ಕರ್ನಾಟಕ

karnataka

By

Published : May 14, 2020, 6:34 PM IST

ETV Bharat / bharat

ಕೊರೊನಾ ವೈರಸ್‌ ಹಾವಳಿ ನಿಂತ ಬಳಿಕವೇ ಪರಿಸ್ಥಿತಿ ಸಹಜ ಸ್ಥಿತಿಯತ್ತ

ಲಾಕ್‌ಡೌನ್‌ ಪರಿಸ್ಥಿತಿಯಿಂದ ಇಡೀ ವಿಶ್ವ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹೆದರಿಕೆಯ ಮಧ್ಯೆಯೇ ಜನರು ತಮ್ಮ ನಿತ್ಯ ಜೀವನ ನಡೆಸಲು ಸಿದ್ಧವಾಗುತ್ತಿದ್ದಾರೆ.

post-coronavirus-the-new-normal
ಕೊರೊನಾ ವೈರಸ್‌ ಹೋದ ನಂತರ ಪರಿಸ್ಥಿತಿ ಸಹಜ

ಸುರಂಗದ ಕೊನೆಯಲ್ಲೊಂದು ಸಣ್ಣ ಬೆಳಕಿನ ಕಿರಣ ಕಂಡುಬಂದಿದೆ. ಲಾಕ್‌ಡೌನ್‌ ಪರಿಸ್ಥಿತಿಯಿಂದ ಇಡೀ ವಿಶ್ವ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹೆದರಿಕೆಯ ಮಧ್ಯೆಯೇ ಜನರು ತಮ್ಮ ನಿತ್ಯ ಜೀವನ ನಡೆಸಲು ಸಿದ್ಧವಾಗುತ್ತಿದ್ದಾರೆ. ಕೆಲವು ದೇಶಗಳಲ್ಲಿ ಮಕ್ಕಳು ಶಾಲೆಗೆ ಹೋಗಲೂ ಸಿದ್ಧವಾಗುತ್ತಿದ್ದಾರೆ. ವಿಶ್ವವನ್ನು ಕೊರೊನಾ ವೈರಸ್ ಇನ್ನೂ ಬಾಧಿಸುತ್ತಿದ್ದರೂ ಸರ್ಕಾರಗಳು ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಪ್ರಯತ್ನ ನಡೆಸಿವೆ. ಆದರೆ, ಲಾಕ್‌ಡೌನ್‌ ನಂತರದ ಸಹಜ ಸ್ಥಿತಿ ಮೊದಲಿನಂತೆ ಇರುವುದಿಲ್ಲ ಎಂಬುದಂತೂ ಸತ್ಯ. ಕೊರೊನಾ ವೈರಸ್‌ನಿಂದಾಗಿ ಮಾಸ್ಕ್ ಧರಿಸುವುದು ಅಗತ್ಯ ಎಂಬಂತಾಗಿದೆ. ಕೈಕುಲುಕುವುದು ಮತ್ತು ಹತ್ತಿರ ಕುಳಿತುಕೊಳ್ಳುವ ಸಂಪ್ರದಾಯವೆಲ್ಲ ಮರೆಯಾಗಲಿವೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರವನ್ನು ನಾವು ಕಾಯ್ದುಕೊಳ್ಳಲೇಬೇಕಿದೆ.

ಸಾಂಕ್ರಾಮಿಕ ರೋಗ ಹರಡುವ ಪ್ರಮಾಣ ಮತ್ತು ಮರಣ ಪ್ರಮಾಣದ ಮಧ್ಯೆ ಅಪಾರ ಅಂತರ ಇರುವುದರಿಂದಾಗಿ ರೋಗ ನಿಯಂತ್ರಣದಲ್ಲಿದೆ ಎಂದು ಜನರು ಭಾವಿಸಿದ್ದಾರೆ. ಕೋವಿಡ್‌ 19 ವಿಚಾರದಲ್ಲಿ ಇನ್ನೂ ಈ ಯಾವ ಸೂಚಕಗಳನ್ನೂ ನಾವು ಪರಿಶೀಲಿಸಿಲ್ಲ. ಇದಕ್ಕೆ ಔಷಧವಿಲ್ಲ, ಲಸಿಕೆಯ ನಿರೀಕ್ಷೆಯೂ ಇಲ್ಲ. ರೋಗ ಹರಡುವುದನ್ನು ತಡೆಯಲು ಶಕ್ತವಾಗಿರುವ ದೇಶಗಳು ಈಗಾಗಲೇ ಕೊರೊನಾವೈರಸ್‌ಗಿಂತ ಹಸಿವು ಹೆಚ್ಚು ಅಪಾಯಕಾರಿ ಎಂಬುದನ್ನು ಅರಿತಿವೆ. ಕೊರೊನಾ ವೈರಸ್‌ನೊಂದಿಗೇ ಜೀವಿಸುವುದನ್ನು ನಾವು ಕಲಿಯಬೇಕಿದೆ ಎಂದು ವಿಶ್ವದ ನಾಯಕರು ಅರ್ಥ ಮಾಡಿಕೊಂಡಿದ್ದಾರೆ. ಕಂಟೇನ್ಮೆಂಟ್‌ ಕ್ರಮಗಳು ಕೇವಲ ರೆಡ್‌ ಝೋನ್‌ಗಳಿಗೆ ಸೀಮಿತವಾಗಿವೆ. ಭಾರತದಂತಹ ದೇಶಗಳಲ್ಲಿ ರೋಗದ ಬಗ್ಗೆ ಅರಿವು ಮತ್ತು ವೈದ್ಯಕೀಯ ಸೌಲಭ್ಯಗಳ ಹೆಚ್ಚಳದಿಂದಾಗಿ ಜನರಲ್ಲಿ ವಿಶ್ವಾಸ ಮೂಡಿದೆ.

ವಿಶ್ವದೆಲ್ಲಡೆ ಕಚೇರಿಗಳು ಹೊಸ ನಿಯಮಗಳನ್ನು ಅಳವಡಿಸಿಕೊಂಡು ತೆರೆಯಲು ಸಿದ್ಧವಾಗುತ್ತಿವೆ. ಸಾಮಾನ್ಯವಾಗಿ ಕಚೇರಿಗಳಲ್ಲಿ ಮೂರು ಶಿಫ್ಟ್‌ಗಳಲ್ಲಿ ಉದ್ಯೋಗಿಗಳು ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸಾಫ್ಟ್‌ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಹೆಚ್ಚಿಸುವ ಚಿಂತನೆ ಮಾಡಿವೆ. ಕೆಲವು ದೇಶಗಳಲ್ಲಿ ಶಾಲೆಗಳು ತೆರೆಯುತ್ತಿವೆ. ಆದರೆ, ಸಾಮಾಜಿಕ ಅಂತರ, ವೈಯಕ್ತಿಕ ನೈರ್ಮಲ್ಯ ಮತ್ತು ಸ್ಯಾನಿಟೈಸರ್‌ ಹೊಂದಿರುವ ತರಗತಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆರ್ಥಿಕತೆ ಪುನಃಶ್ಚೇತನಕ್ಕೂ ಶಾಲೆ ತೆರೆಯುವುದಕ್ಕೂ ಸಮೀಪದ ಸಂಬಂಧವಿದೆ. ಶಾಲೆಗಳು ತೆರೆಯದ ಹೊರತು ಪಾಲಕರು ಕಚೇರಿಗೆ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜರ್ಮನಿ ಮತ್ತು ಡೆನ್ಮಾರ್ಕ್‌ ದೇಶಗಳು ಶಾಲೆಗಳನ್ನು ಮತ್ತು ಡೇಕೇರ್‌ ಸೆಂಟರ್‌ಗಳನ್ನು ತೆರೆಯಲು ನಿರ್ಧರಿಸಿವೆ. ಸ್ವೀಡನ್‌ನಲ್ಲಿ ಶಾಲೆಗಳನ್ನು ಮುಚ್ಚಲೇ ಇಲ್ಲ. ಆದರೆ, ಇಡೀ ದೇಶದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

ಆಸ್ಟ್ರಿಯಾದಲ್ಲಿ ಈ ವಾರ ಶಾಲೆಗಳು ತೆರೆಯಲಿವೆ. ಪ್ರತಿ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ವಿಭಜಿಸಲಾಗುತ್ತದೆ. ಎ ಗ್ರೂಪ್‌ನ ವಿದ್ಯಾರ್ಥಿಗಳು ಸೋಮವಾರದಿಂದ ಬುಧವಾರದರೆಗೆ ಮತ್ತು ಬಿ ಗ್ರೂಪ್‌ನ ವಿದ್ಯಾರ್ಥಿಗಳು ಗುರುವಾರದಿಂದ ಶುಕ್ರವಾರದವರೆಗೆ ಶಾಲೆಗೆ ಹಾಜರಾಗುತ್ತಾರೆ. ಮನೆಯಲ್ಲೇ ಇರುವವರು ಆನ್‌ಲೈನ್ ಕ್ಲಾಸ್‌ಗಳನ್ನು ರೆಫರ್ ಮಾಡಬಹುದು. 40 ಜನರಿಗೆ ಸಿದ್ಧಪಡಿಸಿದ ಕ್ಲಾಸ್‌ರೂಮ್‌ನಲ್ಲಿ 20 ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ಹಲವು ದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜರ್ಮನಿಯ ನ್ಯೂಸ್ಟ್ರೆಲಿಟ್ಜ್‌ನಲ್ಲಿನ ಒಂದು ಹೈ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ವಯಂ ಪರೀಕ್ಷೆಯ ಕಿಟ್‌ಗಳನ್ನು ವಿತರಿಸುತ್ತಿದೆ. ಭಾರತದಲ್ಲಿ ಈಗ ಬೇಸಿಗೆಯಾಗಿದ್ದುದರಿಂದ, ಬಹುತೇಕ ಶಾಲೆಗಳಲ್ಲಿ ಬೇಸಿಗೆ ರಜೆ ಇತ್ತು. ಹತ್ತನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಹಲವು ವಿಶ್ವವಿದ್ಯಾಲಯಗಳು ಈಗಾಗಲೇ ಆನ್‌ಲೈನ್ ಮೂಲಕ ಉಪನ್ಯಾಸಗಳನ್ನು ಕಳುಹಿಸುತ್ತಿವೆ.

ಹಬ್ಬಗಳು ಅಥವಾ ಕಾರ್ಯಕ್ರಮಗಳಿಗೆ ಎರಡು ಕುಟುಂಬಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಜರ್ಮನಿ ನಿಗದಿಪಡಿಸಿದೆ. ನ್ಯೂಜಿಲ್ಯಾಂಡ್​​ ಮತ್ತು ಆಸ್ಟ್ರೇಲಿಯಾ ಕೂಡ ಇದೇ ನೀತಿಯನ್ನು ಜಾರಿಗೆ ತಂದಿದೆ. ಸೋಮವಾರ, ಫ್ರಾನ್ಸ್‌ನಲ್ಲಿ ಲಾಕ್‌ಡೌನ್‌ ಸಡಿಲಿಸಲಾಗಿದೆ. ಸುಮಾರು ಎರಡು ತಿಂಗಳುಗಳ ನಂತರ ಫ್ರೆಂಚರು ಮನೆಯಿಂದ ಹೊರಗೆ ಬರಲು ಅನುಮತಿ ಪಡೆಯುತ್ತಿದ್ದಾರೆ. ಪ್ಯಾರಿಸ್ ಮೆಟ್ರೋ ತನ್ನ ಆಸನ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡುತ್ತಿದೆ. ಬಹುತೇಕ ಅರ್ಧದಷ್ಟು ಸ್ಪೇನ್‌ನಲ್ಲಿ ಲಾಕ್‌ಡೌನ್‌ ಸಡಿಲಿಸಲಾಗಿದೆ. ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರಿಯಾದ ವಿಯೆನ್ನಾದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಪ್ರತಿ ಪ್ರವೇಶದಲ್ಲೂ ಒಂದು ಗೇಟ್ ಇದೆ. ಒಂದು ಪಾಥ್‌ಗೆ ಒಂದು ಬಾರಿ ಒಬ್ಬ ವ್ಯಕ್ತಿಯನ್ನು ಮಾತ್ರ ಬಿಡಲಾಗುತ್ತದೆ. ಇತರರು ತಮ್ಮ ಸರದಿ ಬರುವವರೆಗೆ ಕಾಯಬೇಕು.

ಲಾಕ್‌ಡೌನ್‌ ತೆರೆಯುವುದಕ್ಕೂ ಮೊದಲು ನಾಲ್ಕು ಅಂಶಗಳನ್ನು ಗಮನಿಸಬೇಕು ಎಂಬುದಾಗಿ ಪರಿಣಿತರು ಸಲಹೆ ನೀಡುತ್ತಾರೆ.

1. ಪ್ರತಿ ಕೊರೊನಾ ರೋಗಿಗೂ ವೈದ್ಯಕೀಯ ಸೇವೆ ಒದಗಿಸುವ ಸಾಮರ್ಥ್ಯ.

2. ಲಕ್ಷಣ ಹೊಂದಿದ ಪ್ರತಿ ವ್ಯಕ್ತಿಯನ್ನೂ ಪರೀಕ್ಷಿಸಲು ಕಿಟ್‌ಗಳ ಲಭ್ಯತೆ.

3. ಪ್ರತಿ ರೋಗಿ ಮತ್ತು ಅವರ ಸಂಪರ್ಕಗಳನ್ನು ಪತ್ತೆ ಮತ್ತು ಗುರುತು ಮಾಡಲು ಸಂಪನ್ಮೂಲ.

4. 14 ದಿನಗಳವರೆಗೆ ಕೊರೊನಾವೈರಸ್‌ ಕೇಸ್‌ಗಳನ್ನು ಟ್ರ್ಯಾಕ್ ಮಾಡುವುದು.

ಮಂಗಳವಾರದಿಂದ ನವದೆಹಲಿಯಿಂದ ವಿವಿಧ ರಾಜ್ಯಗಳ ರಾಜಧಾನಿಗೆ 15 ರೈಲುಗಳು ಓಡಾಡಲು ಆರಂಭಿಸಿವೆ. ಸೀಮಿತ ಸಂಖ್ಯೆಯ ಬಸ್‌ಗಳು ಮತ್ತು ಟ್ಯಾಕ್ಸಿಗಳು ಓಡಾಡಲು ಅವಕಾಶ ನೀಡುವ ಸಾಧ್ಯತೆಯೂ ಇದೆ. ಟ್ರಾಫಿಕ್‌, ಜನದಟ್ಟಣೆಯ ಬಸ್‌ಗಳು ಮತ್ತು ಟ್ರೇನ್‌ಗಳು, ಟ್ಯಾಕ್ಸಿಗಳು ಮತ್ತು ಅಟೋಗಳು ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗುವುದು ಕೊರೊನಾಗೂ ಮೊದಲು ಸಾಮಾನ್ಯವಾಗಿತ್ತು.

ಆದರೆ ಈಗ, 40 ಸೀಟ್‌ನ ಬಸ್‌ನಲ್ಲಿ ಕೇವಲ 20 ಜನರು ಪ್ರಯಾಣಿಸಬಹುದು. ದೇಶದ ಹಲವು ರಾಜ್ಯಗಳಲ್ಲಿನ ರಸ್ತೆ ಸಾರಿಗೆ ಸಂಸ್ಥೆಗಳು ಇಂತಹ ಹಲವು ನಿಯಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿವೆ.

ವಾರ್ಷಿಕವಾಗಿ, 4.5 ಕೋಟಿ ಭಾರತೀಯರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ ಎಂದು ಊಹಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಕೆಲವರು ಕಾಲ್ನಡಿಗೆಯಲ್ಲೇ ತಮ್ಮ ಊರಿಗೆ ಹೊರಟಿದ್ದಾರೆ. ಈ ಕೆಲಸಗಾರರನ್ನು ಈಗ ವಿಶೇಷ ಟ್ರೈನ್​​ ಮತ್ತು ಬಸ್‌ಗಳ ಮೂಲಕ ಅವರ ಊರುಗಳಿಗೆ ಕಳುಹಿಸಲಾಗುತ್ತಿದೆ. ವಿಶೇಷ ವಿಮಾನಗಳನ್ನು ಬಳಸಿಕೊಂಡು ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್​​ ಕರೆಸಿಕೊಳ್ಳಲಾಗುತ್ತಿದೆ.

ಶಾಂಘೈನ ಡಿಸ್ನೆಲ್ಯಾಂಡ್ ಸೋಮವಾರದಿಂದ ತೆರೆದಿದೆ. ಸಂದರ್ಶಕರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ ಎಂದು ಆಡಳಿತ ಮಂಡಳಿ ಸೂಚಿಸಿದೆ. ಪ್ರತಿ ದಿನ 24 ಸಾವಿರಕ್ಕಿಂತ ಹೆಚ್ಚು ಜನರು ಭೇಟಿ ನೀಡುವಂತಿಲ್ಲ ಎಂದು ಚೀನಾ ಸರ್ಕಾರ ನಿರ್ಬಂಧ ವಿಧಿಸಿದೆ. ಅಂದರೆ ಮೂರನೇ ಒಂದರಷ್ಟು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಲಾಕ್‌ಡೌನ್ ನಂತರ ಇದೇ ಮೊದಲ ಬಾರಿಗೆ ಡಿಸ್ನೆಲ್ಯಾಂಡ್ ತೆರೆದಿದೆ. ಇದರಿಂದಾಗಿ ಡಿಸ್ನೆ ಷೇರು ಮೌಲ್ಯ ಶೇ.8 ರಷ್ಟು ಏರಿಕೆ ಕಂಡಿದೆ.

ABOUT THE AUTHOR

...view details