ಆಂಧ್ರಪ್ರದೇಶ: ರಾಯಲ್ ಸೀಮಾಗೆ ನೀವೇನು ಮಾಡಿದ್ದೀರಿ, ಇದರ ಬಗ್ಗೆ ಮಾತನಾಡಲು ನೀವ್ಯಾರು? ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಗುಡುಗಿದ್ದಾರೆ.
ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಮಾಡುವ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿಕೇಂದ್ರೀಕರಣ ಮಸೂದೆಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಜನರ ಬೇಡಿಕೆ, ಹೀಗಾಗಿಯೇ ಪ್ರತಿಭಟಿಸುತ್ತಿದ್ದಾರೆ. ಅಮರಾವತಿಯಿಂದ ಆಡಳಿತವನ್ನು ವರ್ಗಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಅವಧಿಯಲ್ಲಿ ನಾನು ಇಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇನೆ. ಆದರೆ ಅವುಗಳನ್ನು ನೀವು ರದ್ದು ಮಾಡಿದ್ದೇಕೆ? ಜನರು ಅಭಿವೃದ್ಧಿಯನ್ನು ಬಯಸುತ್ತಾರೆಯೇ ವಿನಃ ರಾಜಕೀಯವನ್ನಲ್ಲ ಎಂದು ತಿಳಿಸಿದ್ದಾರೆ.
ಟಿಡಿಪಿ ಸ್ಥಾಪಕ ಎನ್ಟಿಆರ್ ರಾಯಲ್ ಸೀಮಾ ಪ್ರದೇಶಕ್ಕೆ ನೀರಿನ ಯೋಜನೆಗಳನ್ನು ತಂದಿದ್ದರು. ನಾನು ಇಲ್ಲಿ ಕೈಗಾರಿಕೆಗಳನ್ನು ತಂದಿದ್ದೇನೆ. ಇದರ ಕುರಿತು ಮಾತನಾಡಲು ನೀವು ಯಾರು? ಎಂದು ವೈಎಸ್ಆರ್ಸಿಪಿಗೆ ನಾಯ್ಡು ಪ್ರಶ್ನಿಸಿದ್ದಾರೆ. (ರಾಯಲ್ ಸೀಮಾ, ಆಂಧ್ರ ಪ್ರದೇಶದ ಒಂದು ಭೌಗೋಳಿಕ ಪ್ರದೇಶವಾಗಿದ್ದು, ಅನಂತಪುರ, ಚಿತ್ತೂರ್, ಕಡಪ ಹಾಗೂ ಕರ್ನೂಲ್ ಈ ನಾಲ್ಕು ಜಿಲ್ಲೆಗಳನ್ನ ಒಳಗೊಂಡಿದೆ.)
ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿ, ಅಮರಾವತಿಯನ್ನು ಶಾಸಕಾಂಗ ರಾಜಧಾನಿ ಹಾಗೂ ಕರ್ನೂಲ್ ಅನ್ನು ಶಾಸಕಾಂಗ ರಾಜಧಾನಿಯಾಗಿ ಮಾಡಿ, ಆಂಧ್ರದ ಆಡಳಿತವನ್ನು ವಿಕೇಂದ್ರೀಕರಣ ಮಾಡುವ ವಿಧೇಯಕವನ್ನು ಸೋಮವಾರ ಸಿಎಂ ಜಗನ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇನ್ನು ರಾಜ್ಯದಲ್ಲಿ ರಾಜಧಾನಿ ಕುರಿತು ನಡೆಯುತ್ತಿರುವ ಬೆಳವಣಿಗೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಟಿಡಿಪಿ, ಇಂದು ನಡೆಯಲಿರುವ ವಿಧಾನಸಭೆ ಕಲಾಪಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.