ಪಟ್ಟನಂತಿಟ್ಟ(ಕೇರಳ):ಕೇರಳದಲ್ಲಿ ತನ್ನದೇ ಆದ ಅಂಚೆ ಸೀಲ್ ಮತ್ತು ಪಿನ್ ಕೋಡ್ ಹೊಂದಿರುವ ಅಂಚೆ ಕಚೇರಿ ಇದು. ಈ ಕಚೇರಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ತೆರೆಯುತ್ತದೆ. ಪಟ್ಟನಂತ್ತಿಟ್ಟದಲ್ಲಿರುವ ಈ ವಿಶೇಷ ಅಂಚೆ ಕಚೇರಿಯ ವಿಳಾಸದಾರ ಬೇರೆ ಯಾರೂ ಅಲ್ಲ, ಭಗವಾನ್ ಅಯ್ಯಪ್ಪ ಸ್ವಾಮಿ. ಆತನ ಸನ್ನಿಧಾನಕ್ಕೆಂದೇ ಇಲ್ಲೊಂದು ಪೋಸ್ಟ್ ಬಾಕ್ಸ್ ನಂ.689713ನ ಅಂಚೆ ಕಚೇರಿ ಇದೆ.
1963ರಲ್ಲಿ ಪ್ರಾರಂಭವಾದ ಶಬರಿಮಲೆ ಪೋಸ್ಟ್ ಆಫೀಸ್, ವರ್ಷದ ಮೂರು ತಿಂಗಳು ಮಾತ್ರ ಕಾರ್ಯನಿರ್ವಹಿಸುತ್ತದೆ. ಇಲ್ಲಿರುವ ಅಂಚೆ ಮುದ್ರೆಯು ಇತರ ಅಂಚೆ ಕಚೇರಿಗಳಿಗಿಂತ ವಿಶಿಷ್ಟ ಹಾಗೂ ಭಿನ್ನವಾಗಿದೆ. ಇಲ್ಲಿ ಬಳಸುವ ಮುದ್ರೆಯಲ್ಲಿ ಶಬರಿಮಲೆಯ ಅಯ್ಯಪ್ಪನ ವಿಗ್ರಹದ ಚಿತ್ರಣವಿದೆ ಹಾಗೂ ಅದರ ಮೇಲೆ ಉಬ್ಬಿರುವ 18 ಮೆಟ್ಟಿಲುಗಳ ಚಿತ್ರಣವಿದೆ.
ವರ್ಷಕ್ಕೆ ಮೂರು ತಿಂಗಳು ಮಾತ್ರ ತೆರೆಯುವ ಅಂಚೆ ಕಚೇರಿ ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ಭೇಟಿ ನೀಡುವ ಅನೇಕ ಯಾತ್ರಾರ್ಥಿಗಳು ತಮ್ಮ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ಅಯ್ಯಪ್ಪನ ಮುದ್ರೆಯ ಪೋಸ್ಟ್ಕಾರ್ಡ್ ಅನ್ನು ಸನ್ನಿಧಾನದ ಅಂಚೆ ಕಚೇರಿಯಿಂದ ಕಳುಹಿಸುತ್ತಾರೆ. ಅಷ್ಟೇ ಅಲ್ಲ, ಭಗವಾನ್ ಅಯ್ಯಪ್ಪನು ಅನೇಕ ಮೇಲ್ಗಳು, ಮದುವೆ ಆಹ್ವಾನ ಪತ್ರಿಕೆಗಳು, ಮನೆ ಒಕ್ಕಲು ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನೂ ಪಡೆಯುತ್ತಾನೆ. ಇನ್ನೂ ಕೆಲ ಭಕ್ತರಿಂದ ಧನ್ಯವಾದ ಪತ್ರಗಳು ಹಾಗೂ ಇನ್ನಷ್ಟು ಆಹ್ವಾನಗಳನ್ನು ಈ ಕಚೇರಿ ಪಡೆಯುತ್ತದೆ.
ಅಂಚೆ ಸೇವೆಗಳಷ್ಟೇ ಅಲ್ಲ, ಇಂದಿನ ಅಗತ್ಯತೆಗಳನ್ನು ಪೂರೈಸಲು ತ್ವರಿತ ಹಣದ ಮನಿ ಆರ್ಡರ್, ಮೊಬೈಲ್ ರೀಚಾರ್ಜ್ ಕಳುಹಿಸುವ ಸೌಲಭ್ಯಗಳೂ ಇಲ್ಲಿವೆ. ಅಯ್ಯಪ್ಪ ಚಿತ್ರಗಳೊಂದಿಗೆ ‘ಮೈ ಸ್ಟ್ಯಾಂಪ್’ ಸಹ ಶಬರಿಮಲೆ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದ ಭಕ್ತರಿಗೆ ಅಂಚೆ ಇಲಾಖೆಯಿಂದ, ಈ ಅಂಚೆ ಕಚೇರಿಯಲ್ಲಿ ವಿಶೇಷ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಭಕ್ತರು ಭಾರತದ ಯಾವುದೇ ಹತ್ತಿರದ ಅಂಚೆ ಕಚೇರಿಯಲ್ಲಿ ಪ್ರಸಾದಂ ಮೊತ್ತವನ್ನು ಪಾವತಿಸಿ ಭಗವಾನ್ ಅಯ್ಯಪ್ಪನ ಸನ್ನಿಧಾನದಿಂದ ಪ್ರಸಾದವನ್ನು ಪಡೆಯಬಹುದು.
ಮಂಡಲ ಪೂಜೆ ಹಾಗೂ ಮಕರವಿಲಕ್ಕು(ಮಕರ ಸಂಕ್ರಮಣ ಅವಧಿ) ತೀರ್ಥಯಾತ್ರೆಯ ಅವಧಿಯಲ್ಲಿ ಮಾತ್ರ ಶಬರಿಮಲ ಅಂಚೆ ಕಚೇರಿ ಕಾರ್ಯಾಚರಿಸುತ್ತದೆ. ಯಾತ್ರಾ ಅವಧಿ ಮುಕ್ತಾಯಗೊಳ್ಳುತ್ತಲೇ ಪೋಸ್ಟ್ ಆಫೀಸ್ ಸಹ ಸ್ಥಗಿತಗೊಳ್ಳುತ್ತದೆ. ಇದನ್ನು ಅನುಸರಿಸಿ, ಮುಂದಿನ ವರ್ಷದ ವಾರ್ಷಿಕ ತೀರ್ಥಯಾತ್ರೆಯ ಅವಧಿಯವರೆಗೆ ಇಲ್ಲಿನ ರನ್ನಿ ಅಂಚೆ ನಿರೀಕ್ಷಕರ ಕಚೇರಿಯಲ್ಲಿ ಅಯ್ಯಪ್ಪ ಚಿತ್ರದ ವಿಶೇಷ ಮುದ್ರೆಯನ್ನು ಸುರಕ್ಷಿತವಾಗಿಡಲಾಗುತ್ತದೆ.