ಹಿಸುವಾ (ಬಿಹಾರ):ಲಡಾಖ್ನಲ್ಲಿ ಭಾರತದ ಭೂಪ್ರದೇಶಕ್ಕೆ ಚೀನಾ ಸೈನಿಕರು ನುಸುಳಿಲ್ಲ, ನಮ್ಮ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತೀಯರ ಯೋಧರಿಗೆ ತೀವ್ರ ನೋವನ್ನುಂಟುಮಾಡಿದ್ದಾರೆ ಎಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿಳಿರುವ ರಾಹುಲ್ ಗಾಂಧಿ, ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಜೊತೆ ಸೇರಿ 'ಬದ್ಲಾ ಸಂಕಲ್ಪ್' (ಬದಲಾವಣೆಯ ಸಂಕಲ್ಪ) ಎಂಬ ಜಂಟಿ ರ್ಯಾಲಿ ಕೈಗೊಂಡಿದ್ದಾರೆ. ಈ ವೇಳೆ ಬಿಹಾರ ಜನತೆಯನ್ನುದ್ದೇಶಿ ಮಾತನಾಡಿದ ರಾಗಾ, ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದನ್ನು ಸ್ಮರಿಸಿದರು.
ದೇಶದ 1,200 ಕಿ.ಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. ನಮ್ಮ ಯೋಧರು ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪಿಎಂ ಮೋದಿ ಮಾತ್ರ ಚೀನಾ ಸೈನಿಕರು ಭಾರತಕ್ಕೆ ನುಸುಳಿಲ್ಲ ಎಂದು ಹೇಳಿಕೆ ನೀಡಿ ಭಾರತೀಯರ ಯೋಧರಿಗೆ ತೀವ್ರ ನೋವನ್ನುಂಟುಮಾಡಿದ್ದಾರೆ. ನಮ್ಮ ಜಾಗವನ್ನು ಆಕ್ರಮಿಸಿಕೊಂಡು ಕುಳಿತಿರುವ ಚೀನಾ ಸೈನಿಕರನ್ನು ಯಾವಾಗ ಹೊರ ಹಾಕುತ್ತೀರಾ? ಎಂದು ರಾಹುಲ್ ಗಾಂಧಿ ಮೋದಿಗೆ ಪ್ರಶ್ನಿಸಿದ್ದಾರೆ.