ಕರ್ನಾಟಕ

karnataka

By

Published : Jan 19, 2020, 4:15 PM IST

ETV Bharat / bharat

ದೇವರನಾಡಲ್ಲಿ ಏಪ್ರಿಲ್​ ತಿಂಗಳ ಹಬ್ಬಗಳಿಗೆ ಬುಕ್ಕಿಂಗ್ ಕ್ಲೋಸ್‌​​​​​​: ಆದ್ರೂ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿಸುದ್ದಿ

ಕೇರಳದಲ್ಲಿ ಏಪ್ರಿಲ್​ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಬಂದ ಸಾವಿರಾರು ಮಂದಿ ಕೇರಳಿಗರು ತಮ್ಮ ರಾಜ್ಯದ ಹಬ್ಬಕ್ಕಾಗಿ ಹೊರಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್​ ತಿಂಗಳಲ್ಲಿ ಕೇರಳಕ್ಕೆ ಹೊರಡುವ ಎಲ್ಲಾ ರೈಲುಗಳ ಆಸನಗಳು ಮುಂಗಡವಾಗಿ ಬುಕ್ಕಿಂಗ್​ ಆಗಿವೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದ್ದು ರೈಲ್ವೇ ಇಲಾಖೆಯಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ.

special train to kerala for festivals in april
ಕೇರಳದ ಹಬ್ಬಗಳಿಗೆ ವಿಶೇಷ ರೈಲು ಸೇವೆ ಒದಗಿಸಲು ರೈಲ್ವೇ ಇಲಾಖೆ ನಿರ್ಧಾರ

ಬೆಂಗಳೂರು:ಏಪ್ರಿಲ್​ ತಿಂಗಳಲ್ಲಿ ಕೇರಳದ ವಿಷು ಹಬ್ಬ ಹಾಗೂ ತುಳುನಾಡಿನ ಯುಗಾದಿ ಹಬ್ಬಗಳು ಒಂದರ ಹಿಂದೆ ಒಂದರಂತೆ ಬರಲಿವೆ. ಹೀಗಾಗಿ ಬೆಂಗಳೂರಿನಿಂದ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಕೇರಳಕ್ಕೆ ಹೊರಡುವವರ ಸಂಖ್ಯೆ ಹೆಚ್ಚಿದೆ. ಮೂರು ತಿಂಗಳ ಮೊದಲೇ ಈ ಮಾರ್ಗದ ರೈಲುಗಳು ಮುಂಗಡವಾಗಿ ಭರ್ತಿಯಾಗಿದ್ದು ದುಬಾರಿ ಬೆಲೆ ತೆತ್ತು ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆಗೆ ಪ್ರಯಾಣಿಕರು ಸಿಲುಕಿದ್ದಾರೆ.‌

ಏಪ್ರಿಲ್ 10ರಂದು ಗುಡ್ ಫ್ರೈಡೆ, 11ರಂದು ಎರಡನೇ ಶನಿವಾರ, 12ಕ್ಕೆ ಈಸ್ಟರ್ ಮತ್ತು 14ರಂದು ವಿಷು ಹಬ್ಬವಿದೆ. ಇದರಿಂದಾಗಿ ಸರಣಿ ರಜೆ ಸಿಗಲಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕೇರಳ ಮೂಲದವರು ತಮ್ಮ ಊರುಗಳಿಗೆ ತೆರಳಲು ಈಗಾಗಲೇ ರೈಲು ಟಿಕೆಟ್ ಕಾಯ್ದಿರಿಸಿದ್ದಾರೆ. ಅಂದಾಜು 5 ಲಕ್ಷಕ್ಕೂ ಹೆಚ್ಚಿನ ಕೇರಳದ ಜನರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದು, ತಮ್ಮ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದಾರೆ.

ಡಿಸೆಂಬರ್​ನಲ್ಲೇ ಏಪ್ರಿಲ್ ತಿಂಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳುತ್ತಿದ್ದಂತೆ ಕೆಲವೇ ದಿನಗಳಲ್ಲಿ ಬೆಂಗಳೂರು-ಕೇರಳಕ್ಕೆ ತೆರಳುವ ಎಲ್ಲ ರೈಲುಗಳ ಟಿಕೆಟ್‌ಗಳು ಭರ್ತಿಯಾಗಿವೆ. ಮೂರು ತಿಂಗಳಿಗೂ ಮೊದಲೇ ವೇಟಿಂಗ್ ಲಿಸ್ಟ್ ಆರಂಭಗೊಂಡಿದೆ. ಗುಡ್ ಫ್ರೈಡೆ ಮುನ್ನಾದಿನವಾದ ಗುರುವಾರದಿಂದ ಏಪ್ರಿಲ್ 13ರವರೆಗೆ ಕೇರಳದ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಆಸನಗಳು ಭರ್ತಿಯಾಗಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ-ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವೋಲ್ವೋ ಬಸ್ಸುಗಳ ದರ ಅಂದಾಜು 1,100 ರೂಪಾಯಿ ಇದ್ದು, ಹಬ್ಬದ ಸಮಯದಲ್ಲಿ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ. ‌ಖಾಸಗಿ‌ ಬಸ್ಸುಗಳಲ್ಲಿ ಕನಿಷ್ಠ ದುಪ್ಪಟ್ಟು ದರ ನಿಗದಿಪಡಿಸುವ ಸಾಧ್ಯತೆಯಿದೆ.

ವಿಶೇಷ ರೈಲು ಸೇವೆಗೆ ರೈಲ್ವೆ ಇಲಾಖೆ ನಿರ್ಧಾರ:

ಮೂರು ತಿಂಗಳ ಮೊದಲೇ ಕೇರಳಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿದೆ. ಈ ಹಿನ್ನೆಲೆ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವುದರಿಂದ ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿಯಾಗಿ ವಿಶೇಷ ರೈಲು ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಬ್ಬಕ್ಕೂ ಒಂದು ತಿಂಗಳ ಮೊದಲು ವಿಶೇಷ ರೈಲು ಸೇವೆ ಕುರಿತು ಮಾಹಿತಿ ನೀಡುವುದಾಗಿ ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.

ABOUT THE AUTHOR

...view details