ್ರಧಾನಿ ಶೇಖ್ ಹಸೀನಾ ಆರೋಗ್ಯ ವಿಚಾರಿಸಿದರು.
ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಬ್ಯಾಟಿಂಗ್ ನಡೆಸುತ್ತಿರುವ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.