ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿಗೊಳಗಾಗಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದೀಗ ಚೇತರಿಸಿಕೊಂಡಿದ್ದು, ಡೆಡ್ಲಿ ವೈರಸ್ ವಿರುದ್ಧ ಯಾವ ರೀತಿಯಾಗಿ ಗೆಲುವು ಸಾಧಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಿಯಮಿತ ವ್ಯಾಯಾಮ, ಪ್ರೋಟೀನ್ ಭರಿತ ಆಹಾರ ಸೇವನೆ, ಜಂಕ್ ಫುಡ್ ತಪ್ಪಿಸುವುದು ಮತ್ತು ಕೋವಿಡ್ ತಡೆಗಟ್ಟುವ ಪ್ರೋಟೋಕಾಲ್ ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಬಹುದು ಎಂದು ಅವರು ತಿಳಿಸಿದ್ದು, ದೇಶದ ಪ್ರತಿಯೊಬ್ಬರು ಇದರ ಪಾಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಫೇಸ್ಬುಕ್ನಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಗಾದ ಅನುಭವ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 19ರಂದು ಕೋವಿಡ್ ಪರೀಕ್ಷೆಗೊಳಗಾಗಿದ್ದ 71 ವರ್ಷದ ವೆಂಕಯ್ಯ ನಾಯ್ಡು ಅವರು, ನಿನ್ನೆಯವರೆಗೆ ಕ್ವಾರಂಟೈನ್ಗೊಳಗಾಗಿದ್ದರು. ಈ ಸಮಯದಲ್ಲಿ ವಿವಿಧ ವಿಷಯಗಳ ಬಗ್ಗೆ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಲೇಖನ ಓದುವ ಮೂಲಕ ಉತ್ತಮ ಸಮಯ ಕಳೆಯಲು ಸಾಧ್ಯವಾಯಿತು ಎಂದಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ವೀರರ ತ್ಯಾಗ, ಶೌರ್ಯದ ಬಗ್ಗೆ ನಾನು ಪ್ರತಿ ವಾರ ಎರಡು ಫೇಸ್ಬುಕ್ ಪೋಸ್ಟ್ ಬರೆಯುತ್ತಿದ್ದೇನೆ ಎಂದಿದ್ದಾರೆ.
ಸೆಪ್ಟೆಂಬರ್ 19ರಂದು ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರನ್ನು ಹೋಂ ಕ್ವಾರಂಟೈನ್ ನಲ್ಲಿರಿಸಿ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಇದೀಗ ಅವರ ವರದಿ ನೆಗೆಟಿವ್ ಬಂದಿದೆ.