ಮುಂಬೈ:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮ ಆಗಸ್ಟ್ 5ರಂದು ನಡೆಯಲಿದ್ದು, ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಶಿಲಾನ್ಯಾಸ ನಡೆಸಲಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ವಿವಿಧ ಮೂಲೆಗಳಿಂದ ದೇಣಿಗೆ ಸಂಗ್ರಹವಾಗುತ್ತಿದ್ದು, ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ 1 ಕೋಟಿ ರೂ ದೇಣಿಗೆ ನೀಡಿದ್ದಾರೆ. ಶಿವಸೇನೆ ಪಕ್ಷದ ವತಿಯಿಂದ 1 ಕೋಟಿ ರೂ. ಹಣ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡುತ್ತಿರುವುದಾಗಿ ಅವರು ಹೇಳಿ ಟ್ವೀಟ್ ಮಾಡಿದ್ದಾರೆ.
ರಾಮಜನ್ಮ ಭೂಮಿ ನ್ಯಾಯಾಸ್ಗೆ ಬರೆದ ಪತ್ರ ಪೋಸ್ಟ್ ಮಾಡಿರುವ ಠಾಕ್ರೆ, ತಮ್ಮ ತಂದೆ ಬಾಳಾಸಾಹೇಬ್ ಅವರ ಕರೆಯ ಮೇರೆಗೆ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಿಸುವ ಆಂದೋಲನದಲ್ಲಿ ಸಾವಿರಾರು ಶಿವ ಸೈನಿಕರು ಭಾಗಿಯಾಗಿದ್ದರು. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರು ದೇವಾಲಯ ನಿರ್ಮಾಣಕ್ಕಾಗಿ 1 ಕೋಟಿ ರೂ ಹಣ ನೀಡುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದರು. ಅದರಂತೆ ಹಣ ಠೇವಣಿ ಮಾಡಲಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣದ ಟ್ರಸ್ಟ್ನ ಸದಸ್ಯರಾಗಿರುವ ಶಿವಸೇನೆ ಸಂಸದ ಅನಿಲ್ ದೇಸಾಯಿ ಕೂಡ ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಲ್ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಮೋಹನ್ ಭಾಗವತ್ ಸೇರಿದಂತೆ 50 ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಅದ್ಧೂರಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ.