ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ 'ಆಕ್ಷೇಪಾರ್ಹ ಪೋಸ್ಟ್' ಮಾಡಿದ್ದಕ್ಕೆ ವ್ಯಕ್ತಿಯೋರ್ವನಿಗೆ ಶಿವ ಸೇನಾ ಕಾರ್ಯಕರ್ತರು ಥಳಿಸಿ, ಆತನ ತಲೆ ಬೋಳಿಸಿರುವ ಆರೋಪ ಕೇಳಿಬಂದಿದೆ.
ಡಿ. 19 ರಂದು ಜಾಮಿಯಾ ಮಿಲಿಯಾ ಘಟನೆಯನ್ನು ಜಲಿಯನ್ ವಾಲಾ ಬಾಗ್ ದುರಂತದ ಜೊತೆ ಸಿಎಂ ಹೋಲಿಕೆ ಮಾಡಿರುವುದು ತಪ್ಪು ಎಂದು ನಾನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದೆ. ಆ ಬಳಿಕ 25-30 ಮಂದಿ ಬಂದು ನನಗೆ ಹೊಡೆದು, ನನ್ನ ತಲೆ ಬೋಳಿಸಿದ್ದಾರೆ ಎಂದು ವಡಾಲಾ ನಿವಾಸಿ ಹಿರಾಮೈ ತಿವಾರಿ ಎಂಬವರು ಆರೋಪಿಸಿದ್ದಾರೆ.
ಘಟನೆ ಬಳಿಕ ದೂರು ನೀಡಲು ನಾನು ಪೊಲೀಸ್ ಠಾಣೆಗೆ ಹೋದೆ. ಮೊದಲು ಪೊಲೀಸರು ಈ ಕುರಿತು ವರದಿ ತಯಾರಿಸಿದರು. ಆದರೆ ಮತ್ತೊಂದು ಹೊಸ ಪತ್ರವನ್ನು ಟೈಪ್ ಮಾಡಿ ರಾಜಿಯಾಗುವಂತೆ ತಿಳಿಸಿದರು. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಿಬೇಕು ಎಂದು ಆಗ್ರಹಿಸುತ್ತೇನೆ ಎಂದು ಹಿರಾಮೈ ತಿವಾರಿ ಹೇಳಿದ್ದಾರೆ.
ದೆಹಲಿಯ ಜಾಮಿಯಾ ಮಿಲಿಯಾ ವಿವಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಏಟಿಗೆ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಕುರಿತು ಡಿ.17 ರಂದು ಪ್ರತಿಕ್ರಿಯೆ ನೀಡಿದ್ದ ಸಿಎಂ ಉದ್ಧವ್ ಠಾಕ್ರೆ, "ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದದ್ದು ಜಲಿಯನ್ ವಾಲಾ ಬಾಗ್ ದುರಂತದಂತಿದೆ. ವಿದ್ಯಾರ್ಥಿಗಳು 'ಯುವ ಬಾಂಬ್' ಇದ್ದಂತೆ. ವಿದ್ಯಾರ್ಥಿಗಳೊಂದಿಗೆ ಹೀಗೆ ಪೊಲೀಸರು ನಡೆದುಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ" ಎಂದು ಹೇಳಿದ್ದರು.