ನವದೆಹಲಿ: ಆಸ್ಪತ್ರೆಯಲ್ಲಿರುವ ತನ್ನ ತಂದೆ ಲಾಲೂ ಪ್ರಸಾದ್ ಯಾದವ್ರನ್ನು ಭೇಟಿಯಾಗಲು ಬಿಜೆಪಿ ಸರ್ಕಾರ ಅನುಮತಿ ಕೊಟ್ಟಿಲ್ಲ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ತೇಜಸ್ವಿ, ಬಿಜೆಪಿಯದು ಸರ್ವಾಧಿಕಾರಿ ಮನೋಭಾವ ಎಂದು ಜರಿದಿದ್ದಾರೆ. ತಂದೆಯನ್ನು ಭೇಟಿಯಾಗಲು ಬಿಡದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದೂ ಹೇಳಿದ್ದಾರೆ.
ರಾಂಚಿ ಆಸ್ಪತ್ರೆಯಲ್ಲಿರುವ ನನ್ನ ತಂದೆ ಲಾಲೂರನ್ನು ಭೇಟಿಯಾಗಲು ತೆರಳಿದ್ದೆ. ಆದರೆ, ಕಾನೂನಿನ ನೆಪ ಹೇಳಿ ಬಿಜೆಪಿ ಸರ್ಕಾರ ತಂದೆ-ಮಗನ ಭೇಟಿಗೆ ಅಡ್ಡಗಾಲು ಹಾಕಿದೆ. ಲಾಲೂ ವಿರುದ್ಧ ಬಿಜೆಪಿ ಪಿತೂರಿ ನಡೆಸುತ್ತಿದೆ. ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿದ್ದರೂ ಅವರ ಕೋಣೆಯನ್ನು ಪ್ರತಿದಿನ ತಪಾಸಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಎರಡು ವಾರಗಳ ಹಿಂದೆ ಲಾಲೂರಿಗೆ ಆರೋಗ್ಯ ಸಂಬಂಧಿ ಕೆಲವು ಟೆಸ್ಟ್ ಮಾಡಬೇಕಿದೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದರು. ಆದರೆ, ಮತ್ತೊಂದು ಕಟ್ಟಡಕ್ಕೆ ರವಾನಿಸಲು ಸರಿಯಾದ ಭದ್ರತೆ ಒದಗಿಸಲಾಗದ ಕಾರಣ ಟೆಸ್ಟ್ಗಳು ನಡೆದಿಲ್ಲ. ಇದು ಅನ್ಯಾಯ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಗುಡುಗಿದ್ದಾರೆ.
ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅನಾರೋಗ್ಯದ ಕಾರಣ ಸದ್ಯ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.