ಕರ್ನಾಟಕ

karnataka

By

Published : Feb 8, 2021, 7:36 AM IST

Updated : Feb 8, 2021, 5:40 PM IST

ETV Bharat / bharat

ಹಿಮನದಿ ದುರಂತ: ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಸಭೆ: ಸಂಸದರ ಜತೆ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ

The Uttarakhand Glacier Disaster
ತಪೋವನ್‌ನ ಧೌಲಿಗಂಗಾದಲ್ಲಿ ರಕ್ಷಣಾ ಕಾರ್ಯಾಚರಣೆ

17:33 February 08

ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಸಭೆ: ಸಂಸದರ ಜತೆ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉತ್ತರಾಖಂಡ್​ ಹಿಮಪ್ರವಾಹದ ಅನಾಹುತದ ಬಗ್ಗೆ ಮಾತುಕತೆ ನಡೆಸಲಾಯಿತು. ತುರ್ತು ಕ್ರಮಗಳ ಕುರಿತು, ಪ್ರಧಾನಿ, ಗೃಹ ಸಚಿವ ಅಮಿತ್​ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಉತ್ತರಾಖಂಡ್​​ದ ಸಂಸದರ ಜತೆ ಚರ್ಚೆ ನಡೆಸಿದರು. 

ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದರು, ಮುಂದಿನ ಕ್ರಮಗಳ ಬಗ್ಗೆ ಪ್ರಧಾನಿ ಸಂಸದರಿಗೆ ನಿರ್ದೇಶನ ನೀಡಿದರು.

17:32 February 08

ನಿರಾಶ್ರಿತರ ರಕ್ಷಣೆಗೆ 20 ಕೋಟಿ ನೀಡಿದ ಸಿಎಂ ರಾವತ್​

ವಿಕೋಪ ಪರಿಹಾರ ಕ್ರಮಗಳ ಕುರಿತು ಸಿಎಂ ತ್ರಿವೇಂದ್ರಸಿಂಗ್​ ರಾವತ್​ ಪರಿಶೀಲನಾ ಸಭೆ ನಡೆಸಿದರು. ಪರಿಹಾರ ಕಾರ್ಯಕ್ರಮಕ್ಕೆ ಸುಮಾರು 20 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದರು. 
 

12:54 February 08

ಅಲಕಾನಂದ ನದಿಯ ದಡದಲ್ಲಿ ಎರಡು ಶವ ಪತ್ತೆ

ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಇಂದು ಅಲಕಾನಂದ ನದಿಯ ದಡದಲ್ಲಿ ಎರಡು ಶವಗಳನ್ನು ಪತ್ತೆ ಮಾಡಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

12:40 February 08

ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲು 24-48 ಗಂಟೆಗಳು ಬೇಕಾಗಬಹುದು: ಎನ್‌ಡಿಆರ್​ಎಫ್ ಡಿಜಿ ಎಸ್‌.ಎನ್.ಪ್ರಧಾನ್

ಎನ್‌ಡಿಆರ್​ಎಫ್ ಡಿಜಿ ಎಸ್‌.ಎನ್.ಪ್ರಧಾನ್

ರಕ್ಷಣಾ ಕಾರ್ಯಾಚರಣೆಗೆ ತೊಂದರೆ ಎದುರಾಗಿದೆ. ಏಕೆಂದರೆ ಇದು ಕಠಿಣ ಭೂಪ್ರದೇಶವಾಗಿದೆ. ರಸ್ತೆಯ ಮೂಲಕ, ಕೇವಲ ಎರಡು ತಂಡಗಳು ಜೋಶಿಮಠವನ್ನು ತಲುಪಲು ಸಾಧ್ಯವಾಯಿತು. ಉಳಿದ ತಂಡಗಳನ್ನು ವಿಮಾನದ ಮೂಲಕ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲು ಎಷ್ಟು ಸಮಯ ಬೇಕೆಂದು ನಿರ್ದಿಷ್ಟವಾಗಿ ಊಹಿಸುವುದು ಕಷ್ಟ.ಆದರೆ 24-48 ಗಂಟೆಗಳು ಬೇಕಾಗಬಹುದು. 2.5 ಕಿ.ಮೀ ಉದ್ದದ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಗ್ನಾವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. 27 ಜನರು ಜೀವಂತವಾಗಿದ್ದಾರೆ.11 ಮಂದಿ ಮೃತಪಟ್ಟಿದ್ದಾರೆ. 153 ಮಂದಿ ಕಾಣೆಯಾಗಿದ್ದಾರೆ. 153 ರಲ್ಲಿ 40-50 ಜನ ಸುರಂಗದಲ್ಲಿ ಸಿಲುಕಿಕೊಂಡಿರಬಹುದು ಎಂದು ಎನ್‌ಡಿಆರ್‌ಎಫ್​ ಡಿಜಿ ಎಸ್‌.ಎನ್​.ಪ್ರಧಾನ್ ಹೇಳಿದರು.

11:50 February 08

ಚಮೋಲಿಯ ತಪೋವನ್​ಗೆ ಭೇಟಿ ನೀಡಿದ ಐಡಿಬಿಪಿ ಎಡಿಜಿ ವೆಸ್ಟರ್ನ್ ಕಮಾಂಡ್ ಮನೋಜ್ ಸಿಂಗ್ ರಾವತ್

ಐಡಿಬಿಪಿ ಎಡಿಜಿ ವೆಸ್ಟರ್ನ್ ಕಮಾಂಡ್ ಮನೋಜ್ ಸಿಂಗ್ ರಾವತ್

ಚಮೋಲಿಯ ತಪೋವನ್​ಗೆ ಭೇಟಿ ನೀಡಿದ ಐಡಿಬಿಪಿ ಎಡಿಜಿ ವೆಸ್ಟರ್ನ್ ಕಮಾಂಡ್ ಮನೋಜ್ ಸಿಂಗ್ ರಾವತ್, ಸುರಂಗದಲ್ಲಿ ಐಟಿಬಿಪಿಯಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದರು.

11:01 February 08

ಇಲ್ಲಿ 178 ಜನರಿಗೆ ಪಾಸ್ ನೀಡಲಾಗಿದೆ ಎಂದು ನಮಗೆ ಮಾಹಿತಿ ದೊರೆತಿದೆ : ಡಿಐಜಿ ನೀರು ಗರ್ಗ್

ಡಿಐಜಿ ನೀರು ಗರ್ಗ್

ಇಲ್ಲಿ 178 ಜನರಿಗೆ ಪಾಸ್ ನೀಡಲಾಗಿದೆ ಎಂದು ನಮಗೆ ಮಾಹಿತಿ ದೊರೆತಿದೆ. ಅದರಲ್ಲಿ 15 ಮಂದಿಯನ್ನು ರಕ್ಷಿಸಲಾಗಿದೆ. ಮತ್ತೊಂದು ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅದರಲ್ಲಿ 35 ಜನರು ಸಿಲುಕಿರುವ ಸಾಧ್ಯತೆಯಿದೆ. ಆದಷ್ಟು ಬೇಗ ಅವರನ್ನು ರಕ್ಷಿಸಲಾಗುವುದು ಎಂದು ಗರ್ವಾಲ್ ಶ್ರೇಣಿಯ ಡಿಐಜಿ ನೀರು ಗರ್ಗ್ ತಿಳಿಸಿದರು.

10:46 February 08

ಸುಮಾರು 203 ಜನರು ಕಾಣೆಯಾಗಿದ್ದಾರೆ : ಸಿಎಂ ತ್ರಿವೇಂದ್ರ ಸಿಂಗ್ ರಾವತ್

ಸುಮಾರು 203 ಜನರು ಕಾಣೆಯಾಗಿದ್ದಾರೆ. ಮತ್ತೊಂದು ಸುರಂಗದಲ್ಲಿ 35 ಜನರು ಸಿಲುಕಿಕೊಂಡಿದ್ದಾರೆ ಎಂದು ನಾವು ಅಂದಾಜು ಮಾಡುತ್ತಿದ್ದೇವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದರು.

10:22 February 08

ಶ್ರೀನಗರ ಅಣೆಕಟ್ಟಿನ ಸುತ್ತ ಎಸ್‌ಡಿಆರ್‌ಎಫ್ ಶೋಧ ಕಾರ್ಯಾಚರಣೆ

ಶ್ರೀನಗರ ಅಣೆಕಟ್ಟಿನ ಸುತ್ತ ಎಸ್‌ಡಿಆರ್‌ಎಫ್ ಶೋಧ ಕಾರ್ಯಾಚರಣೆ

ಉತ್ತರಾಖಂಡ: ಶ್ರೀನಗರ ಅಣೆಕಟ್ಟಿನ ಸುತ್ತ ಎಸ್‌ಡಿಆರ್‌ಎಫ್-ಉತ್ತರಾಖಂಡ ಪೊಲೀಸರ ತಂಡ ಶೋಧ ಕಾರ್ಯಾಚರಣೆ ನಡೆಸಿದೆ.

10:14 February 08

ಉತ್ತರಾಖಂಡದ ರಕ್ಷಣಾ ಕಾರ್ಯಾಚರಣೆಗೆ ರಿಷಬ್​ ಪಂತ್​ ಧನಸಹಾಯ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ್ ಬಳಿ ಹಿಮನದಿ ಸ್ಫೋಟದಿಂದ ಉಂಟಾದ ಪ್ರವಾಹದ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಶುಲ್ಕವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದ್ದಾರೆ.  

10:09 February 08

ಸಂತ್ರಸ್ತರಿಗಾಗಿ ಕಾಶಿಯಲ್ಲಿ ವಿಶೇಷ ಪ್ರಾರ್ಥನೆ

ಉತ್ತರಾಖಂಡದಲ್ಲಿ ನಡೆದ ಹಿಮನದಿ ದುರಂತದ ಸಂತ್ರಸ್ತರಿಗಾಗಿ ಕಾಶಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಕಾಶಿಯ ದಶಾಶ್ವಮೇಧ ಘಾಟ್‌ನಲ್ಲಿರುವ ಗಂಗಾ ಆರತಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ಎರಡು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

10:03 February 08

ನಾವು ಭಾರತದ ಆತ್ಮೀಯ ಗೆಳೆಯರು, ನಾವು ನಿಮ್ಮೊಂದಿಗೆ ಇದ್ದೇವೆ: ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್

ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್

ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಉತ್ತರಾಖಂಡ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಕಾಣೆಯಾದವರು ಜೀವಂತವಾಗಿ ಹೊರಬರಲಿ. ನಾವು ಭಾರತದ ಆತ್ಮೀಯ ಗೆಳೆಯರು. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಹೇಳಿದ್ದಾರೆ.

10:00 February 08

ರಾತ್ರಿಯಿಡೀ ಸುರಂಗ ತೆರವು ಕಾರ್ಯ ನಡೆಸಲಾಯಿತು: ಭಾರತೀಯ ಸೇನೆ

ಏರಿಯಲ್ ನೋಟ

ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಸೇರಿದಂತೆ ಸೇನಾ ಸಿಬ್ಬಂದಿಯ ದಣಿವರಿಯದ ಪ್ರಯತ್ನದ ನಂತರ, ಸುರಂಗವನ್ನು ತೆರವುಗೊಳಿಸಲಾಯಿತು. ಜನರೇಟರ್‌ಗಳು ಮತ್ತು ಸರ್ಚ್ ಲೈಟ್‌ಗಳನ್ನು ಅಳವಡಿಸುವ ಮೂಲಕ ರಾತ್ರಿಯಿಡೀ ಸುರಂಗ ತೆರವು ಕಾರ್ಯ ನಡೆಯಿತು. ಸ್ಥಳೀಯ ಆಸ್ಪತ್ರೆ ಘಟನಾ ಸ್ಥಳದಲ್ಲಿ ತುರ್ತು ವೈದ್ಯಕೀಯ ನೆರವು ನೀಡುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

09:49 February 08

ಸುರಂಗದಲ್ಲಿ ಸುಮಾರು 30-40 ಕಾರ್ಮಿಕರು ಸಿಲಿಕಿದ್ದಾರೆ: ಡಿಐಜಿ ಸೆಕ್ಟರ್ ಹೆಚ್​ಕ್ಯೂ ಅಪರ್ಣ ಕುಮಾರ್

ಡಿಐಜಿ ಸೆಕ್ಟರ್ ಹೆಚ್​ಕ್ಯೂ ಅಪರ್ಣ ಕುಮಾರ್

ದೊಡ್ಡ ಸುರಂಗವನ್ನು 70-80 ಮೀ ವರೆಗೆ ತೆರವುಗೊಳಿಸಲಾಗಿದೆ. ಅದನ್ನು ಜೆಸಿಬಿಯ ಸಹಾಯದಿಂದ ತೆರವುಗೊಳಿಸಲಾಗುತ್ತಿದೆ. ಇದು ಸುಮಾರು 180 ಮೀ ಉದ್ದವಾಗಿದ್ದು, ಸುಮಾರು 30-40 ಕಾರ್ಮಿಕರು ಇಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಐಜಿ ಸೆಕ್ಟರ್ ಹೆಚ್​ಕ್ಯೂ ಅಪರ್ಣ ಕುಮಾರ್ ಹೇಳಿದ್ದಾರೆ.

09:49 February 08

ಜೋಶಿಮಠ ಪ್ರದೇಶಕ್ಕೆ ಡಿಆರ್‌ಡಿಒ ವಿಜ್ಞಾನಿಗಳ ತಂಡ

ಜೋಶಿಮಠ ಪ್ರದೇಶಕ್ಕೆ ಡಿಆರ್‌ಡಿಒ ವಿಜ್ಞಾನಿಗಳ ತಂಡ

ಕಳೆದ ರಾತ್ರಿ ಡೆಹ್ರಾಡೂನ್‌ಗೆ ತಲುಪಿದ್ದ ಡಿಆರ್‌ಡಿಒ ವಿಜ್ಞಾನಿಗಳ ತಂಡ ಕಣ್ಗಾವಲು ಮತ್ತು ವಿಚಕ್ಷಣಕ್ಕಾಗಿ ಜೋಶಿಮಠ ಪ್ರದೇಶಕ್ಕೆ ತೆರಳುತ್ತಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

09:20 February 08

ಜೋಶಿಮಠದಲ್ಲಿ ಎರಡನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ

ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡ್: ಚಮೋಲಿಯ ಜೋಶಿಮಠದಲ್ಲಿ ಎರಡನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಒಂದು ಸುರಂಗದಿಂದ 12 ಜನರನ್ನು ರಕ್ಷಿಸಲಾಗಿದೆ. ಜನರನ್ನು ರಕ್ಷಿಸಲು ಜೆಸಿಬಿ ಯಂತ್ರಗಳ ಸಹಾಯದಿಂದ ಎರಡನೇ ಸುರಂಗವನ್ನು ತೆರವುಗೊಳಿಸಲಾಗುತ್ತಿದೆ.

09:12 February 08

ಹಿಮನದಿ ಸ್ಫೋಟಕ್ಕೆ ಕಾರಣ ತಿಳಿದಿಲ್ಲ, ರಕ್ಷಣಾ ಕಾರ್ಯಾಚರಣೆಗೆ ಆದ್ಯತೆ: ಉತ್ತರಾಖಾಂಡ ಸಿಎಂ

ರಕ್ಷಣಾ ಕಾರ್ಯಾಚರಣೆ

ಹಿಮನದಿ ಸ್ಫೋಟಕ್ಕೆ ಕಾರಣ ಏನೆಂಬುದು ತಿಳಿದಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆ ಮತ್ತು ಜನರ ಜೀವ ಉಳಿಸಲು ಆದ್ಯತೆ ನೀಡಲಾಗುವುದು ಎಂದು ಉತ್ತರಾಖಾಂಡ ಸಿಎಂ ತ್ರಿವೇಂದ್ರ ಸಿಂಗ್​ ರಾವತ್ ಹೇಳಿದರು.

08:58 February 08

ವೈಮಾನಿಕ ರಕ್ಷಣಾ ಕಾರ್ಯಾಚರಣೆ ಪುನಾರಂಭ

ವೈಮಾನಿಕ ರಕ್ಷಣಾ ಕಾರ್ಯಾಚರಣೆ ಪುನಾರಂಭ

ಮಿ-17 ಮತ್ತು ಎಎಲ್‌ಹೆಚ್ ಹೆಲಿಕಾಪ್ಟರ್‌ಗಳು ಡೆಹ್ರಾಡೂನ್‌ನಿಂದ ಜೋಶಿಮಠಕ್ಕೆ ತಲುಪಿದ್ದು, ವೈಮಾನಿಕ ರಕ್ಷಣಾ ಕಾರ್ಯಾಚರಣೆ ಪುನಾರಂಭಗೊಂಡಿದೆ.

08:21 February 08

ಈ ವರೆಗೆ 14 ಶವಗಳು ಪತ್ತೆ, 15 ಜನರ ರಕ್ಷಣೆ: ಚಮೋಲಿ ಪೊಲೀಸ್

ಸುರಂಗದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಜೆಸಿಬಿ ಯಂತ್ರದ ಸಹಾಯದಿಂದ ಸುರಂಗವನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಒಟ್ಟು 15 ಜನರನ್ನು ರಕ್ಷಿಸಲಾಗಿದೆ ಮತ್ತು 14 ಶವಗಳನ್ನು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಚಮೋಲಿ ಪೊಲೀಸರು ತಿಳಿಸಿದ್ದಾರೆ.

08:20 February 08

ನಿನ್ನೆ ಸುರಂಗದಿಂದ 12 ಜನರ ರಕ್ಷಣೆ, ಇನ್ನೂ 30 ಜನರಿರುವ ಶಂಕೆ: ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ

ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ

ಐಟಿಬಿಪಿ ನಿನ್ನೆ ಸುರಂಗದಿಂದ 12 ಜನರನ್ನು ರಕ್ಷಿಸಿದೆ, ಇನ್ನೂ 30 ಜನರು ಬೇರೆ ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ. ವಿವಿಧ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗತ್ಯವಿದ್ದರೆ ಹೆಚ್ಚಿನ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗುವುದು. ನಾವು 2 ನೇ ಸುರಂಗದಲ್ಲಿ ಹುಡುಕಾಟ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ. ಸುಮಾರು 30 ಜನರು ಅಲ್ಲಿ ಸಿಲುಕಿರಬಹುದು. ಸುರಂಗವನ್ನು ತೆರವುಗೊಳಿಸಲು ಸುಮಾರು 300 ಐಟಿಬಿಪಿ ಜವಾನರನ್ನು ನಿಯೋಜಿಸಲಾಗಿದೆ. ಸುಮಾರು 170 ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಆಡಳಿತ ಹೇಳುತ್ತದೆ. ನಾವು ಮೊದಲು ಸುರಂಗದಿಂದ ಜನರನ್ನು ರಕ್ಷಿಸುವತ್ತ ಗಮನ ಹರಿಸಿದ್ದೇವೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.  

08:09 February 08

ಹಿಮನದಿ ದುರಂತದಲ್ಲಿ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ ಉಮಾ ಭಾರತಿ

ಉತ್ತರಾಖಂಡದಲ್ಲಿ ಹಿಮನದಿ ದುರಂತದಲ್ಲಿ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡೆ ಉಮಾ ಭಾರತಿ, ತಾವು ಸಚಿವರಾಗಿದ್ದಾಗ ಹಿಮಾಲಯ ಪರ್ವತ ಶ್ರೇಣಿಯಲ್ಲಿ ವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ವಿರೋಧಿಸಿದ್ದರು ಎಂದು ಹೇಳಿದ್ದಾರೆ.  

07:58 February 08

ಕಾರ್ಯಾಚರಣೆಗೆ ಅಡ್ಡಿಯಾದ ಮಂದಾಕಿನಿ ನದಿಯ ಮಟ್ಟ

ಚಮೋಲಿ: ತಪೋವನ್ ಅಣೆಕಟ್ಟು ಬಳಿಯ ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎಸ್‌ಡಿಆರ್‌ಎಫ್ ಸದಸ್ಯರು ಮಂದಾಕಿನಿ ನದಿಯ ಮಟ್ಟ ಕಡಿಮೆಯಾಗಲು ಕಾಯುತ್ತಿದ್ದಾರೆ.

07:56 February 08

ಚಮೋಲಿಯ ತಪೋವನ್ ಅಣೆಕಟ್ಟು ಬಳಿ ಶೋಧ ಕಾರ್ಯಾಚರಣೆಗಿಳಿದ ಶ್ವಾನದಳ

ಉತ್ತರಾಖಂಡ: ಚಮೋಲಿಯ ತಪೋವನ್ ಅಣೆಕಟ್ಟು ಬಳಿ ಶೋಧ ಕಾರ್ಯಾಚರಣೆ ನಡೆಸಲು ಶ್ವಾನದಳವನ್ನೂ ಕರೆತರಲಾಗಿದೆ. ಎಸ್‌ಡಿಆರ್‌ಎಫ್ ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಚಮೋಲಿಯ ತಪೋವನ್ ಅಣೆಕಟ್ಟು ಬಳಿಯ ಸುರಂಗದಲ್ಲಿ ಪ್ರಾರಂಭಿಸಿದೆ. 

07:50 February 08

ಉತ್ತರಾಖಂಡದ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು ನೀಡಲು ವಿಶ್ವಸಂಸ್ಥೆ ಬದ್ಧ

ಉತ್ತರಾಖಂಡದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು ನೀಡಲು ವಿಶ್ವಸಂಸ್ಥೆ ಬದ್ಧವಾಗಿದೆ ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ವಕ್ತಾರ ಹೇಳಿದ್ದಾರೆ.

07:06 February 08

ತಪೋವನ್‌ನ ಧೌಲಿಗಂಗಾದಲ್ಲಿ ರಕ್ಷಣಾ ಕಾರ್ಯಾಚರಣೆ: 8 ಶವಗಳು ಪತ್ತೆ

ಚಮೋಲಿಯ ತಪೋವನ್ ಅಣೆಕಟ್ಟು ಬಳಿಯ ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎಸ್‌ಡಿಆರ್‌ಎಫ್ ಸದಸ್ಯರು ಮಂಡಕಿನಿ ನದಿಯ ಮಟ್ಟ ಕಡಿಮೆಯಾಗಲು ಕಾಯುತ್ತಿದ್ದಾರೆ. ಚಮೋಲಿಯ ತಪೋವನ್ ಅಣೆಕಟ್ಟಿನ ಬಳಿ ಸುರಂಗವನ್ನು ತೆರೆಯಲು, ಅವಶೇಷಗಳನ್ನು ಹೊರತೆಗೆಯಲು ಭಾರಿ ಗಾತ್ರದ ಅಗೆಯುವ ಯಂತ್ರಗಳನ್ನು ತರಲಾಗಿದೆ. ಸ್ಥಳೀಯ ನದಿಯಲ್ಲಿ ಹೆಚ್ಚಿದ ನೀರು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಚಮೋಲಿ ಜಿಲ್ಲೆಯ ತಪೋವನ್‌ನ ಧೌಲಿಗಂಗಾದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 8 ಶವಗಳನ್ನು ಹೊರತೆಗೆಯಲಾಗಿದೆ. ಐಟಿಬಿಪಿ, ಭಾರತೀಯ ಸೇನೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. 

06:49 February 08

ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಚಮೋಲಿ:ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ದುರಂತ ಸಂಭವಿಸಿದ್ದು, ಈ ಹಿಮನದಿ ಸ್ಫೋಟವು ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹವನ್ನು ಉಂಟುಮಾಡಿದೆ ಮತ್ತು ಹಿಮಾಲಯದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಗಿದೆ.

Last Updated : Feb 8, 2021, 5:40 PM IST

ABOUT THE AUTHOR

...view details