ಚಂಡೀಗಢ: ಪಂಜಾಬ್ನಲ್ಲಿ ನಡೆದ ನಕಲಿ ಮದ್ಯ ದುರಂತದಿಂದ ಈಗಾಗಲೇ 98 ಜನ ಸಾವನ್ನಪ್ಪಿದ್ದು, ನಕಲಿ ಮದ್ಯ ಸೇವಿಸಿ ಬದುಕುಳಿದವರು ನರಕಯಾತನೆ ಅನುಭವಿಸುತ್ತಿದ್ದಾರೆ.
ಕಳೆದ ಬುಧವಾರ ಈ ನಕಲಿ ಮದ್ಯ ಸೇವನೆ ದುರಂತ ಬೆಳಕಿಗೆ ಬಂದಿದ್ದು, ಅಂದಿನಿಂದ ಇಂದಿನವರೆಗೆ 98 ಜನ ಸಾವನ್ನಪ್ಪಿದ್ದಾರೆ. ಪಂಜಾಬ್ನ ತಾರ್ನ್ ತರಣ್ನಲ್ಲಿ 75, ಅಮೃತಸರದಲ್ಲಿ 12 ಮತ್ತು ಗುರುದಾಸ್ಪುರದ ಬಟಾಲಾದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಕ್ಕೇ ಈ ದುರಂತದ ಕರಿಛಾಯೆ ಮುಗಿದಿಲ್ಲ. ಈ ನಕಲಿ ಮದ್ಯ ಸೇವಿಸಿ ಬದುಕುಳಿದವರು ಬದುಕು ಅಯೋಮಯ ಎಂಬಾಂತಾಗಿದೆ.
"ನಾನು ನಕಲಿ ಮದ್ಯ ಸೇವಿಸಿದಾಗಿನಿಂದಲೂ ಸರಿಯಾಗಿ ನೋಡಲು ಸಾಧ್ಯವಾಗುತ್ತಿಲ್ಲ. ನನ್ನ ದೃಷ್ಟಿ ಮಂಜಾಗಿದೆ" ಎಂದು ಈ ದುರಂತದಿಂದ ಬದುಕುಳಿದವರಲ್ಲಿ ಒಬ್ಬರಾದ ತಿಲಕ್ ರಾಜ್ ಹೇಳಿದ್ದಾರೆ.
ಬಟಾಲಾ ಮುನ್ಸಿಪಲ್ ಕಾರ್ಪೋರೇಶನ್ನ ಗುತ್ತಿಗೆ ಉದ್ಯೋಗಿ ತಿಲಕ್ ರಾಜ್, ಬಟಾಲಾದ ಹಾಥಿ ಗೇಟ್ ಪ್ರದೇಶದ ಹೊರಗೆ ತ್ರಿವೇಣಿ ಚೌಹಾಣ್ ಮತ್ತು ದರ್ಶನ ರಾಣಿ ಎಂಬವರಿಂದ 60 ರೂ. ಕೊಟ್ಟು ಮದ್ಯ ಖರೀದಿಸಿದ್ದರಂತೆ. ಈ ಇಬ್ಬರೂ ಆರೋಪಿಗಳು ಈಗಾಗಲೇ ಪೊಲೀಸರ ಅತಿಥಿಯಾಗಿದ್ದಾರೆ.
ಈಗ ನಾನ್ನ ಆರೋಗ್ಯ ಸ್ವಲ್ಪ ಸುಧಾರಿಸಿದೆ. ಆದರೆ ನನ್ನ ದೃಷ್ಟಿ ಸುಧಾರಿಸಿಲ್ಲ ಎಂದು ತಿಲಕ್ ರಾಜ್ ಹೇಳಿದ್ದಾರೆ.
ದುರಂತದಿಂದ ಬದುಕುಳಿದ ಮತ್ತೊಬ್ಬ ವ್ಯಕ್ತಿ ಅಜಯ್ ಕುಮಾರ್, ನಕಲಿ ಮದ್ಯ ಸೇವಿಸಿದ ನಂತರ ನನ್ನ ಶರೀರ ನಡುಗಲು ಪ್ರಾರಂಭಿಸಿದೆ ಎಂದು ಹೇಳುತ್ತಾರೆ. ಇನ್ನೊಂದೆಡೆ ನಾನು ಇನ್ನೂ ನಿತ್ರಾಣನಾಗಿದ್ದೇನೆ ಎಂದು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವ 32 ವರ್ಷದ ಕುಮಾರ್ ಹೇಳುತ್ತಾರೆ.
ಹಾಥಿ ಗೇಟ್ ಪ್ರದೇಶದಲ್ಲಿ ಅಕ್ರಮ ಮದ್ಯವನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಅನೇಕ ಬಾರಿ ಬಟಾಲಾ ನಿವಾಸಿಗಳು ದೂರು ನೀಡಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 98 ಜನರು ಸಾವನ್ನಪ್ಪಿದ್ದು, ಬದುಕುಳಿದವರು ಜೀವನಪರ್ಯಂತ ನರಕಯಾತನೆ ಅನುಭವಿಸುವಂತಾಗಿದೆ.