ನವದೆಹಲಿ:ಚೀನಾ ವಿಚಾರದಲ್ಲಿ ತಪ್ಪು ಮಾಹಿತಿ ನೀಡುವುದು ಭಾರತೀಯ ಸೈನಿಕರು ಮಾಡಿದ ತ್ಯಾಗಕ್ಕೆ ಮಾಡಿದ ದ್ರೋಹ ಎಂದು ಮಾಜಿ ಪಿಎಂ, ಮನಮೋಹನ್ ಸಿಂಗ್ ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಏರ್ಪಟ್ಟಿದೆ.
ಮನಮೋಹನ್ ಸಿಂಗ್ ಹೇಳಿಕೆ ಬೆನ್ನಲ್ಲೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಆತ್ಮೀಯ ಡಾ. ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷ, ದಯವಿಟ್ಟು ನಮ್ಮ ಸೈನಿಕರನ್ನು ಪದೇ ಪದೆ ಅವಮಾನಿಸುವುದನ್ನು ನಿಲ್ಲಿಸಿ. ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾಗಲೂ ಅವರ ಶೌರ್ಯ ಪ್ರಶ್ನಿಸಿ ಹೀಗೆ ಮಾಡಿದ್ದೀರಿ. ರಾಷ್ಟ್ರೀಯ ಏಕತೆಯ ನಿಜವಾದ ಅರ್ಥವನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದಿದ್ದಾರೆ.
ಡಾ. ಮನಮೋಹನ್ ಸಿಂಗ್ ಅದೇ ಪಕ್ಷಕ್ಕೆ ಸೇರಿದವರು, ಅಸಹಾಯಕತೆಯಿಂದ 43,000 ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಒಪ್ಪಿಸಿದರು. ಯುಪಿಎ ಸರ್ಕಾರ ಯಾವುದೇ ಹೋರಾಟವಿಲ್ಲದೇ ಶರಣಾಗತಿಯನ್ನು ಕಂಡಿತು ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ನಡ್ಡಾ ಅವರ ಹೇಳಿಕೆಯ ನಂತರ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಬಿಜೆಪಿ ಮುಖ್ಯಸ್ಥರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಆತ್ಮೀಯ ನಡ್ಡಾ ಮತ್ತು ಬಿಜೆಪಿ, ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯ ಬಗ್ಗೆ ರಾಜಿ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಇದು ನಮ್ಮ ಸಶಸ್ತ್ರ ಪಡೆಗಳಿಗೆ ಮತ್ತು ನಮ್ಮ 20 ಹುತಾತ್ಮ ಯೋಧರಿಗೆ ಮಾಡುವ ದೊಡ್ಡ ಅಪಚಾರವಾಗಿದೆ. ಬಾಗಬೇಡಿ, ಈ ಸಂದರ್ಭದಲ್ಲಿ ಎದ್ದೇಳುವ ಅವಶ್ಯಕತೆ ಇದೆ, ನಾವು ಸರ್ಕಾರಕ್ಕೆ ಎಲ್ಲ ಬೆಂಬಲವನ್ನು ನೀಡುತ್ತೇವೆ' ಎಂದಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಯ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. 'ದೇಶದ ಹಿತದೃಷ್ಟಿಯಿಂದ ಸರ್ಕಾರ ಅವರ ಸಲಹೆಯನ್ನು ಸ್ವೀಕರಿಸುವ ಭರವಸೆ ಇದೆ' ಎಂದಿದ್ದರು.