ಮುಂಬೈ:ರೈಲು ಸಾಗುತ್ತಿದ್ದ ವೇಳೆ ಹಳಿ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದ್ದು, ಸಿಸಿಟಿವಿ ನಿರ್ವಹಣಾ ಸಿಬ್ಬಂದಿ ಸಕಾಲದಲ್ಲಿ ಎಚ್ಚರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.
ಮುಂಬೈ-ಪುಣೆ ಮಾರ್ಗದ ಘಾಟ್ ಸೆಕ್ಷನ್ನ ಲೊನವಲ ಎಂಬಲ್ಲಿ ಹಳಿ ಮೇಲೆ ನಿನ್ನೆ ರಾತ್ರಿ 8:15 ರ ಸುಮಾರಿಗೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದೆ. ಇದೇ ಸಮಯಕ್ಕೆ ಆ ಮಾರ್ಗದಲ್ಲಿ ಮುಂಬೈ-ಕೊಲ್ಲಾಪುರ ಸಹ್ಯಾದ್ರಿ ಎಕ್ಸ್ಪ್ರೆಸ್ ರೈಲು ಸಾಗುತ್ತಿತ್ತು. ಸಿಸಿಟಿವಿ ಸಿಬ್ಬಂದಿ ಎಚ್ಚರಿಸದೇ ಇದ್ದರೆ ರೈಲು ಬಂಡೆಗೆ ಗುದ್ದಿ ದೊಡ್ಡ ಅನಾಹುತವೇ ಸಂಭವಿಸುತಿತ್ತು.
ಆದರೆ ಅದೇ ಸ್ಥಳದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬಂಡೆ ಉರುಳಿದ ದೃಶ್ಯವನ್ನು ನಿರ್ವಹಣಾ ಸಿಬ್ಬಂದಿ ಗಮನಿಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ವಿಚ್ ಆಫ್ ಆಗಿದ್ದ ಓವರ್ಹೆಡ್ ಸಾಧನಕ್ಕೆ ತಕ್ಷಣ ವಿದ್ಯುತ್ ಪೂರೈಸಿ, ಈ ಮಾರ್ಗವಾಗಿ ಬರುತ್ತಿದ್ದ ಇತರೆ ರೈಲುಗಳಿಗೂ ಅಪಾಯದ ಮುನ್ಸೂಚನೆ ನೀಡಿದ್ದಾರೆ ಎಂದು ಕೇಂದ್ರೀಯ ರೈಲ್ವೆ ಮುಖ್ಯ ವಕ್ತಾರ ಸುನಿಲ್ ಉದಾಸಿ ಹೇಳಿದರು.
ಬಂಡೆ ಉರುಳಿದ ಸ್ಥಳದಿಂದ ದೂರದಲ್ಲಿ ನಿಂತಿದ್ದ ರೈಲು ಎರಡು ಗಂಟೆಗಳ ತರುವಾಯ ಅಲ್ಲಿಂದ ತಕುರ್ವಾಡಿಗೆ ತೆರಳಿತು. ರಾತ್ರಿ 10:30ಕ್ಕೆ ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿತು. ಪ್ರಯಾಣಿಕರಿಗೆ ತೊಂದರೆಯಾಗದಂತೆ, ನೀರು, ತಿಂಡಿ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಬೃಹತ್ ಬಂಡೆಯು 2.3 ಮೀಟರ್ ಉದ್ದ, 1.6 ಮೀಟರ್ ಎತ್ತರ ಹಾಗೂ 2.2 ವಿಸ್ತೀರ್ಣವಿತ್ತು ಎಂದೂ ತಿಳಿಸಿದರು.